ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥವಾಗುವಂಥ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಇತ್ಯರ್ಥಗೊಳಿಸಲು ಆದೇಶಿಸಲಾಗಿದ್ದು, ಅದರಂತೆ ಜುಲೈ 11ರಂದು ಬಂಟ್ವಾಳದಲ್ಲಿ ಲೋಕ್ ಅದಾಲತ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಶಂಜೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಬಂಟ್ವಾಳ ನ್ಯಾಯಾಲಯ ಸಂಕೀರ್ಣದಲ್ಲಿರುವ ಎಲ್ಲ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ರಾಜಿಯಾಗುವಂಥ ಎಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ಎನ್.ಐ. ಆಕ್ಟ್ ಕೇಸುಗಳು, ಬ್ಯಾಂಕ್ ವಿಷಯಗಳು, ಹಣ ವಸೂಲಾತಿ ಕೇಸ್ ಗಳು, ಕಾರ್ಮಿಕ ಸಂಬಂಧಿ ಕೇಸುಗಳು, ವೈವಾಹಿಕ ಸಂಬಂಧಿ ಕೇಸುಗಳು, ಕಂದಾಯ ಕೇಸುಗಳು, ಕರಾರಿಗೆ ಸಂಬಂಧಿಸಿದ ಆದ ವೆಚ್ಚಗಳು, ಬ್ಯಾಂಕ್ ವ್ಯಾಜ್ಯಗಳು, ಕೌಟುಂಬಿಕ ಕಲಹಗಳು, ಕ್ರಿಮಿನಲ್ ಕೇಸ್ ಗಳಲ್ಲಿ ರಾಜಿ ಆಗಬಹುದಾದ ಪ್ರಕರಣಗಳು, ಟ್ರಾಫಿಕ್ ಚಲನ್ ಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಬಗೆಹರಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಿ ಹೆಚ್ಚಿನ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಬಗೆಹರಿಸಬೇಕು ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಈ ಸಂದರ್ಭ ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಇತ್ಯರ್ಥವಾಗಬಹುದಾದ ಪ್ರಕರಣಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಪ್ರಧಾನ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕೆ.ಎಸ್, ಸಹಾಯಕ ಸರಕಾರಿ ಅಭಿಯೋಜಕರಾದ ಹರಿಣಿ ಕುಮಾರಿ ಡಿ, ಸರಸ್ವತಿ, ಅಪರ ಸರಕಾರಿ ವಕೀಲರಾದ ಬಿ.ವೆಂಕಟರಮಣ ಶೆಣೈ, ಪೊಲೀಸ್, ಕಂದಾಯ, ಕಾರ್ಮಿಕ, ತಾಪಂ, ಬ್ಯಾಂಕ್, ಪುರಸಭೆ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.