ಬಂಟ್ವಾಳ

ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ವಿಶ್ವಸಂತ: ಡಾ. ಸದಾನಂದ ಪೆರ್ಲ

#ಬಂಟ್ವಾಳನ್ಯೂಸ್ Editor: Harish Mambady

ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಪರಿಕಲ್ಪನೆಯನ್ನು ಅಂದೇ ನೀಡಿದ್ದ, ಪರಿವರ್ತನೆಯ ಹರಿಕಾರ, ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಸಮಸಮಾಜವನ್ನು ಕಟ್ಟಲು ಪ್ರೇರಣೆ ನೀಡಿದ ಬ್ರಹ್ಮಶ್ರೀ ನಾರಾಯಣಗುರು ವಿಶ್ವಸಂತ ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.

ಜಾಹೀರಾತು

ಭಾನುವಾರ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 164ನೇ ಜನ್ಮದಿನಾಚರಣೆ ಸಂದರ್ಭ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಕೇವಲ ಭಾರತಕ್ಕಷ್ಟೇ ಆದರ್ಶರಲ್ಲ, ವಿಶ್ವಕ್ಕೆ ಸಮಾನತೆ ಹಾಗೂ ಶಿಕ್ಷಣದ ದಾರಿಯನ್ನು ತೋರಿದವರು. ಗುರುಗಳ ತತ್ವ ಆದರ್ಶಗಳನ್ನು ಗಾಯತ್ರಿ ಮಂತ್ರದಂತೆ ನಮ್ಮೊಳಗೆ ಅಳವಡಿಸೋಣ ಎಂದ ಅವರು, ಬಿಲ್ಲವ ಸಮುದಾಯ ತಾವು ಹಿಂದುಳಿದವರು ಎಂಬ ಮನೋಭಾವ ಬಿಟ್ಟು, ಗುರುಗಳು ತೋರಿದ ಹಾದಿಯಲ್ಲಿ ಪರಿವರ್ತನೆಯತ್ತ ಮುಖಮಾಡಬೇಕಿದೆ. ನಾರಾಯಣ ಗುರುಗಳು ಓರ್ವ ಸಂತನಾಗಿ ನಮ್ಮ ಮುಂದೆ ಕಂಡರೂ ಅವರ ಚಿಂತನೆಗಳನ್ನು ಅವಲೋಕಿಸಿದಾಗ ಅವರೊಬ್ಬ ಶಿಕ್ಷಣ ತಜ್ಞ,ಆರ್ಥಿಕ ತಜ್ಞ ಎಂಬ ಸತ್ಯ ಅರಿವಾಗುತ್ತದೆ ಎಂದ ಅವರು, ಬಂಟ್ವಾಳದವರಿಂದಾಗಿ ಇವತ್ತು ಸರಕಾರ ನಾರಾಯಣಗುರು ಜಯಂತಿ ಆಚರಣೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಇಂದು ಯುವಕರು ರಿಯಲ್ ಬಿಲ್ಲವರಾಗಿ ಮೂಡಿಬರಬೇಕು. ದ್ವೇಷ, ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಸಾಥ್ ನೀಡಬೇಕು, ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಲು ಮಾರ್ಗದರ್ಶಕರಾಗಬೇಕು ಎಂದರು. ಜಗತ್ತಿನಲ್ಲಿ ಹಲವು ಸಂತರು ಆಗಿಹೋಗಿದ್ದಾರೆ. ಅಂದು ಆಧ್ಯಾತ್ಮಿಕ ಗುರುಗಳಿದ್ದರೆ, ಇಂದು ಜಾತಿ, ಟಿ.ವಿ., ಆನ್ ಲೈನ್ ಗುರುಗಳಿದ್ದಾರೆ ಹೀಗಾಗಿ ಇಂದಿಗೂ ಅನೀತಿಗಳು ತಾಂಡವವಾಡುತ್ತಿವೆ ಎಂದು ಹೇಳಿದ ಬಂಟ್ವಾಳ್, ಬ್ರಹ್ಮಶ್ರೀ ನಾರಾಯಣ ಗುರುಗಳು ಆಧ್ಯಾತ್ಮ ಚಿಂತನೆಯ ಜೊತೆಗೆ ಬಿಲ್ಲವ ಸಮುದಾಯದವರ ಉನ್ನತಿಗೆ ಶ್ರಮಿಸಿದವರು. ಬಿಲ್ಲವ ಸಮುದಾಯದ ಹೃದಯವೇ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಹೇಳಿದರು. ಇಂದು ಯುವಕರು ಧಾರ್ಮಿಕ ಕೈದಿಗಳಾಗಬಾರದು ಎಂದು ಹಿತವಚನ ಹೇಳಿದ  ಬಂಟ್ವಾಳ್, ಯಾವುದೇ ರಾಜಕೀಯ ಪಕ್ಷಗಳ ಹಿಂಬಾಲಕರಾಗಬೇಡಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳಬೇಡಿ, ರಾಷ್ಟ್ರದ ಹಿತಕ್ಕಾಗಿ ದುಡಿಯಬೇಕು, ರಾಜಕೀಯ, ಸಾಮಾಜಿಕ ಗುಲಾಮಗಿರಿಯತ್ತ ಸಾಗದಿರಿ. ನಾವು ಹಿಂದುಳಿದವರು ಎಂಬ ಕೀಳರಿಮೆ ತಾಳದೆ ಎದೆಯುಬ್ಬಿಸಿ ಮಾರ್ಗದರ್ಶಕರಾಗಿ ಎಂದು ಹೇಳಿದರು. ಇವತ್ತು ನಾವು ತಲೆಯೆತ್ತಿ ನಿಲ್ಲಲು ಬ್ರಹ್ಮಶ್ರೀ ನಾರಾಯಣಗುರು ಕಾರಣ ಎಂದು ಹೇಳಿದ ಅವರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಬಿಲ್ಲವ ಸಮಾಜಕ್ಕೆ ಸಿಗುವ ಹಕ್ಕಿನಲ್ಲಿ ರಾಜಿ ಮಾಡಿಕೊಳ್ಳಬಾರದು. ಜಾತಿ ಮೀರಿ ಬಿಲ್ಲವ ಬದುಕಬೇಕು. ಸಂಘಟನೆ ಎಂದರೆ ತಾಯಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಉದ್ಯಮಿ ರೋಹಿನಾಥ್ ಪಿ. ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ರಮೇಶ್ ಎಂ.ತುಂಬೆ , ಕೋಶಾಧಿಕಾರಿ ಉಮೇಶ್ ಸುವರ್ಣ, ಜತೆಕಾರ್ಯದರ್ಶಿ ಶಂಕರ್ ಕಾಯರ್ ಮಾರ್, ಲೆಕ್ಕಪರಿಶೋಧಕ ಸತೀಶ್.ಬಿ., ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ ಭುವನೇಶ್ ಉಪಸ್ಥಿತರಿದ್ದರು. ಸಂಜೀವ ಪೂಜಾರಿ ಗುರುಕೃಪ ಸನ್ಮಾನಿತರ ಪರಿಚಯ ಮಾಡಿದರು. ರಾಘವ ಅಮೀನ್ ಸ್ವಾಗತಿಸಿದರು. ರಮೇಶ್ ಎಂ. ತುಂಬೆ ವಂದಿಸಿದರು. ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿನಿಯರಾದ ಕ್ರಮವಾಗಿ ಸ್ನೇಹ ಬಂಗೇರ ಬಡಗಬೆಳ್ಳೂರು,ಉಷಾಕಿರಣ ಮೂರ್ಜೆ,ರೇಣುಕಾ ಬಂಟ್ವಾಳ,ವಕ್ಷಿತಾ ನರಿಕೊಂಬು, ಬಂಟ್ವಾಳ ಪುರಸಭೆಗೆ ಚುನಾಯಿತರಾದ ಬಿಲ್ಲವ ಸಮಾಜದ ವಾಸುಪೂಜಾರಿ,ಗಂಗಾಧರ,ದೇವಕಿ ಶಿವಪ್ಪ ಪೂಜಾರಿ ,ಗಾಯತ್ರಿ ಪ್ರಕಾಶ್ ಮತ್ತು ಸರ್ವ ಕಾಲೇಜ್ ವಿದ್ಯಾರ್ಥಿಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಜ್ವಲ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಬೆಳಗ್ಗೆನಿಂದ ಜಗದಾಂಬಿಕಾ ಭಜನಾ ಮಂಡಳಿ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಕೇಲ್ದೋಡಿಯಿಂದ ಭಜನೆ, ಗುರುಪೂಜೆ, ಮಹಾ ಪೂಜೆ, ಅನ್ನಸಂದರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.