ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾಧ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಮಂಗಳವಾರ ರಾತ್ರಿ ನೆರವೇರಿತು.
ಫೆ.27ರಂದು ಧ್ವಜಾರೋಹಣ ಮೂಲಕ ಉತ್ಸವ ಆರಂಭಗೊಂಡಿತ್ತು. 28ರಂದು ಬಯನ ಬಲಿ ಉತ್ಸವ, ಸೋಮವಾರ ನಡುಬಲಿ ಮತ್ತು ಪಾಲಕಿ ಉತ್ಸವ ನೆರವೇರಿದವು. ಮಂಗಳವಾರ ಮಹಾ ರಥೋತ್ಸವ ನಡೆಯಿತು. ಈ ಪ್ರಯುಕ್ತ ಸಂಜೆ 5ಕ್ಕೆ ಭಜನೆ ಸಂಕೀರ್ತನೆ ಮತ್ತು ಭಾಗವತ ಪ್ರವಚನ ನಡೆಯಿತು. ರಾತ್ರಿ ಶ್ರೀ ದೇವರ ಮಹಾರಥೋತ್ಸವ ನಡೆಯಿತು. ಬುಧವಾರ ಶ್ರೀ ನಾಲ್ಕೈತ್ತಾಯ ದೈವದ ನೇಮ ನಡೆಯಿತು. ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸೇವಾ ಸಮಿತಿ ಸದಸ್ಯರು, ಊರ, ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ವೇ.ಮೂ.ಮಹೇಶ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಜಾತ್ರೆಯನ್ನು ಆಚರಿಸಲಾಯಿತು.