ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ನೇತೃತ್ವದಲ್ಲಿ ಕಳೆದ 7 ವರ್ಷಗಳಿಂದ ಇಂಗು ಗುಂಡಿ ನಿರ್ಮಾಣ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ.
ಪ್ರಸಕ್ತ ವರ್ಷ ಶಾಲೆಯ 107 ವಿದ್ಯಾರ್ಥಿಗಳು 180 ಇಂಗು ಗುಂಡಿಗಳು ನಿರ್ಮಿಸಿದ್ದಾರೆ .ಈ ಜಲ ಜಾಗೃತಿಯಲ್ಲಿ ವಿದ್ಯಾರ್ಥಿಗಳು ಕಳೆದ 7 ವರ್ಷಗಳಿಂದ ವಿಜ್ಞಾನ ಶಿಕ್ಷಕರಾದ ರೋಷನ್ ಪಿಂಟೊ ರವರ ಮಾರ್ಗದರ್ಶನದಲ್ಲಿ
ವಿದ್ಯಾರ್ಥಿಗಳು ವೈಜ್ಞಾನಿಕ ವಿಧಾನದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುತ್ತಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಒಟ್ಟು 1007 ಇಂಗು ಗುಂಡಿಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.
ಕೆಲವು ವಿದ್ಯಾರ್ಥಿನಿಯರು ಹೆತ್ತವರ ಸಹಾಯ ಪಡೆದರೆ ಇನ್ನೂ ಕೆಲವರು ಸ್ವತಃ ಪ್ರತಿ ದಿವಸ ಮಳೆಯ ರಜೆಯ ದಿನಗಳಲ್ಲಿ 3×2×2 ಅಡಿ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಿ ಮಾರ್ಗದರ್ಶಿ ಶಿಕ್ಷಕರಿಗೆ ಅದರ ಫೋಟೋಗಳನ್ನು ಕಳಿಸಿರುತ್ತಾರೆ .ಈ ಸ್ಪರ್ಧೆ ವಿಜ್ಞಾನ ಪಾಠದ ಒಂದು ಕಾರ್ಯ ಯೋಜನೆಯಾಗಿ ವಿದ್ಯಾರ್ಥಿಗಳು ತೆಗೆದುಕೊಂಡಿರುತ್ತಾರೆ.
ಇಂಗು ಗುಂಡಿ ನಿರ್ಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದರ ಜೊತೆಗೆ ಅತ್ಯಧಿಕ ಗುಂಡಿಗಳನ್ನು ನಿರ್ಮಿಸಿದ ವಿದ್ಯಾರ್ಥಿಗಳಾದ ರೋಯ್ಸ್ಟನ್ ಲೋಬೋ, ಜೀವನ್ ಕುಮಾರ್, ಸೋಹನ್ ಡಿಸೋಜ, ಎಲ್ವಿನಾ ಬರ್ಬೋಜ, ಶಮಂತ್ ಆಚಾರ್ಯ, ಅದಿತಿ ರಾವ್, ಲಿಖಿತ ,ಶಮಂತ್ ಕೆ., ಪ್ರೀವಲ್ ಕಾರ್ಲೋ, ಅಕ್ಷಿತಾ ಇವರಿಗೆ ಮುಖ್ಯ ಶಿಕ್ಷಕಿ ಭಗಿನಿ ವೀರಾ ಬಹುಮಾನಗಳನ್ನು ನೀಡಿ ಗೌರವಿಸಿದರು.
180 ಇಂಗು ಗುಂಡಿಗಳಲ್ಲಿ ಒಮ್ಮೆಗೆ 61,200 ಲೀಟರ್ ನೀರು ಇಂಗಿಸುವ ಸಾಮರ್ಥ್ಯ
ವಿದ್ಯಾರ್ಥಿಗಳು ನಿರ್ಮಿಸಿದ 3 x 2 x 2 ಅಡಿ ಇಂಗು ಗುಂಡಿಯ ಒಟ್ಟು ಗಾತ್ರ 12 ಘನ ಅಡಿ ಆಗಿರುತ್ತದೆ. ಅಂದರೆ ಒಂದು ಇಂಗು ಗುಂಡಿಯಲ್ಲಿ ಒಂದು ಬಾರಿ ಪೂರ್ಣ ನೀರು ತುಂಬಿಕೊಂಡರೆ 340 ಲೀಟರ್ ನೀರು ಇಂಗುತ್ತದೆ.180 ಇಂಗು ಗುಂಡಿಗಳಲ್ಲಿ ಒಮ್ಮೆಗೆ 61,200 ಲೀಟರ್ ನೀರು ಇಂಗಲ್ಪಡುತ್ತದೆ. ಇಷ್ಟು ದೊಡ್ಡ ಪ್ರಮಾಣದ ನೀರನ್ನು ವಿದ್ಯಾರ್ಥಿಗಳು ನಿರ್ಮಿಸಿದ ಇಂಗು ಗುಂಡಿಗಳಿಂದ ಭೂಮಿಯ ಆಳಕ್ಕೆ ಸೇರಿ ಅಂತರ್ಜಲದ ಅಭಿವೃದ್ಧಿಗೆ ಕಾರಣವಾಗಿದೆ.
ವಿದ್ಯಾರ್ಥಿಗಳು ಏನಂತಾರೆ?
ಮಳೆಯ ನೀರು ಹರಿದು ಹೋಗಿ ನದಿ ಸೇರುವ ಬದಲು ಅದನ್ನು ತಡೆಹಿಡಿದು ಮಣ್ಣಿನಾಳಕ್ಕೆ ಇಂಗಿಸಿದರೆ ನಮ್ಮ ಅಂತರ್ಜಲವನ್ನು ಹೆಚ್ಚಿಸಬಹುದು, ಬೇಸಿಗೆಯಲ್ಲಿ ನೀರಿನ ಅಭಾವವನ್ನು ತಗ್ಗಿಸಬಹುದು. – ರೋಯ್ಸ್ಟನ್ ಲೋಬೊ, ವಿದ್ಯಾರ್ಥಿ
ನಾನು ಎಂಟನೇ ತರಗತಿಯಿಂದಲೇ ಇಂಗು ಗುಂಡಿಗಳ ನಿರ್ಮಿಸಲು ಪ್ರಾರಂಭಿಸಿದ್ದೇನೆ. ಪಾಠದಲ್ಲಿ ಕಲಿಯುವಂತಹ ವಿಚಾರ, ವಿಷಯಗಳನ್ನು ನಮ್ಮ ಶಾಲೆಯಲ್ಲಿ ಕಾರ್ಯರೂಪಕ್ಕೆ ವಿದ್ಯಾರ್ಥಿಗಳು ಮಾಡಿ ತೋರಿಸುತ್ತಾರೆ. ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ನಮಗೆ ಸಹಕಾರವನ್ನು ನೀಡುತ್ತಿದ್ದಾರೆ. – ಅಧಿತಿ ರಾವ್, ವಿದ್ಯಾರ್ಥಿನಿ
ಪಾಠದ ಜೊತೆಗೆ ಮಳೆ ನೀರಿನ ಕೊಯ್ಲು ಹಾಗು ನೀರಿನ ಸಂರಕ್ಷಣೆಯ ಜೀವನ ಪಾಠವನ್ನು ತಿಳಿಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.ಇದರಿಂದ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಅವರ ಪೋಷಕರಲ್ಲಿ ,ನೆರೆಹೊರೆಯವರಲ್ಲಿ ನೀರು ಇಂಗಿಸುವ ಜಾಗೃತಿ ಉಂಟಾಗಿದೆ. – ರೋಶನ್ ಪಿಂಟೊ, ಮಾರ್ಗದರ್ಶಿ ಶಿಕ್ಷಕರು,. ಹಸಿರು ಭವಿಷ್ಯ ಪರಿಸರ ಸಂಘ