ಬಿ.ಸಿ ರೋಡ್ ಹಾಗೂ ಪಂಪ್ ವೆಲ್ ನಲ್ಲಿ ಕಾರ್ಯಾಚರಿಸುತ್ತಿರುವ ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜ್ ನ ಓರಿಯೆಂಟೇಶನ್ ಕಾರ್ಯಕ್ರಮ ಗುರುವಾರ ಬಿ.ಸಿ ರೋಡ್ ನ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ಸಂಶೋಧಕರು ಹಾಗೂ ಅಪ್ತ ಸಮಾಲೋಚಕ ಡಾ. ಗುರುರಾಜ್ ಇಟಗಿ ಅವರು ಮುಖ್ಯ ಅತಿಥಿಯಾಗಿದ್ದರು. ಸಾಧಿಸುವ ಛಲ, ಇಚ್ಛಾಶಕ್ತಿ ಬೆಳೆಸುವ ಗುಣ ಮಕ್ಕಳಲ್ಲಿ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇದರ ಮೂಲಕವೇ ಅಸಾಧಾರಣ ಹೆಜ್ಜೆಯೊಂದಿಗೆ ಮುನ್ನಡೆಯಬಹುದು. ಸಾಮಾನ್ಯ ವ್ಯಕ್ತಿ ಕೂಡ ದೇಶದಲ್ಲಿ ಮಹತ್ತರ ಸಾಧನೆ ಬರೆದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇವು ನಮಗೆ ಮಾದರಿಯಾಗಬೇಕು ಎಂದು ಹೇಳಿದ ಅವರು ನಿಯಮಿತ ಆಹಾರ, ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಮೊಬೈಲ್ ಬಳಕೆಯ ಮುನ್ನ ಅದರ ಕುರಿತ ಇತಿ ಮಿತಿ ಹಾಗೂ ಸ್ವ ಅರಿವು, ಜಾಗೃತಿ ಇದ್ದರೆ ಸಮಸ್ಯೆ ಇಲ್ಲ ಎಂದರು.
ಎಂಐಟಿಇ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ರಾಕೇಶ್ ಕುಮಾರ್ ಮಾತನಾಡಿ ಕಳೆದ 25 ವರ್ಷಗಳಿಂದ ಎಂಐಟಿಇ ಪಂಪ್ ವೆಲ್ ಹಾಗೂ ಬಿ.ಸಿ ರೋಡ್ ನಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ನೀಡುತ್ತ ಬಂದಿದೆ. ಸಾವಿರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆದು ವಿವಿಧ ಸ್ತರದಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.
ಸಂಸ್ಥೆಯ ನಿರ್ದೇಶಕಿ ನಿಶ್ಮಿತಾ ರಾಕೇಶ್ ಕುಮಾರ್, ಉಪನ್ಯಾಸಕ ಅಶ್ರಫ್, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿಶಾ ವೇದಿಕೆಯಲ್ಲಿದ್ದರು. ಶಿಕ್ಷಕಿಯರಾದ ಭವ್ಯಶ್ರೀ ಸ್ವಾಗತಿಸಿದರು. ರಕ್ಷಿತ ಅತಿಥಿ ಪರಿಚಯ ಮಾಡಿದರು. ಶಾಂತೇರಿ ವಂದಿಸಿದರು. ಗೀತಾ ನಿರೂಪಿಸಿದರು.