ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಗಡೀಪಾರು ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಬಿಡಬೇಕು, ಹಿಂದು ಪರ ಹೋರಾಟಗಾರರ ಹತ್ತಿಕ್ಕುವ ಕೆಲಸ ಕೈಬಿಡಬೇಕು ಎಂದು ಹಿಂಜಾವೇ ಕರ್ನಾಟಕ ದ.ಪ್ರಾಂತ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ಪ್ರಾಂತ ಸಂಚಾಲಕ ಶಿವಾನಂದ ಬಡಿಗೇರ್, ಕೊಪ್ಪಳದ ಶ್ರೀಕಾಂತ್ ಅವರನ್ನೂ ಗಡೀಪಾರು ಮಾಡಲಾಗಿದ್ದು, ಈಗ ರತ್ನಾಕರ ಶೆಟ್ಟಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇದು ಹಿಂದು ಚಳವಳಿಗಾರರನ್ನು ಹತ್ತಿಕ್ಕುವ ಪ್ರಯತ್ನ ಎಂದರು.ಮುಖ್ಯಮಂತ್ರಿ ಕಾಲಿಟ್ಟ ಕಡೆಯಲ್ಲೆಲ್ಲ ಅಶಾಂತಿ ನಿರ್ಮಾಣವಾಗುತ್ತದೆ ಎಂದು ಆರೋಪಿಸಿದ ಅವರು ಸಿಎಂ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡೋದೇ ಬೇಡ ಎಂದರು.
ಜಿಲ್ಲೆಯಲ್ಲಿ ಕೊಲೆ, ಗೂಂಡಾ, ಡ್ರಗ್, ಸೆಕ್ಸ್ ಮಾಫಿಯಾ ರಾಜಾರೋಷವಾಗಿ ನಡೆಯುತ್ತಿದೆ ಇದನ್ನು ಹತ್ತಿಕ್ಕಲು ಸಾಧ್ಯವಾಗದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ದಂಧೆಯ ವಿರುದ್ದ ಹೋರಾಟ ಮಾಡುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಗಡೀಪಾರಿನಂಥ ಶಿಕ್ಷೆ ನೀಡುತ್ತಿದೆ. ರತ್ನಾಕರ ಶೆಟ್ಟಿಯನ್ನು ಯಾವ ಮಾನದಂಡದಲ್ಲಿ ಗಡೀಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೋಮು ಗಲಭೆ, ಗೊಂದಲಗಳಿಗೆ ಸಿಮಿ ಸಂಘಟನೆ ಸಕ್ರಿಯವಾಗಿ ಬೇರೂರಿರುವುದು ಕಾರಣ ಎಂದು ಹೇಳಿದ ಅಡ್ಯಂತಾಯ, ಇವುಗಳಿಗೆ ಬೆಂಬಲ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸಂಘಪರಿವಾರವನ್ನು ಹತ್ತಿಕ್ಕಲು ಹೊರಟಿದೆ ಎಂದರು.
ರತ್ನಾಕರ ಶೆಟ್ಟಿ ಮೇಲಿನ ಗಡೀಪಾರು ರದ್ದತಿಗೆ ಅಗ್ರಹಿಸಿ ಜ.1 ರಿಂದ ಒಂದು ವಾರದ ವರಗೆ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಸಲಾಗುವುದು, ಪುತ್ತೂರಿನಲ್ಲಿ ಬೃಹತ್ ಪಾದಯಾತ್ರೆ ಮಂಗಳವಾರ ಆಯೋಜಿಸಲಾಗಿದ್ದು, ನ್ಯಾಯ ಸಿಗುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹಿಂಜಾವೇ ಕರ್ನಾಟಕ ದ.ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್, ಸರಪಾಡಿ ಅಶೋಕ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ರವಿರಾಜ ಶೆಟ್ಟಿ ಕಡಬ, ಚಂದ್ರಕುಮಾರ್ ಕಲಾಯಿ, ಪ್ರಶಾಂತ್ ಕೆಂಪುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
(more…)