ಬಂಟ್ವಾಳದ ಪಾಣೆಮಂಗಳೂರು, ಬಂಟ್ವಾಳದ ಕೆಲ ಭಾಗಗಳಲ್ಲಿ ಆಗಸ್ಟ್ 1ರಂದು ದಿಢೀರನೆ ಸಂಜೆ ವೇಳೆ ನೇತ್ರಾವತಿ ನೀರಿ ಅಪಾಯದ ಮಟ್ಟ ಮೀರಿ ಹರಿದು ರಸ್ತೆ, ಮನೆಗಳಿಗೆಲ್ಲಾ ನುಗ್ಗಿತ್ತು. ಇದೀಗ ಭಾನುವಾರ (ಆಗಸ್ಟ್ 2) ಬೆಳಗಿನ ಜಾವ ನದಿ ಶಾಂತವಾಗಿ ಹರಿಯುತ್ತಿದೆ. ಪ್ರವಾಹ ಇಳಿಮುಖವಾಗಿದೆ. ಬೆಳಗ್ಗೆ 7.4 ಮೀಟರ್ ಎತ್ತರದಲ್ಲಿ ನೇತ್ರಾವತಿ ಹರಿಯುತ್ತಿತ್ತು.
ಪಾಣೆಮಂಗಳೂರು ಆಲಡ್ಕದಲ್ಲಿ ಮುಂಜಾಗ್ರತಾ ಕ್ರಮವಾಗಿ 15 ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಲಾಗಿತ್ತು. ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ನಿಗಾ ಇಡಲಾಗಿತ್ತು.
ಶನಿವಾರ ರಾತ್ರಿ ನೇತ್ರಾವತಿ ನದಿ ಜಕ್ರಿಬೆಟ್ಟು ಸಹಿತ ಹಲವೆಡೆ ರಸ್ತೆಗೆ ಹರಿದುಬಂದಿತ್ತು. ಬಡ್ಡಕಟ್ಟೆ ಬಸ್ ನಿಲ್ದಾಣಕ್ಕೆ ಬಸ್ಸುಗಳು ಒಳಗೆ ಬಾರದಿದ್ದರೂ, ವರ್ಷಕ್ಕೆ ಒಮ್ಮೆಯಾದರೂ ನದಿ ನೀರು ನುಗ್ಗಿ ಹೊಳೆಯಂತಾಗುವ ಪರಿಸ್ಥಿತಿ ಇದೆ. ಶನಿವಾರವೂ ಹಾಗೆಯೇ ಆಗಿತ್ತು. ಬಂಟ್ವಾಳ ವೆಂಕಟರಮಣ ದೇವಸ್ಥಾನದ ಸನಿಹ ಮೆಟ್ಟಿಲಿನ ಬಳಿಯೂ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.ಭಾನುವಾರ ಬೆಳಗಿನ ಜಾವ ನೀರಿನ ಪ್ರಮಾಣ ತಗ್ಗಿದ ಕಾರಣ ರಸ್ತೆಗೆ ಬಿದ್ದಿದ್ದ ನೀರು ಕಾಣಿಸುತ್ತಿಲ್ಲ. ಇದೀಗ ಸಹಜಸ್ಥಿತಿಗೆ ಬಂಟ್ವಾಳ ಮರಳುತ್ತಿದೆ. ಆದರೆ ಸಂಜೆಯ ವೇಳೆ ಮತ್ತೆ ನಿನ್ನೆಯಂಥ ಪರಿಸ್ಥಿತಿ ಉದ್ಭವವಾಗಬಹುದೇ ಎಂಬ ಆತಂಕವೂ ಇದೆ.