ಕವರ್ ಸ್ಟೋರಿ

ಜನಸಾಮಾನ್ಯರ ಬದುಕಿನ ಪುಟಗಳ ತೆರೆಯುವ ಗ್ಯಾಲರಿ

  • ಸಂಚಯಗಿರಿಯ ಆದರ್ಶ ದಂಪತಿಗೆ ತುಳುಬದುಕು ಸಾರುವ ವಸ್ತುಗಳ ರಕ್ಷಣೆಯೇ ಗುರಿ
  • ರಾಷ್ಟ್ರದ ಗಮನ ಸೆಳೆದಿದೆ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ
  • ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ ತುಳು ಲೈಬ್ರರಿ, ನಾಣ್ಯಶಾಸ್ತ್ರ ಅಧ್ಯಯನ ಕೇಂದ್ರ

ಇತಿಹಾಸ ಎಂದರೆ ಕೇವಲ ರಾಜಮಹಾರಾಜರ ಕಥೆಯಲ್ಲ. ಅತಿ ಸಾಮಾನ್ಯನಾಗಿ ಬದುಕಿದ ಮನುಷ್ಯನಿಗೂ ಸಾಂಸ್ಕೃತಿಕ, ಜಾನಪದ ಹಿನ್ನೆಲೆಯಿದೆ. ಈ ಅಂಶವನ್ನು ಇಟ್ಟುಕೊಂಡೇ ಬಂಟ್ವಾಳದ ಈ ಪ್ರೊಫೆಸರ್ ಅವರು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ ಆರಂಭಿಸಿದರು. ನಮ್ಮ ಹಿರಿಯರು ಉಪಯೋಗಿಸಿದ, ಸಾಮಾನ್ಯರ ಕಣ್ಣಿಗೆ ಅತಿ ಸಾಮಾನ್ಯ ಎನಿಸುವಂಥ ವಸ್ತುಗಳನ್ನು ಊರೂರು ತಿರುಗಿ ಸಂಗ್ರಹಿಸಿದರು. ಕಾಲೇಜಿನಲ್ಲಿಟ್ಟಿದ್ದ ಪುಟ್ಟ ಸಂಗ್ರಹ ದೊಡ್ಡದಾಯಿತು. ತಮ್ಮ ಮನೆಯನ್ನೇ ವಸ್ತುಗಳನ್ನು ರಾಶಿ ಹಾಕಿದರು. ಪ್ರೊಫೆಸರ್ ಪತ್ನಿ ಸಾಥ್ ನೀಡಿದರು. ಅದಕ್ಕೊಂದು ಸ್ಪಷ್ಟ ಸ್ವರೂಪ ಕೊಡಲು ತೀರ್ಮಾನಿಸಿ, ತಮ್ಮ ಪುಟ್ಟ ಜಾಗದಲ್ಲೇ ಮ್ಯೂಸಿಯಂ ಕಟ್ಟಿದರು. ಜೊತೆಗೆ ಅಂದದ ಗ್ಯಾಲರಿ. ಇದೀಗ ನಾಣ್ಯಶಾಸ್ತ್ರ ಹಾಗೂ ತುಳು ಅಧ್ಯಯನ ಆಸಕ್ತರಿಗೆ ಲೈಬ್ರರಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಒಂದಿಡೀ ಅಕಾಡೆಮಿಯೋ, ಸರಕಾರದ ತಂಡವೋ ಮಾಡಬೇಕಾದ ಕೆಲಸವನ್ನು ಈ ದಂಪತಿ ಮಾಡುತ್ತಿದ್ದಾರೆ. ಅವರು ಬಂಟ್ವಾಳದವರು, ಬಿ.ಸಿ.ರೋಡಿನ ಸಂಚಯಗಿರಿಯವರು. ತಾಲೂಕಿನ ಹೆಮ್ಮೆಯ ಈ ಆದರ್ಶ ದಂಪತಿ ಹೆಸರು ತುಕಾರಾಮ ಪೂಜಾರಿ – ಆಶಾಲತಾ ಸುವರ್ಣ.

ಪ್ರೊ. ತುಕಾರಾಮ ಪೂಜಾರಿ – ಪ್ರೊ.ಆಶಾಲತಾ ಸುವರ್ಣ

ಈಗಿಲ್ಲಿ ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ, ಉಪನ್ಯಾಸ ಮಂದಿರಗಳಿವೆ. ಇನ್ನು ಮುಂದಕ್ಕೆ ತುಳು ಬದುಕಿಗೆ ಸಂಬಂಧಿಸಿ ಸ್ಪಷ್ಟ ಚಿತ್ರಣ ಕೊಡುವ ಪುಸ್ತಕಗಳು, ಸಂಶೋಧನೆಗೆ ಬೇಕಾದ ಆಕರಗಳನ್ನು ಒದಗಿಸುವ ಲೈಬ್ರೆರಿ ನಿರ್ಮಾಣ ಕಾರ್ಯ ನಡೆಯುತ್ತದೆ. ಇದಕ್ಕೆ ಎಸ್.ಯು.ಪಣಿಯಾಡಿ ಹೆಸರು. ಜೊತೆಗೆ ಕೇಂದ್ರದ ವತಿಯಿಂದ ಸರ್ಟಿಫಿಕೇಟ್ ಕೋರ್ಸ್.

ಮುಂದಿನ ವರ್ಷ ಲೋಕಾರ್ಪಣೆಯಾಗಲಿರುವ  ಲೈಬ್ರರಿ  ಕಟ್ಟಡದ ಕಾರ್ಯಗಳು ಭರದಿಂದ ಸಾಗಿದೆ.

ತುಕಾರಾಮ ಪೂಜಾರಿಯವರ ಮಹತ್ವಾಕಾಂಕ್ಷೆಯ ಯೋಜನೆ ಮುಂದುವರಿಯುವುದು ಹೀಗೆ.

ಜಾಹೀರಾತು

ನಿರ್ಮಾಣವಾಗುತ್ತಿರುವ ವಿಸ್ತರಿತ ಕಟ್ಟಡ ರಚನೆ ವಿಭಿನ್ನ. ಪ್ರವೇಶಿಸುತ್ತಿದ್ದಂತೆ ಗುತ್ತಿನ ಮನೆಯ ಚಾವಡಿ ಎದುರುಗೊಳ್ಳುತ್ತದೆ. ಕಟ್ಟಡದ ವಿವಿಧೆಡೆ ತುಳು ಬದುಕನ್ನು ಬಿಂಬಿಸುವ ಚಿತ್ರ, ಪರಿಕರಗಳು ಇರುತ್ತದೆ. ಜನಪದ ಬದುಕು ಹೇಗಿತ್ತು ಎಂಬದನ್ನು ಸೂಚಿಸುವ ವಾತಾವರಣ ದೊರಕುತ್ತದೆ ಎನ್ನುತ್ತಾರೆ ಪ್ರೊ. ತುಕಾರಾಮ ಪೂಜಾರಿ.

ವಸ್ತು ಸಂಗ್ರಹಾಲಯದ ನೋಟ

ಸಾಮಾನ್ಯ ವ್ಯಕ್ತಿಯ ಬಗ್ಗೆ ಯಾವ ದಾಖಲೆಗಳೂ ಇರುವುದಿಲ್ಲ. ಅಂದರೆ ಶೇ.80ರಿಂದ 90ರಷ್ಟು ಜನರ ಇತಿಹಾಸ ನಮಗೆ ಗೊತ್ತಿರುವುದಿಲ್ಲ. ಭೌತಿಕ ವಸ್ತು ಪರಿಕರಗಳ ಸಂಗ್ರಹಕ್ಕೆ ತುಕಾರಾಮ ಪೂಜಾರಿಯವರು ಹೊರಟಾಗ ಆಯ್ಕೆ ಮಾಡಿದ್ದೇ ಜನಸಾಮಾನ್ಯರ ಬದುಕಿನ ನೋಟವನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಸದಾಶಯದೊಂದಿಗೆ.

art gallary

ಈ ಪೀಳಿಗೆ ನೋಡದೇ ಇರುವ ನಮ್ಮ ಹಿರಿಯ ನಾಗರಿಕರು ಬಳಸಿರಬಹುದಾದ ನಮ್ಮ ನಿಮ್ಮ ಹಿಂದಿನ ತಲೆಮಾರು ತಮ್ಮ ದೈನಂದಿನ ಬದುಕಿನಲ್ಲಿ ಬಳಸಿರುವ ವಸ್ತುಗಳು ಇಲ್ಲಿವೆ. ಇವೇ ಸಮಗ್ರ ತುಳು ಬದುಕು. ಜನರಿಗೆ, ಅಧ್ಯಯನಕಾರರಿಗೆ, ಸಂಶೋಧಕರಿಗೆ ಇದರ ಸ್ಪಷ್ಟ ಚಿತ್ರಣ, ಮಾಹಿತಿ ದೊರಕಬೇಕು ಎಂಬುದು ಮೂಲ ಉದ್ದೇಶ. ಹೀಗಾಗಿ ಹಳೆಯ ಪರಿಕರಗಳನ್ನು ಸಂಗ್ರಹಿಸಲು ತುಕಾರಾಮ ಪೂಜಾರಿಯವರಿಗೆ ವರ್ಷಗಳೇ ತಗಲಿವೆ. ಈ ಶ್ರಮದ ಫಲವಾಗಿ ಇಂದು ವಸ್ತು ಸಂಗ್ರಹಾಲಯ ಎದ್ದು ನಿಂತಿದೆ.

ಜಾಹೀರಾತು

ರಾಣಿ ಅಬ್ಬಕ್ಕ ಗ್ಯಾಲರಿ ಉದ್ಘಾಟನೆ

ರಾಣಿ ಅಬ್ಬಕ್ಕನ ಬಗ್ಗೆ ಕುತೂಹಲ ಮೂಡಿಸಿದ್ದು ಎಲ್ಲೂರು ಉಮೇಶ ರಾವ್. ರಾಣಿ ಅಬ್ಬಕ್ಕ ತುಳು ಬದುಕಿನ ಪ್ರತೀಕವೂ ಹೌದು. ಸಂಗ್ರಹಿಸುತ್ತಿದ್ದ ವಸ್ತುಗಳನ್ನು ಒಟ್ಟು ಹಾಕಿ ಅಬ್ಬಕ್ಕನ ಹೆಸರಲ್ಲಿ ಸಂಗ್ರಹಾಲಯವನ್ನು 1995 ಆರಂಭಿಸಿದರು. 2011 ಡಿಸೆಂಬರ್ ನಲ್ಲಿ ರಾಣಿ ಅಬ್ಬ,ಕ್ಕ ಆರ್ಟ್ ಗ್ಯಾಲರಿಯನ್ನು ಆರಂಭಿಸಿದರು. ಆಗ 24 ಮಂದಿ ಅಂತಾರಾಷ್ಟ್ರೀಯ ಕಲಾವಿದರು ಆಗಮಿಸಿ ರಾಣಿ ಅಬ್ಬಕ್ಕನ ಚಿತ್ರ ಬಿಡಿಸಿದರು ಎಂದರು ತುಕಾರಾಮ ಪೂಜಾರಿ. ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಒಂಟಿಯಾಗಿ ಹೋರಾಡಿದ ವೀರ ವನಿತೆ ರಾಣಿ ಅಬ್ಬಕ್ಕಳ ಜೀವನ ಚರಿತ್ರೆ ಕುರಿತಾಗಿ ಹಲವಾರು ಕಲಾವಿದರ ಕಲ್ಪನೆಯ ನೂರಾರು ಚಿತ್ರಗಳು ಗ್ಯಾಲರಿಯಲ್ಲಿವೆ. ಈ ಕೇಂದ್ರದಲ್ಲಿ ವರ್ಷವಿಡೀ ತುಳುನಾಡಿನ  ಕುರಿತು ಕಮ್ಮಟ, ಕಾರ್ಯಾಗಾರಗಳು ನಡೆಯುತ್ತಲೇ ಇರುತ್ತವೆ.ಅಬ್ಬಕ್ಕನಿಗೆ ಸಂಬಂಧಿಸಿದ ರಾಷ್ಟ್ರಮಟ್ಟದ ಗ್ಯಾಲರಿ ಬೇರೆಲ್ಲೂ ಸಿಗದು ಎಂಬಷ್ಟು ವಿನ್ಯಾಸ ಅದ್ಭುತ.

ಉತ್ಸವ, ಸಮ್ಮೇಳನ ಇತ್ಯಾದಿಗಳಿಗೆ ಕೋಟಿ ವೆಚ್ಚ ಮಾಡುವ ಆಡಳಿತ ಯಂತ್ರಕ್ಕೆ ಇಂಥ ಕೆಲಸ ಕಾರ್ಯಗಳು ಕಣ್ಣಿಗೆ ಕಾಣಿಸುವುದಿಲ್ಲ ಎಂಬುದು ವಿಪರ್ಯಾಸ. ಹೀಗಾಗಿ ಪ್ರೊಫೆಸರ್ ದಂಪತಿ ತಮ್ಮ ದುಡಿಮೆಯ ಬಹುಪಾಲು ಅಂಶವನ್ನು ತುಳು ಬದುಕು ಸಂಗ್ರಹಾಲಯಕ್ಕೇ ಮೀಸಲಿಟ್ಟಿದ್ದಾರೆ. ಕೆಲ ದಾನಿಗಳ ನೆರವೂ ಸಿಕ್ಕಿದೆ. ಮೂರು ಸರಕಾರಿ ಇಲಾಖೆ, ಅಕಾಡೆಮಿಗಳು ಮಾಡುವ ಕೆಲಸವನ್ನು ದಂಪತಿಯೇ ಮಾಡಿದ್ದಾರೆ ಎಂಬುದು ಸಣ್ಣ ವಿಷಯವೇನಲ್ಲ.

ಜಾಹೀರಾತು

ಡಿ.ಎಡ್, ಬಿ.ಎಡ್ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಇಲ್ಲಿರುವ ವಸ್ತುಗಳ ಮೂಲ, ಅದರ ಹಿನ್ನೆಲೆ ಅರಿತರೆ, ಮಕ್ಕಳಿಗೂ ತಿಳಿಹೇಳಲು ಸಾಧ್ಯ. ಪ್ರತಿಯೊಂದು ವಸ್ತುವೂ ಒಂದೊಂದು ಕಥೆ ಹೇಳುತ್ತದೆ. ಒಂದೊಂದು ಸಂಗ್ರಹದಲ್ಲೂ ನಮ್ಮ ನೆಲದ ಬದುಕು ಅಡಗಿದೆ. ತಿಳಿಯುವ ಕುತೂಹಲ ಬೇಕಷ್ಟೇ. ಮುಂದಿನ ಸಾರಿ ಬಿ.ಸಿ.ರೋಡಿಗೆ ಬಂದಾಗ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ. ಹಾಗೆ ಸುಮ್ಮನೆ ನೋಡಿ ಹೋಗುವ ಬದಲು ಪ್ರತಿಯೊಂದು ವಸ್ತುವಿನ ಹಿಂದಿನ ಕಥೆಯನ್ನು ತಿಳಿದು, ತುಳು ಬದುಕನ್ನು ಅರಿತುಕೊಳ್ಳಿ.

ಪ್ರೊಫೆಸರ್ ದಂಪತಿ ಅಪೇಕ್ಷೆಯೂ ಅಷ್ಟೇ. ಪ್ರತಿಯೊಂದು ವಸ್ತುವನ್ನೂ ಅಧ್ಯಯನಕಾರರು ಅನುಭವಿಸಿ ಅದರ ಮಹತ್ವವನ್ನು ಅರಿಯಬೇಕು. ಒಂದು ಅಕಾಡೆಮಿ ಏನು ಮಾಡಬೇಕೋ ಅವೆಲ್ಲ ಇಲ್ಲಿವೆ. ಪ್ರತಿಯೊಂದು ವಸ್ತುವಿನ ಹಿನ್ನೆಲೆ, ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಈಗಿನ ತಲೆಮಾರು ಮಾಡಿದರೆ ದಶಕಗಳ ಶ್ರಮ ಸಾರ್ಥಕ್ಯ ಪಡೆಯುತ್ತದೆ.

ಜಾಹೀರಾತು

ವಿಳಾಸ ಹೀಗಿದೆ.. ರಾಣಿ ಅಬ್ಬಕ್ಕ ತುಳು ಬದುಕು ವಸ್ತು ಸಂಗ್ರಹಾಲಯ ಮತ್ತು ಆರ್ಟ್ ಗ್ಯಾಲರಿ, ಸಂಚಯಗಿರಿ, ಬಿ.ಸಿ.ರೋಡ್, ದಕ್ಷಿಣ ಕನ್ನಡ ಜಿಲ್ಲೆ. ಬರುವ ಮುನ್ನ ದೂರವಾಣಿ ಕರೆ ಮಾಡಿ. ಪ್ರೊ. ತುಕಾರಾಮ ಪೂಜಾರಿ – 94491 65762.

(ಚಿತ್ರಕೃಪೆ: ಪ್ರೊ. ತುಕಾರಾಮ ಪೂಜಾರಿ ಸಂಗ್ರಹ)

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.