ಸಿಎಸ್ಐಆರ್-ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು (ಸಿಎಸ್ಐಆರ್-ಎನ್ಎಎಲ್) ಹಾಗೂ ಸಿಎಸ್ಐಆರ್-ಎನ್ಐಡಿಎಸ್ಎ (ಹಿಂದೆ ಸಿಎಸ್ಐಆರ್-4ಪಿಐ) ಜಂಟಿಯಾಗಿ 4ನೇ ರಾಷ್ಟ್ರೀಯ ಕನ್ನಡ ವಿಜ್ಞಾನ ಸಮ್ಮೇಳನವನ್ನು (ರಾಕವಿಸ-2026) ಬೆಂಗಳೂರಿನ ಸಿಎಸ್ಐಆರ್-ಎನ್ಎಎಲ್ ನಲ್ಲಿ ಆಯೋಜಿಸಲು ಸಜ್ಜಾಗಿದೆ.
ನವೆಂಬರ್ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸಮ್ಮೇಳನವನ್ನು ನಡೆಸಲಾಗುತ್ತದೆ. ಇದಲ್ಲದೆ, ಈ ಕಾರ್ಯಕ್ರಮದಲ್ಲಿ ಕನ್ನಡ ಸಾಂಸ್ಕೃತಿಕ ಸಂಘ ಮತ್ತು ಸಿಎಸ್ಐಆರ್-ಎನ್ಎಎಲ್ ಕಳೆದ 51 ವರ್ಷಗಳಿಂದ ಪ್ರಕಟಿಸುತ್ತಿರುವ “ಕಣಾದ” ಕನ್ನಡ-ವಿಜ್ಞಾನ ವಾರ್ಷಿಕ ನಿಯತಕಾಲಿಕವನ್ನು ಸಹ ಬಿಡುಗಡೆ ಮಾಡಲಾಗುವುದು.
ಈ ಸಮ್ಮೇಳನದ ಪ್ರಾಥಮಿಕ ಉದ್ದೇಶವೆಂದರೆ, ಉದ್ಯಮದ ಪಾಲುದಾರರು (MSME, ಖಾಸಗಿ, ಸಾರ್ವಜನಿಕ), ವೈಜ್ಞಾನಿಕ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಗತಿಯನ್ನು ಮತ್ತು ನಾವೀನ್ಯತೆಗಳನ್ನು (ADA, GTRE, ADE, LRDE, HAL, BEML, BEL, ಮತ್ತು ಭಾರತದಾದ್ಯಂತದ ಶಿಕ್ಷಣ ಸಂಸ್ಥೆಗಳು) ಪ್ರಸ್ತುತಪಡಿಸಲು ಮತ್ತು ಪ್ರದರ್ಶಿಸಲು ಒಂದು ವೇದಿಕೆಯನ್ನು ರಚಿಸುವುದು. ಜೊತೆಗೆ ಈ ವರ್ಷ, ಭಾರತದಾದ್ಯಂತದ ಎಲ್ಲಾ ಸಿಎಸ್ಐಆರ್ ಪ್ರಯೋಗಾಲಯಗಳಿಂದ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು 2026 ರ ನವೆಂಬರ್ 19 ರಿಂದ 20 ರವರೆಗೆ ವೇದಿಕೆಯನ್ನು ಕಲ್ಪಿಸಲಾಗಿದೆ.
ಸಮ್ಮೇಳನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಕನ್ನಡ ಭಾಷೆಯಲ್ಲಿ ತಾಂತ್ರಿಕ ಪ್ರಬಂಧವನ್ನು ಬರೆದು ಕಳುಹಿಸಲು ಆಹ್ವಾನಿಸಲಾಗಿದೆ. ಲೇಖನದ ಶೀರ್ಷಿಕೆ + ಸಾರಾಂಶವನ್ನು ಸಲ್ಲಿಸಲು ಕೊನೆಯ ದಿನಾಂಕ: 30-08-2026, ಸಮ್ಮೇಳನ ದಿನಾಂಕ: 20-11-2026 ವಾಗಿದೆ ಎಂದು ಸಂಯೋಜಕ ಡಾ. ಗಿರೀಶ ಯಾನಮಶೆಟ್ಟಿ ತಿಳಿಸಿದ್ದಾರೆ.