ನಮ್ಮ ಭಾಷೆ

ಪತ್ತನಾಜೆ ಬಂತು, ಇನ್ನು ಕೃಷಿಯತ್ತ ತುಳುವರ ಚಿತ್ತ

  • ಬಿ.ತಮ್ಮಯ್ಯ
  • ಅಂಕಣ: ನಮ್ಮ ಭಾಷೆ

ಬೇಸ ತಿಂಗಳ ಹತ್ತನೇ ದಿನವನ್ನು ಪತ್ತನಾಜೆ ಎಂದು ತುಳುವರು ಆಚರಣೆ ಮಾಡುತ್ತಾರೆ. ಇದು ಸಾಮಾನ್ಯವಾಗಿ ಮೇ ತಿಂಗಳ 24ರಂದು ಬರುತ್ತದೆ.

ಜಾಹೀರಾತು

ಬೇಶ ತಿಂಗಳ 10ನೇ ದಿನವೇ ಪತ್ತನಾಜೆ. ಈ ದಿನ ಮಳೆಗಾಲದ ಪ್ರಾರಂಭ ಎಂಬ ನಂಬಿಕೆ ತುಳುವರದ್ದು. ಹಿಂದಿನ ಕಾಲದಲ್ಲಿ ಪಗ್ಗು ತಿಂಗಳಲ್ಲಿ ಎಲ್ಲ ರೈತರು ಮಳೆಗಾಲದ ಸ್ವಾಗತಕ್ಕೆ ತಮ್ಮ ಮಳೆಗಾಲದ ತಯಾರಿ ಕೆಲಸಗಳನ್ನು ಮಾಡುವ ಕ್ರಮವಿತ್ತು. ದನದ ಹಟ್ಟಿಗೆ ಬೇಕಾದ ತರಗೆಲೆ ರಾಶಿಯನ್ನು ಮಾಡುವುದು, ಮಳೆಗಾಲಕ್ಕೆ ಬೇಕಾದ ಕಟ್ಟಿಗೆಯನ್ನು ಶೇಖರಿಸಿ ಇಡುವುದನ್ನು ಮಾಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಂಕ್ರೀಟ್ ಹಟ್ಟಿಗೆ ನೀರು ಹಾಕಿ ತೊಳೆಯುವುದು, ಕಟ್ಟಿಗೆ ಬದಲಿಗೆ ಗ್ಯಾಸ್ ಬಂದಿದೆ. ಆದ್ದರಿಂದ ಪತ್ತನಾಜೆ ತಯಾರಿ ಕೆಲಸ ಈಗಿಲ್ಲ.

ಎಲ್ಲ ಕಡೆ ಚಳಿಗಾಲ, ಮಳೆಗಾಲ ಮತ್ತು ಬೇಸಗೆ ಕಾಲ ಎಂಬ ಮಾತಿದ್ದರೆ ತುಳುನಾಡಿನಲ್ಲಿ ಬೇಸಗೆ ಕಾಲ ಮತ್ತು ಮಳೆಗಾಲ ಇರುತ್ತದೆ. ಈಗಂತೂ ಚಳಿಗಾಲವೇ ಮಾಯವಾಗಿದೆ. 1965ರಲ್ಲಿ ಜನವರಿಗೆ ಮಳೆ ಬರುವುದಿತ್ತು. ಶಾಲಾ ವಾರ್ಷಿಕೋತ್ಸವ ಫೆಬ್ರವರಿ ಮೊದಲು ಮುಗಿಸಬೇಕು. ಇಲ್ಲವಾದರೆ ಮಳೆ ಅಡಚಣೆ.

ಮಳೆಗಾಲದಲ್ಲಿ ಇಲ್ಲಿ ಯಾವ ಕಾರ್ಯಕ್ರಮವನ್ನೂ ಮಾಡುತ್ತಿರಲಿಲ್ಲ. ಅಷ್ಟು ದೊಡ್ಡ ರೀತಿಯಲ್ಲಿ ಮಳೆ ಬರುತ್ತಿತ್ತು. ಎಲ್ಲ ಯಕ್ಷಗಾನದ ಮೇಳಗಳು ಪತ್ತನಾಜೆ ಸೇವೆ ಮುಗಿಸಿ, ಮೇಳವನ್ನು ಬಂದ್ ಮಾಡುತ್ತವೆ. ಎಲ್ಲ ಕುಟುಂಬ ದೈವಗಳ ನೇಮ ಅಗೇಲು ಪರ್ವವನ್ನು ಪತ್ತನಾಜೆ ಮೊದಲು ಮುಗಿಸಿ ದೈವಸ್ಥಾನಗಳಿಗೆ ಬಾಗಿಲು ಹಾಕಲಾಗುತ್ತದೆ.

ಜಾಹೀರಾತು

ದೇವಸ್ಥಾನಗಳಲ್ಲಿನ ಜಾತ್ರೆ, ನಡಾವಳಿ, ಬಲಿ ಎಲ್ಲ ಮುಗಿಸಿ, ಪತ್ತನಾಜೆ ವಿಶೇಷ ಸೇವೆ ಸಲ್ಲಿಸಿ ಮೂರು ಹೊತ್ತು ಪೂಜೆ ಮಾತ್ರ ನಡೆಸಲಾಗುತ್ತದೆ. ಊರಿನ ದೈವಗಳಿಗೆ ಪತ್ತನಾಜೆ ನಂತರ ಜಾತ್ರೆ, ನೇಮ, ಅಗೇಲು, ತಂಬಿಲ, ಆಟ, ನಾಟಕ ಯಾವುದು ಇಲ್ಲ. ಪತ್ತನಾಜೆ ಪೂಜೆ ಸಲ್ಲಿಸಿ, ಬಾಗಿಲು ಹಾಕುತ್ತಾರೆ. ಮದುವೆ, ಮುಂಜಿ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಪತ್ತನಾಜೆಗೆ ಬೇಟೆಯಾಡಿ ಪ್ರಾಣಿಗಳನ್ನು ಕೃಷಿ ಕ್ಷೇತ್ರದಿಂದ ದೂರ ಮಾಡಿಸುವ ಕ್ರಮವಿತ್ತು. ಮಾಂಸಾಹಾರಿಗಳು ಪತ್ತನಾಜೆಗೆ ಮಾಂಸದ ಊಟ ಮಾಡಿ ಏಣೆಲು ಬೇಸಾಯ ತಯಾರಿಗೆ ತೊಡಗುತ್ತಾರೆ. ಎಲ್ಲ ತುಳುವರ ಗಮನ ಕೃಷಿಯ ಕಡೆಗೆ ಹೋಗುತ್ತದೆ. ಪತ್ತನಾಜೆಗೆ ಹತ್ತು ಹನಿ ಮಳೆ ಬೀಳಲೇಬೇಕು ಎಂಬ ನಂಬಿಕೆ ತುಳುವರಲ್ಲಿದೆ. ಪತ್ತಾಜೆಯಂದು ತುಳುವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮಳೆಗಾಲದ ಪ್ರಾರಂಭದ ದಿನವಾಗಿ ತುಳುವರ ಮನದಲ್ಲಿ ಸ್ಥಿರವಾಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.