ಬಂಟ್ವಾಳ: ನಿವೃತ್ತ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಅವರು ಸ್ವಂತ ಖರ್ಚಿನಲ್ಲಿ ತಮ್ಮ ಮನೆ ಎದುರು ಇದ್ದ ಚರಂಡಿಯನ್ನು ಹೂಳೆತ್ತುವ ಮೂಲಕ ಪುರಸಭೆ ಮಾಡಬೇಕಾದ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದಾರೆ. ಮಳೆಗಾಲ ಆರಂಭಗೊಂಡು ತಿಂಗಳೆರಡಾದರೂ ಕೆಲಸವಾಗದೇ ಇದ್ದಾಗ ರಾವ್ ಅವರು ಸ್ವತಃ ವೆಚ್ಚ ಭರಿಸಿ ಕೆಲಸ ನಿರ್ವಹಿಸುವುದರ ಮೂಲಕ ಗಮನ ಸೆಳೆದಿದ್ದಾರೆ.
ಮಳೆಗಾಲದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ 14 ನೇ ವಾರ್ಡು ಪರಿಸರದ ರೈಲ್ವೆ ಸ್ಟೇಶನ್ ನಿಂದ ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರಸ್ತೆಯ ರಸ್ತೆ ಬದಿಯ ತೋಡಿನಲ್ಲಿ ಭಾರಿ ಪ್ರಮಾಣದ ಮಣ್ಣು ತುಂಬಿಕೊಂಡಿತ್ತು. ಇದರಿಂದಾಗಿ ಮಳೆನೀರು ಹರಿಯಲು ದಾರಿಯಿಲ್ಲದೆ, ಸ್ಥಳೀಯ ರಸ್ತೆಗೆ ಕೆಸರು ನುಗ್ಗಿತ್ತು.
ಸಮಸ್ಯೆಯ ಕುರಿತು ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ. ರಾಮಚಂದ್ರ ರಾವ್ ಸ್ಥಳೀಯರೊಂದಿಗೆ ಸೇರಿ ಹಲವು ಬಾರಿ ಲಿಖಿತ ಮನವಿಗಳನ್ನು ಸಲ್ಲಿಸಿದ್ದರೂ ಸ್ಪಂದನೆ ದೊರಕದೇ ಇದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಕೊನೆಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ತೋಡಿನ ಹೂಳೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿಸಿದ್ದಾರೆ.