ಕಾಯಿ ತುರಿದ ನಂತರ ಗೆರಟೆಯನ್ನು ಬಿಸಾಡುತ್ತೇವೆ ಅಥವಾ ಒಲೆಗೆ ಹಾಕುತ್ತೇವೆ. ಆದರೆ ನಿತ್ಯ ಜೀವನದಲ್ಲಿ ಹಲವಾರು ಸಂದರ್ಭಗಳಲ್ಲಿ ಗೆರಟೆಯು ಸದುಪಯೋಗವಾಗುತ್ತದೆ.
ಗೆರಟೆಯು ಘನವಾದ ವಸ್ತುಗಳು ಸುಲಭವಾಗಿ ಬೇಯಲು ಸಹಕರಿಸುತ್ತದೆ .ಮಾಂಸ,ಮುಂಡಿ ,ಕೇನೆ ಇತ್ಯಾದಿಗಳನ್ನು ಬೇಯಿಸುವಾಗೆ ಇವುಗಳ ಜೊತೆ 2 ರಿಂದ 3 ತುಂಡು ಗೆರಟೆ ಸೇರಿಸಿದರೆ ಅವುಗಳು ಚೆನ್ನಾಗಿ ಬೆಂದು ಸುಲಭವಾಗಿ ಶರೀರದಲ್ಲಿ ಜೀರ್ಣವಾಗಲು ಸಹಕರಿಸುತ್ತದೆ.
ಗೆರಟೆ ಸಾರು – ಗೆರಟೆಯನ್ನು ಹಾಕಿ ಸಾರು ಮಾಡಿ ಉಪಯೋಗಿಸುವುದರಿಂದ ಜಠರದ ಅಗ್ನಿಬಲ ಮತ್ತು ಜೀರ್ಣಶಕ್ತಿ ಅಧಿಕವಾಗುತ್ತದೆ.
ಗೆರಟೆಯನ್ನು ಪುಡಿಮಾಡಿ ನೀರಿಗೆ ಹಾಕಿ ಕಷಾಯಮಾಡಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ಹಾಗು ನಾಲಿಗೆಯಲ್ಲಿನ ಅಗ್ರ ಕಡಿಮೆಯಾಗುತ್ತದೆ.
ಗೆರಟೆಯ ಕಷಾಯದಲ್ಲಿ ಬಾಯಿ ಮುಕ್ಕಲಿಸುವುದರಿಂದ ಅಥವಾ ಗೆರಟೆಯ ಮಸಿಯನ್ನು ಜೇನುತುಪ್ಪದಲ್ಲಿ ಕಲಸಿ ಹಚ್ಚುವುದರಿಂದ ವಸಡಿನ ರಕ್ತಸ್ರಾವ ಕಡಿಮೆಯಾಗುತ್ತದೆ.
ಗೆರಟೆಯನ್ನು ಉರಿಸಿ ಮಸಿಮಾಡಿ ತೆಂಗಿನ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ತುರಿಕೆ ಇರುವ ಕಜ್ಜಿ (Eczema) ಸೋರಿಯಸಿಸ್ ಇತ್ಯಾದಿ ಚರ್ಮ ರೋಗಗಳು ಕಡಿಮೆಯಾಗುತ್ತದೆ.
ಗೆರಟೆಯ ಮಸಿಯನ್ನು ತೆಂಗಿನ ಎಣ್ಣೆಯಲ್ಲಿ ಕಲಸಿ ಬಿಸಿಮಾಡಿ ಕುರದ ಮೇಲೆ ಹಚ್ಚಿದರೆ ಕುರ ಬೇಗನೆ ಸೊರುತ್ತದೆ.
ಗೆರಟೆಯ ಮಸಿಯನ್ನು ತೆಂಗಿನ ಎಣ್ಣೆಯಲ್ಲಿ ಕಲಸಿ ಹುಣ್ಣಿನ ಮೇಲೆ ಹಚ್ಚುವುದರಿಂದ ಹುಣ್ಣು ಶುದ್ಧವಾಗಿ ಬೇಗನೆ ವಾಸಿಯಾಗುತ್ತದೆ.
ಗೆರಟೆಯ ಮಸಿಯನ್ನು ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ಚರ್ಮದ ಮೇಲಿನ ಸಿಬ್ಬವು ಕಡಿಮೆಯಾಗುತ್ತದೆ.
ಗೆರಟೆಯನ್ನು ಶ್ರೀಗಂಧದಂತೆ ನೀರಿನಲ್ಲಿ ತೇದು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ವಾಸಿಯಾಗುತ್ತವೆ.
ಗೆರಟೆಯನ್ನು ನೀರಿಗೆ ಹಾಕಿ ಕುದಿಸಿ ತಲೆಗೆ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಜಾಹೀರಾತು
Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.