ವಿಶೇಷ ವರದಿ

ಕುಡಿಯೋ ನೀರಿಗೆ ಕೊಳಚೆ, ಜನಜಾಗೃತಿಗೆ ಸಕಾಲ

  • ಹರೀಶ ಮಾಂಬಾಡಿ

ಮತ್ತೆ ಮತ್ತೆ ಮಾಧ್ಯಮಗಳು ಎಚ್ಚರಿಸಿದವು. ಆಡಳಿತ ನೋಟಿಸ್ ನೀಡಿದ್ದೇವೆ ಎಂದಿತು. ಆದರೆ ನೇತ್ರಾವತಿ ಒಡಲಿಗೆ ತ್ಯಾಜ್ಯಗಳು ಸೇರುವುದು ನಿಂತಿಲ್ಲ. ಯಾವುದೇ ಒಂದು ನಿಯಮ ಮಾಡಿ, ನಿಯಮ ಇರೋದೇ ಮುರೀಲಿಕ್ಕೆ ಎಂಬಂತೆ ಜನ ವರ್ತಿಸುತ್ತಾರೆ. ಜನರಿಗೆ ಇದರ ಅರಿವಾಗದಿದ್ದರೆ ಏನೂ ಪ್ರಯೋಜನವಿಲ್ಲ. 

www.bantwalnews.com

ಜಾಹೀರಾತು

ಸುಮ್ಮನೆ ಹಾಗೆ ಒಮ್ಮೆ ಬಂಟ್ವಾಳ ಜಕ್ರಿಬೆಟ್ಟಿನಿಂದ ತುಂಬೆ ಅಣೆಕಟ್ಟು ಸಂಗ್ರಹಿತ ಪ್ರದೇಶದವರೆಗೆ ನೇತ್ರಾವತಿ ನದಿಗುಂಟ ಹೋಗಿ.

ಅಲ್ಲಲ್ಲಿ ನದಿಗೆ ಕೊಳಚೆ ನೀರು ಸೇರುತ್ತಿದೆ. ಇದೇನೂ ದೊಡ್ಡ ವಿಷಯವಲ್ಲ. ಹಲವು ವರ್ಷಗಳಿಂದಲೂ ಹೀಗೆ ನೀರು ಸೇರುತ್ತಿದೆಯಲ್ಲ, ಈಗ್ಯಾಕೆ ಸುದ್ದಿ ಎನ್ನಬಹುದು. ಆದರೆ ನಾಲ್ಕೈದು ವರ್ಷಗಳ ಹಿಂದೇಕೆ, ಕಳೆದ ವರ್ಷದವರೆಗೂ ತುಂಬೆ ಅಣೆಕಟ್ಟಿನ ನೀರು ಸಂಗ್ರಹ ಇಷ್ಟೊಂದು ಇರಲಿಲ್ಲ. ಈಗಂತೂ ದಿಢೀರ್ ಸಂಗ್ರಹ. ನೀರು ಸಂಗ್ರಹಿಸುವುದು ತಪ್ಪಲ್ಲ. ಆದರೆ ನೀರಿಗೆ ಕೊಳಚೆ ಹಾಕಿದರೆ ಅದು ನಮ್ಮ ಬಳಿಯೇ ತಿರುಗಿ ಬರುತ್ತದೆ.

ನ್ಯೂಟನ್ ನ ಮೂರನೇ ನಿಯಮದಂತೆ!!!

ಜಾಹೀರಾತು

ಇಲ್ಲಿ ಸ್ನಾನ, ಈಜು, ಬಟ್ಟೆ ತೊಳೆಯುವುದು, ನದಿಗೆ ಇಳಿಯುವುದು ಹಾಗೂ ಪ್ರಾಣಿಗಳನ್ನು ತೊಳೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂಬ ತುಕ್ಕುಹಿಡಿದ ಬೋರ್ಡಿನಂತೆ ನಿಯಮ, ಸೂಚನೆಗಳಿಗೂ ತುಕ್ಕು ಹಿಡಿದ ಕಾರಣ ಯಾವ ಪ್ರಯೋಜನವೂ ಆಗಿಲ್ಲ. ಇನ್ನು ದಂಡವೇ ಗತಿ ಎಂಬಷ್ಟರ ಮಟ್ಟಿಗೆ ನಾವೂ ಒಗ್ಗಿಹೋಗಿದ್ದೇವೆ.

ಈ ನೀರನ್ನು ನೀವೊಮ್ಮೆ ಮುಟ್ಟಿ ನೋಡಿ ಸ್ವಲ್ಪ ಹೊತ್ತಿನಲ್ಲಿ ಮೈಮೇಲೆ ತುರಿಕೆ ಏಳಬಹುದು. ಹೀಗಾಗಲು ಕಾರಣ ತ್ಯಾಜ್ಯಸಂಗ್ರಹ.

ನಿಜವಾದ ವಿಚಾರವೆಂದರೆ, ನದಿಗೆ ಮಳೆನೀರು ಸೇರಲೆಂದು ಬರುವ ತೋಡುಗಳಿವು. ಆದರೆ ಈಗ ಕೊಳಕು ತ್ಯಾಜ್ಯಗಳು ಬಂದು ಸೇರುತ್ತವೆ. ಕೆಲವೊಮ್ಮೆ ನೇರವಾಗಿ ನದಿಗೆ ತ್ಯಾಜ್ಯದ ಕಟ್ಟುಗಳನ್ನು ಎಸೆಯಲಾಗುತ್ತದೆ. ಕಸ, ಕಡ್ಡಿಗಳು, ಮದ್ಯದ ಬಾಟಲಿಗಳು, ವಿವಿಧ ತ್ಯಾಜ್ಯಗಳು, ಪ್ಲಾಸ್ಟಿಕ್ ಗಳು, ಮನೆಯ ಗಲೀಜು ಹೀಗೆ ನೇತ್ರಾವತಿ ತೀರದ ನೀರು ತ್ಯಾಜ್ಯದಿಂದ ತುಂಬಿ ತುಳುಕಲು ಆರಂಭಿಸಿತು.

ಜಾಹೀರಾತು

ಹಿಂದೆಲ್ಲ ತ್ಯಾಜ್ಯಗಳು ನದಿಗೆ ಸೇರುವ ಮೊದಲೇ ಅಲ್ಲಲ್ಲೇ ಡ್ರೈನ್ ಆಗುತ್ತಿತ್ತು. ಒಣಗಿ ಹೋಗುತ್ತಿತ್ತು. ಆದರೆ ಈಗ ದಡದವರೆಗೂ ನೀರು ತುಂಬಿದೆ. ಬಂಟ್ವಾಳದಲ್ಲಿ ನೀವು ನೋಡುತ್ತಿರುವ ಜಲರಾಶಿ ತುಂಬೆ ಡ್ಯಾಂನಲ್ಲಿ ಸಂಗ್ರಹವಾದ ನೀರಿನ ಹಿಮ್ಮುಖ ಪ್ರವಾಹದ ಭಾಗ. ಹೀಗಾಗಿ ಬರುವ ಕೊಳಕೆಲ್ಲ ನೀರಿಗೆ ಸೇರುತ್ತದೆ. ಮತ್ತೆ ವಾಪಸ್ ದಡದತ್ತ ಸಾಗುತ್ತದೆ.

ಈ ವಿಚಾರ ಪುರಸಭಾ ಮೀಟಿಂಗ್ ನಲ್ಲಿ ಪ್ರಸ್ತಾಪಗೊಂಡಿದೆ. ಹಲವು ಬಾರಿ ಸಾರ್ವಜನಿಕರೂ ಗಮನ ಸೆಳೆದಿದ್ದಾರೆ. ತ್ಯಾಜ್ಯ ಬಿಡುವವರ ವಿರುದ್ಧ ನೋಟಿಸ್ ಕೊಟ್ಟಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅದೆಲ್ಲ ಒತ್ತಟ್ಟಿಗಿರಲಿ, ಮೂಲತ: ಬೇಕಾಗಿರುವುದು ತ್ಯಾಜ್ಯವನ್ನು ಅಲ್ಲಿಗೆ ಎಸೆಯಲೇಬಾರದು ಎಂಬಂಥ ಮನೋಸ್ಥಿತಿ.

ನಿಯಮ ಇರೋದೇ ಮುರೀಲಿಕ್ಕೆ

ಜಾಹೀರಾತು

ಯಾವುದೇ ಒಂದು ನಿಯಮ ಮಾಡಿ, ವಾಟ್ಸಾಪ್ ಗ್ರೂಪ್ ಇರಬಹುದು, ಶಾಲೆ, ಬಸ್ಸುಗಳು ಇರಬಹುದು. ನಿಯಮ ಇರೋದೇ ಮುರೀಲಿಕ್ಕೆ ಎಂಬಂತೆ ಜನ ವರ್ತಿಸುತ್ತಾರೆ. ಯಾರದ್ದೋ ಮನೆ ಜಗುಲಿಯಲ್ಲಿ ಇಬ್ಬರು ಕುಳಿತು ಜಗಳಕ್ಕಿಳಿದಂತೆ ಸಾರ್ವಜನಿಕ ವೇದಿಕೆಗಳು ಸಿಕ್ಕರೆ ಕದನಕ್ಕೆ ತೊಡಗುವ ಜನರು ಜಾಸ್ತಿ. ಅದೇ ರೀತಿ, ಕಸ ಇಲ್ಲಿ ಎಸೆಯಬಾರದು, ಇಲ್ಲಿ ಮೂತ್ರ ಮಾಡಬಾರದು ಎಂಬ ನಿಯಮ ಹಾಕಿ ನೋಡಿ. ಅಲ್ಲೇ ಕಸ ಜಾಸ್ತಿ ಇರುತ್ತದೆ. ಮನೆ ಮುಂದೆ ಕಸದ ಬುಟ್ಟಿ ಇಡುತ್ತಾರೆ. ಅದು ಮಗುಚಿದರೆ ಕಸ ಕೊಂಡೊಯ್ಯುವವರನ್ನು ಬಯ್ಯುತ್ತಾರೆ. ಒಂದೆರಡು ತಿಂಗಳ ಹಿಂದೆ ಫ್ಲ್ಯಾಟ್ ನಲ್ಲಿ ವಾಸಿಸುವ ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ನನ್ನ ಕಣ್ಣೆದುರೇ ಕಸ ಎಸೆದಿದ್ದರು. ಯಾಕೆ ಸ್ವಾಮೀ ಎಂದು ಕೇಳಿದರೆ ಮತ್ತೆ ಇಲ್ಲಿಗೆ ಗಾಡೀನೇ ಬರೋದಿಲ್ವಲ್ಲ ಎಂದು ಮಾರುತ್ತರ ಕೊಟ್ಟರು! ಅವರು ವಿದ್ಯಾವಂತರು, ಮುನ್ಸಿಪಾಲಿಟಿಗೆ ದೂರು ನೀಡಬಹುದಿತ್ತಲ್ವೇ ಎಂದರೆ ಉತ್ತರವಿಲ್ಲ. ಇಂಥ ವಿದ್ಯಾವಂತ ಮೂರ್ಖರು ನಿಯಮ ಭಂಜಕರು ಇದ್ದರೆ ಯಾವ ಅಭಿವೃದ್ಧಿ ಯೋಜನೆಯೂ ನಿರೀಕ್ಷಿತ ರೀತಿಯಲ್ಲಿ ತಲುಪಲು ಸಾಧ್ಯವಿಲ್ಲ. ಹೀಗಾಗಿ ಬೇಕು ನಮ್ಮಲ್ಲಿ ಜಾಗೃತಿ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ