ಆಲ್ಟೋ ಕಾರೊಂದು ಖಾಸಗಿ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಮಾಣಿ ಮೈಸೂರು ರಸ್ತೆಯ ನೇರಳಕಟ್ಟೆ ಸಮೀಪದ ಗಣೇಶನಗರದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ.ಸುಳ್ಯ ತಾಲೂಕಿನ ಪಂಜ ನಿವಾಸಿ ಚಂದ್ರಹಾಸ ಮತ್ತು ಕಾರು ಚಲಾಯಿಸುತ್ತಿದ್ದ ಅವರ ಪುತ್ರ ಅಜಿತ್ ಗಾಯಾಳುಗಳು.
ಮಂಗಳೂರಿನ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಹಾಸ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಪುತ್ರ ಅಜಿತ್ ಜೊತೆ ಆಲ್ಟೋ ಕಾರಿನಲ್ಲಿ ಪಂಜ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.ಗಣೇಶ ನಗರ ಬಸ್ ಸ್ಟಾಪ್ ನಲ್ಲಿ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ಬಸ್ ನಿಲುಗಡೆಯಾಗಿತ್ತು. ಈ ಸಂದರ್ಭ ಹಿಂದಿನಿಂದ ಬಂದ ಆಲ್ಟೋ ಕಾರು ಬಸ್ ಗೆ ಡಿಕ್ಕಿ ಹೊಡೆದಿದೆ.
ಘಟನೆಯ ತೀವ್ರತೆಗೆ ಚಂದ್ರಹಾಸ ರವರಿಗೆ ತೀವ್ರತರದ ಗಾಯಗಳಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಅಜಿತ್ ರವರಿಗೂ ಗಾಯಗಳಾಗಿವೆ.ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.