ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ –ಅಂಕಣ 20: ಊರುಮನೆಯಿಂದ ಬಂದ ತುರ್ತುಕರೆ !

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 20ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ಜಾಹೀರಾತು

ಊರುಮನೆಯಿಂದ ಬಂದ ತುರ್ತುಕರೆ ! 

ಹೊಸಪತ್ರಿಕೆಯನ್ನು ಹೊರಡಿಸುವ ವಿಚಾರವಾಗಿ ಮಂಗಳೂರು ಪುತ್ತೂರುಗಳಲ್ಲಿ ನಡೆದ ಎರಡು ಸಮಾಲೋಚನೆಗಳಲ್ಲೂ ನಾನು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿರಲಿಲ್ಲ. ಮಾಜಿ ಸಹೋದ್ಯೋಗಿಗಳಿಗೆ ನನ್ನಲ್ಲಿರುವ ಮಾಹಿತಿಯನ್ನಷ್ಟೇ ಒದಗಿಸಿದ್ದೆ.
ದಿನಪತ್ರಿಕೆ ಪ್ರಾರಂಭಿಸಿ, ಅದನ್ನು ನಷ್ಟವಿಲ್ಲದೆ ನಡೆಸಬೇಕಾದರೆ ಅಗತ್ಯವಿರುವ ಧನಬಲ ಆ ಸಹೋದ್ಯೋಗಿಗಳ ತಂಡಕ್ಕೆ ಲಭ್ಯವಾಗುವ ಬಗ್ಗೆ ನನ್ನಲ್ಲಿದ್ದ ಅನುಮಾನವೇ ಆ ಆಸಕ್ತಿಲೋಪದ ಮುಖ್ಯ ಕಾರಣವಾಗಿತ್ತು. ಆದ್ದರಿಂದ, ಅವರಾಗಿಯೇ ಕೇಳಿದ್ದ ವಿವರಗಳನ್ನು ಕೊಟ್ಟಿದ್ದೆ. ಹೊರತು, ನಾನಾಗಿ ಯಾವ ವಿವರವನ್ನೂ ವಿಚಾರಿಸುವ ಗೋಜಿಗೆ ಹೋಗಿರಲಿಲ್ಲ.

1970ರ ದಶಕದ ಛಾಯಾಚಿತ್ರ: ದಿ ಹಿಂದೂ ಪತ್ರಿಕೆಯ ಮಂಗಳೂರು ಪ್ರತಿನಿಧಿ ಶ್ರೀ ಯು. ನರಸಿಂಹ ರಾವ್ ಜೊತೆ ಸಂಯುಕ್ತ ಕರ್ನಾಟಕ ಮಂಗಳೂರು ಪ್ರತಿನಿಧಿ ಶ್ರೀ ಪ.ಗೋಪಾಲಕೃಷ್ಣ. ಛಾಯಾಚಿತ್ರದ ಇಬ್ಬರು ಪೂರ್ಣ ಶ್ವೇತ ವಸ್ತ್ರದಾರಿಗಳು ಕಲಾದರ್ಶನ ಪತ್ರಿಕೆಯ ಸಂಪಾದಕ ಶ್ರೀ ವಿ.ಬಿ. ಹೊಸಮನೆ ಮತ್ತು ಉದಯವಾಣಿ – ಮಂಗಳೂರು ವರದಿಗಾರರಾದ ಶ್ರೀ ಎ. ವಿ.ಮಯ್ಯರು.

ದೇಶದ ಇತರ ಹಲವೆಡೆಗಳಲ್ಲಿ ಇರುವಂತೆ, ಇಲ್ಲಿನ ಪತ್ರಿಕೋದ್ಯಮಿಗಳೂ ಜೊತೆ ಸೇರಿ ಒಂದು ಪತ್ರಿಕೆ ನಡೆಸುವ ಕನಸು ಕಾಣುತ್ತಿದ್ದಾರೆ. ಆ ಕನಸನ್ನು ನನಸಾಗಿಸುವ ಚಾತುರ್ಯ ಅವರಲ್ಲಿರಲಾರದೆಂದು ಎಂದೇ ಭಾವಿಸಿದ್ದೆ. ವಿವಿಧ ಮೂಲಗಳ ಮೇಲೆ ವರ್ಚಸ್ಸು ಬೀರಿ ಗಳಿಸಿದ್ದ ಹೇರಳ ಬೆಂಬಲದ ಹೊರತಾಗಿಯೂ, ಕೆಲವೇ ಕೆಲವು ದಿನ ಪ್ರಕಟಗೊಂಡು ಅನಂತರ ಸದ್ದಿಲ್ಲದೆ ಕಣ್ಣುಮುಚ್ಚಿದ್ದ ಮುಂಬಯಿಯ ನ್ಯೂಸ್ ಡೇ, ಮದರಾಸಿನ ಡೈಲಿ ಡಿಸ್ಪ್ಯಾಚ್ ದೈನಿಕಗಳ ನಿದರ್ಶನ ಅವು ಪತ್ರಕರ್ತರ ಸಂಘಟಿತ ಸಾಹಸಗಳೆಂಬ ಹಿನ್ನೆಲೆಗಳು ಮರೆತು ಹೋಗುವಷ್ಟು ಹಳೆಯದಾಗಿರಲಿಲ್ಲ.
ಹಾಗಾಗಿ, “ಮುಂದೆ ಏನಾದರೂ ಮಾಡುವಾಗ, ನನ್ನ ಸಲಹೆ ಬೇಕಾದರೆ ಕೇಳಿಎಂಬ ಔಪಚಾರಿಕ ಮಾತು ಹೇಳಿ, ಕೃಷ್ಣ ಕುಡ್ವರನ್ನು ಬೀಳ್ಕೊಟ್ಟಿದ್ದೆ.
ಅನಂತರದ ಕೆಲವು ತಿಂಗಳುಗಳಲ್ಲಿ ನಡೆದ ಘಟನಾವಳಿಗಳು, ‘ಬೇರೆಲ್ಲ ವಿಷಯಗಳನ್ನೂ ಮರೆತುಬದುಕಿಗಾಗಿ ಹೋರಾಡಬೇಕಾದಪರಿಸ್ಥಿತಿಗೆ ನನ್ನನ್ನು ತಳ್ಳಿದವು.
ಮೊದಲನೆಯ ಘಟನೆಗೆ, ಸ್ನೇಹದ ಮುಲಾಜಿನಲ್ಲಿ ಉದ್ಯೋಗವಿತ್ತಿದ್ದ ವಿಚಾರವಾಣಿ ಸಂಪಾದಕರ ವರ್ತನೆಯಲ್ಲಾದ ಬದಲಾವಣೆ ಕಾರಣ. ಪತ್ರಿಕೆಯ ಕಟ್ಟುಗಳನ್ನು ಅಂಚೆ ಕಚೇರಿಗೆ ಸ್ವತಃ ನಾನು ಒಯ್ಯಲಿಲ್ಲವೆನ್ನುವಲೋಪಕ್ಕೆನಿನ್ನನ್ನು ಸಸ್ಪೆಂಡ್ ಮಾಡಿದ್ದೇನೆಎಂಬ ನುಡಿ, ಗೆಳೆಯನಿಂದ ಬಂದು ಆಘಾತವಿತ್ತಿತ್ತು. ತುದಿನಾಲಿಗೆಯವರೆಗೆ ಬಂದಿದ್ದ ಶಬ್ದಗಳನ್ನು ತಡೆಹಿಡಿದು,ಕಾರ್ಯಾಲಯದಿಂದ ಕಾಲ್ಕಿತ್ತೆ. ‘ಮುಂದೇನು?’ ಎಂದು ಯೋಚಿಸಲೂ ಮತ್ತೆ ಮೂರು ದಿನ ಬೇಕಾಯಿತು.
ಅನಂತರದ ದಿನಗಳಲ್ಲಿ ಕೆಲವು ದಿನಗಳ ವೆಚ್ಚಕ್ಕೆ ಸಾಲುವಷ್ಟು ಹಣವನ್ನು ಅವರಿವರಿಂದ ಸಂಗ್ರಹಿಸಿ ಮನೆಗಿತ್ತೆ. ವಾರ್ತಾಲೋಕ ದಿನಪತ್ರಿಕೆ ಹೊರಡಿಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನೂ ಸಲ್ಲಿಸಿದೆ. ಮನೆಯಲ್ಲೇ ಅರ್ಧ ತಯಾರಾಗಿ ಉಳಿದಿದ್ದ ಒಂದು ಗೋಲಕ(ಸಿಲಿಂಡರ್)ವನ್ನು, ಮುದ್ರಣದ ಕರಡು ಪ್ರತಿ ತೆಗೆಯಲು ಸಾಧ್ಯವಾಗುವಷ್ಟಕ್ಕೆ ಹೊಂದಿಸಿಕೊಂಡೆ.ಮಂಗಳೂರಿನಲ್ಲಿದ್ದ ಸಹಕಾರಿ ಧುರೀಣ ಬಿ. ನಾರಾಯಣ ನಾಯಕರಿಂದ ಎರವಲಾಗಿ ಒಂದುಕೇಸ್ನಷ್ಟು ಅಚ್ಚುಮೊಳೆಗಳನ್ನು ಪಡೆದು ತಂದು, ಒಂದು ಮುಂಜಾನೆವಾರ್ತಾ ಪ್ರೆಸ್ಎಂದು ಬೋರ್ಡ್ ತಗಲಿಸಿಸ್ವಂತ ಮುದ್ರಣಾಲಯವನ್ನು ತೆರೆದೇ ಬಿಟ್ಟೆ!
ಮುದ್ರಣಕಾರ್ಯದ ತಾಂತ್ರಿಕ ಪರಿಣತಿ ಅಥವಾ ವ್ಯಾವಹಾರಿಕ ಪರಿಜ್ಞಾನಗಳಿಲ್ಲದೆ ಆರಂಭಿಸಿದ್ದ ಆ ಹುಚ್ಚು ಸಾಹಸಕ್ಕೂ ಒಬ್ಬಿಬ್ಬರುಗ್ರಾಹಕರುದೊರೆತರು. ಒಬ್ಬರು ತಮ್ಮದೊಂದು ಪುಸ್ತಕದ ಮುದ್ರಣವಾಗಬೇಕೆಂದರು. ಇನ್ನೊಬ್ಬರು ತನಗೆ ಅವಶ್ಯವಿದ್ದ ಚುನಾವಣಾ ಭಿತ್ತಿ ಪತ್ರ (ಪೋಸ್ಟರ್) ತಯಾರಿಸಲು ಹೇಳಿದರು. ಆದರೆ ಮುಂದೆ ?
ಪುಸ್ತಕದ ಎರಡನೇಫಾರ್ಮ್ಅಚ್ಚುಹಾಕುತ್ತಿದ್ದೆನಷ್ಟೆ. (ಆಚೀಚೆ ಕೈಯಲ್ಲೇ ಉರುಳಿಸುವ) ‘ಸಿಲಿಂಡರ್ಮುಷ್ಕರ ಹೂಡಿತು. ಮತ್ತೆ,ಕೊರೆದು ಅಂಟಿಸಿದ್ದ ಲೈನೋಲಿಯಂ ಮತ್ತು ರಬ್ಬರ್ ಗಳ ಪೋಸ್ಟರ್ ಅಕ್ಷರಗಳು, ಶಾಯಿ ತಗುಲಿಸಿದ ರೋಲರ್ ನ ಜೊತೆಗೇ ಎದ್ದು ಬಂದವು. ಮುಂದೆ, ಮುದ್ರಣಯಂತ್ರ ಕೊಳ್ಳಲು ಆರ್ಥಿಕ ಭರವಸೆ ನೀಡಿದ್ದ ಸಹಕಾರಿ ಬ್ಯಾಂಕ್ ಅಧಿಕಾರಿಗಳು, ಆಶ್ವಾಸನೆ ಹಿಂತೆಗೆದರು. ( ಊರಿನಲ್ಲಿದ್ದ ಇತರ ವೃತ್ತಿಪರ ಮುದ್ರಣಾಲಯಗಳವರು ನನ್ನ ಬಗ್ಗೆ ಏನೂ ಆಡಿಕೊಳ್ಳದೇ ಸುಮ್ಮನಿದ್ದುದೇ, ಆ ದಿನಗಳ ಒಂದು ವಿಶೇಷ) ಹಾಗಾಗಿ
ಅನುಮತಿ ದೊರೆತಿದ್ದರೂ ಆರಂಭಿಸಲಾಗದ ವಾರ್ತಾಲೋಕ ಮತ್ತುನಡೆಯಲುಒಲ್ಲದ ವಾರ್ತಾಪ್ರೆಸ್ಇವೆರಡರ್ ಇತಿಶ್ರೀ ಹಾಡಲು ಹೆಚ್ಚು ದಿನ ತಗಲಲಿಲ್ಲ. ಉಳಿಯಳಿ ಸಾಧ್ಯವಾಗದ ಊರಿನಲ್ಲಿ ಬದುಕುವುದು ಹೇಗೆ ? ಎನ್ನಿಸಿತು. ಕೈಗಂಟು ಇಲ್ಲದೆ ಏನೂ ಸಾಗದೆಂಬ ಕಟುಸತ್ಯ ಎದುರಾಯಿತು. ಅನಿವಾರ್ಯವೆನ್ನುವ ಪರಿಸ್ಥಿತಿಯಲ್ಲಿ ಮನೆಆಸ್ತಿಯ ಪಾಲು ಕೇಳುವುದಲ್ಲದೆ ಬೇರೆ ದಾರಿ ಇಲ್ಲ ಎಂದುಕೊಂಡು, ಕುಟುಂಬನ್ಯಾಯಾಲಯದಲ್ಲಿ ನನ್ನ ಬೇಡಿಕೆ ಮಂಡಿಸಿದೆ. ಅದನ್ನು ಪೂರೈಸುವವರೆಗೂ,ಒತ್ತಡದಾಳುಗಳಾಗಿ ನನ್ನ ಸಂಸಾರದವರನ್ನು ಊರುಮನೆಯಲ್ಲೇ ಬಿಟ್ಟು ಪಾಲುಪಂಚಾಯಿತಿ ಮಧ್ಯಸ್ಥಿಕೆ ಮಾಡಲೊಪ್ಪಿದ್ದ ಹಿರಿಯರೊಬ್ಬರನ್ನು ಕರೆದುತರಲು ಅವರ ಮನೆಗೆ ಹೋದೆ.
ಒಂದೆರಡು ದಿನ ಅವರಲ್ಲಿ ಉಳಿದರೆ ಅವರನ್ನು ಕರೆದೊಯ್ಯಲು ಸಾಧ್ಯವೆಂದು ಭಾವಿಸಿದ್ದ ನನ್ನ ನಿರೀಕ್ಷೆ ಹುಸಿಯಾಯಿತು. ಹಲವು ದಿನಗಳ ಠಿಕಾಣಿಯ ನಂತರವೂ, ಬೇರೆ ಬೇರೆಇಬ್ಬಂದಿಕಾರಣಗಳನ್ನೊಡ್ಡಿ ನನ್ನೊಡನೆ ಹೊರಡುವ ದಿನವನ್ನು ಅವರು ಮುಂದೂಡುತ್ತಾ ಹೋದರು. ನನಗೋ, ಇತರತ್ರ ಗತಿರ್ನಾಸ್ತಿ ! “ನೀವು ನನ್ನೊಂದಿಗೆ ಹೊರಡುವವರೆಗೂ ನಿಮ್ಮಲ್ಲಿಂದ ಕದಲುವುದಿಲ್ಲವೆಂಬ ಮುಷ್ಕರದ ಬೆದರಿಕೆಯೂ ಪ್ರಯೋಜನ ಕೊಡಲಿಲ್ಲ. “ಮುಂದಿನ ಸೋಮವಾರ ಖಂಡಿತಾ ಹೋಗೋಣವೆಂಬ ಪೊಳ್ಳು ಆಶ್ವಾಸನೆಗಳ ಪುನರಾವರ್ತನೆಯಷ್ಟೆ, ಮೂರು ಬಾರಿ ಆಯಿತು.
ಮಾಡಲು ಬೇರೆನೂ ಕೆಲಸವಿಲ್ಲದೆ ಬರಿಯ ಅನ್ನಧ್ವಂಸಿಯಾಗಿರಬೇಕಾದ್ದಕ್ಕೆ ಪರಿತಾಪ ಪಡುತ್ತಿದ್ದ ಆ ದಿನಗಳಲ್ಲಿ ಒಮ್ಮೆ ಯಾರೋ ಅತಿಥಿ ಬಿಟ್ಟು ಹೋಗಿದ್ದ ನವಭಾರತದಲ್ಲಿಮೊನ್ನೆಯ ಅಶಿಸ್ತಿನ ಮುಷ್ಕರದ ಕಾರಣ ನಿನ್ನೆ ನವಭಾರತ ಪ್ರಕಟವಾಗಲಿಲ್ಲವೆಂಬ ಒಂದು ವಿವರಣೆ ಕಂಡಿದ್ದೆ. ಆದರೆ, ಬೇಗುದಿಯ ತೊಳಲಾಟದಲ್ಲಿದ್ದುದರಿಂದ ವಿವರ ಹುಡುಕುವಷ್ಟು ಅಥವಾ ಪತ್ರಿಕೆಯ ದಿನಾಂಕವನ್ನಾದರೂ ಗಮನಿಸುವಷ್ಟು ತಾಳ್ಮೆ ಇರಲಿಲ್ಲ. ಮಳೆಗಾಲ ಆರಂಭದ ಮಂಕೂ ಮನಸ್ಸನ್ನು ಬಡಿದಿತ್ತು.
ಇದ್ದಕ್ಕಿದ್ದ ಹಾಗೆ, ಒಂದು ರಾತ್ರಿ ಊರುಮನೆಯಿಂದ ತುರ್ತುಕರೆ ಬಾರದೆ ಇರುತ್ತಿದ್ದರೆ, ಆ ಹಿರಿಯರ ಮನೆಯಲ್ಲೇ ಕೊಳೆತುಹೋಗುತ್ತಿದ್ದೆನೋ ಏನೊ ! ನನ್ನನ್ನು ಕರೆಯಲು ಬಂದಾತ ನನ್ನ ಪತ್ನಿ ಪ್ರಸವವೇದನೆಯಲ್ಲಿದ್ದಾಳೆ ಎಂದು ತಿಳಿಸಿ ಕೂಡಲೆ ನನ್ನನ್ನು ಹೊರಡಿಸಿದ. ‘ಹೇಗಾದರೂನಾನು ಮನೆ ಮುಟ್ಟುವಾಗ ನನ್ನ ದ್ವಿತೀಯ ಪುತ್ರೋತ್ಸವ ಆಗಿಯೇ ಹೋಗಿತ್ತು.
ಮರುದಿನ ಬೆಳಗ್ಗೆ, ನನ್ನವಳುಅದುವರೆಗೂ ಜೋಪಾನವಾಗಿರಿಸಿದ್ದಒಂದು ಅಂತರ್ದೇಶೀಯ ಪತ್ರವನ್ನು ನನ್ನ ಕೈಗಿತ್ತು, ನನ್ನ ಪತ್ರಕರ್ತ ಜೀವನಕ್ಕೆ ಇನ್ನೊಂದು ತಿರುವು ಒದಗಿಸಿದಳು.
ಹಿರಿಯ ಪತ್ರಕರ್ತ ಯು.ನರಸಿಂಹ ರಾಯರು ಕೆಲವು ವಾರಗಳ ಹಿಂದೆ ಬರೆದಿದ್ದ ಆ ಪತ್ರವನ್ನು ಓದುತ್ತಿದ್ದಂತೆ ಚಡಪಡಿಕೆ ಹೆಚ್ಚಿಸಿತು. ಈಗ ಕಾಲ ಮೀರಿ ಹೋಯಿತೆ ? ಸಿಕ್ಕಲಿದ್ದ ಅವಕಾಶ ಕೈತಪ್ಪಿತೆ ? ಎಂಬೆಲ್ಲ ಯೋಚನೆಗಳು ಮುತ್ತಿಕೊಂಡವು.ಪಾಲಿಗಾಗಿ ನಡೆಸುತ್ತಿದ್ದ ಪರದಾಟ ಕೂಡಾ ಮರೆತುಹೋಯಿತು.
ಮಂಗಳೂರಿಗೆ ಹೋಗಲೇಬೇಕಾಗಿ ಬಂದ ಸನ್ನಿವೇಶವನ್ನು ಅರ್ಧಾಂಗಿಗೆ ವಿವರಿಸಿ, ಮರುದಿನವೇ ಹೊರಡಲು ಅವಳ ಒಪ್ಪಿಗೆಯನ್ನು ಪಡೆದೆ. ಬಸ್ ಛಾರ್ಜನ್ನು ಒಬ್ಬ ಹಿತೈಷಿಯಿಂದ ಸಂಗ್ರಹಿಸಿ, ಮರುದಿನ ಹಂಪನಕಟ್ಟೆಯಲ್ಲಿ ಬಂದಿಳಿದೆ.
ನವಭಾರತದ ಕಂಪೋಸಿಂಗ್ ವಿಭಾಗದ ನೌಕರರು, ವೇತನತುಟ್ಟಿಭತ್ತಗಳ ಹೆಚ್ಚಳ, ಕೆಲವರ ನೌಕರಿಯ ಖಾಯಮಾತಿ,ಕ್ರಮಬದ್ಧ ವರ್ಗೀಕರಣ ಇತ್ಯಾದಿ ಬೇಡಿಕೆಗಳನ್ನು ಆಧರಿಸಿ ಮುಷ್ಕರ ಹೂಡಿದ್ದರು. ಅವರಿಗೆ ಸಹಾನುಭೂತಿಯ ಬೆಂಬಲ ಸೂಚಿಸಿದ ಸಂಪಾದಕೀಯ ಸಿಬ್ಬಂದಿಯವರು ತಮ್ಮ ಪ್ರತ್ಯೇಕ ಬೇಡಿಕೆಗಳನ್ನೂ ಆಗಲೇ ಮುಂದಿಟ್ಟು ಕುಡ್ವರ ಸಾಮೂಹಿಕ ಉಗ್ರ ಕ್ರಮಕ್ಕೆ ಒಳಗಾದರು. ಬಹಳ ಮಂದಿಯನ್ನು ನೌಕರಿಯಿಂದ ವಜಾ ಮಾಡಿದ್ದರಿಂದಾಗಿ ನಿಂತುಹೋದ ಪ್ರಕಟಣೆ, ಕೆಲವರುನಿಷ್ಠರು ಮತ್ತು ಇತರ ಇಬ್ಬರುಅವಕಾಶಪ್ರಾಪ್ತರಸಹಾಯದಿಂದ ಕೆಲವು ದಿನ ಕಳೆದು ಪುನರಾರಂಭವಾಯಿತುಎಂಬೆಲ್ಲ ವಿವರಗಳನ್ನು ಹಿರಿಯ ಪತ್ರಿಕೋದ್ಯಮಿ ಕೆ.ಎಸ್.ಉಪಾಧ್ಯಯರಿಂದ, ಬಂದ ಅರ್ಧ ಗಂಟೆಯಲ್ಲೇ ಸಂಗ್ರಹಿಸಿ, ಮುಂದಿನ ಪಯಣ ಬೆಳೆಸಿದೆರಥಬೀದಿಯಲ್ಲಿದ್ದ ನರಸಿಂಹರಾಯರ ಸಾಮ್ರಾಜ್ಯದತ್ತ…. ತಮ್ಮಕನ್ನಡವಾಣಿಬಳಗ ಸೇರಲು ನನಗಿತ್ತಿದ್ದ ಆಹ್ವಾನದಸ್ಥಿತಿತಿಳಿಯಲು.
(ಮುಂದಿನ ಭಾಗದಲ್ಲಿ)

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ