www.bantwalnews.com report
ಸರಕಾರಿ ಶಾಲೆ ಉಳಿಸುವ ಮೂಲಕ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮಣ್ಣಿನ ಋಣ ತೀರಿಸಿದೆ ಎಂದು ಕೇಂದ್ರದ ರಾಸಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದರು.
ಮೂಡನಡು ಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗ ಫ್ರೆಂಡ್ಸ್ ಕ್ಲ ದಶಮಾನೋತ್ಸವದ ಅಂಗವಾಗಿ ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಎದ್ದು ನಿಲ್ಲದೇ ಇದ್ದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಲು ಸಾಧ್ಯವಿಲ್ಲ. ಭಾರತಕ್ಕೆ ನಿದರ್ಶನ ಈ ದಡ್ಡಲಕಾಡು ಶಾಲೆ. ಸರಕಾರಿ ಶಾಲೆಗಳ ವಿಸ್ತೃತ ಅಧ್ಯಯನ ವರದಿ ತಯಾರಿಸಿ ಕೊಟ್ಟರೆ ಅದರ ಬಗ್ಗೆ ರಾಜ್ಯ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇವೆ. ದೇಶದ ಪ್ರಧಾನ ಮಂತ್ರಿಗೂ ಕೂಡ ನೀಡಿ ಅವರ ಗಮನ ಸೆಳೆಯುತ್ತೇವೆ. ಕೇಂದ್ರದ ಶಿಕ್ಷಣ ಸಚಿವ ಪ್ರಕಾಶ್ ಜಾವ್ಡೇಕಾರ್ ಅವರನ್ನು ದಡ್ಡಲಕಾಡು ಶಾಲೆಗೆ ಕರೆ ತರುತ್ತೇವೆ ಎಂದರು.
ಬಡವರಿಗೆ ಶಿಕ್ಷಣ ನೀಡಬೇಕು ಎನ್ನುವ ನಾರಾಯಣ ಗುರುಗಳ ಮಾತನಂತೆ ಈ ಶಾಲೆ ನಿರ್ಮಾಣಗೊಂಡಿರುವುದು ನನಗೂ ಪ್ರೇರಣೆ ನೀಡಿದೆ ಎಂದು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಓದಿದರೆ ಮಕ್ಕಳು ದಡ್ಡರಾಗುತ್ತಾರೆ ಎನ್ನುವ ಭಾವನೆ ಪೋಷಕರಲ್ಲಿ ಇರಬಾರದು. ಶಾಲೆಯ ಅಭಿವೃದ್ದಿಯ ದೃಷ್ಟಿಯಿಂದ ನೀವು ಕೇಳುವ ಸಹಕಾರಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜಸ್ಥಾನದ ಮೋಹನ್ ಚೌದರಿ ಅನಿಸಿಕೆ ವ್ಯಕ್ತಪಡಿಸಿದರು. ಸಂಸದ ನಳೀನ್ ಕುಮಾರ್ ಕಟೀಲು, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪಕೋಟ್ಯಾನ್, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಸ್ಥಾಪಕ ಶಿಕ್ಷಕ ಸಂಜೀವಗೌಡ, ಕೆನರಾ ಬ್ಯಾಂಕಿನ ಪ್ರಬಂಧಕ ಮನೋಹರ ನಾಯಕ್, ನಮ್ಮ ಕುಡ್ಲ ಚಾನೆಲ್ನ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಪಂಜಿಕಲ್ಲು ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮೀನಾರಯಣ ಗೌಡ, ಸದಸ್ಯ ಕೇಶವ ಗೌಡ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಉದ್ಯಮಿ ಬಶೀರ್ ಅಹಮ್ಮದ್, ರೂಪಶ್ರೀ ಗಂಘಾಧರ್, ಸೋಮು ತಮಿಳುನಾಡು, ಕೃಷ್ಣಮೂರ್ತಿ ತಮಿಳುನಾಡು,ರಾಜೇಶ್ ಕುಮಾರ್ ರಾಜಾಸ್ಥಾನ, ಇಂದರ್ ಸಿಂಗ್ ಠಾಕೂರು, ಶಾಲಾ ಮುಖ್ಯಶಿಕ್ಷಕ ಮೌರಿಸ್ ಡಿ’ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಪುರುಷೋತ್ತಮ ಅಂಚನ್ ನಿರೂಪಿಸಿ ವಂದಿಸಿದರು.
ವಾಹನ ಜಾಥಾ
ಏಕರೂಪ ಶಿಕ್ಷಣ ಪದ್ದತಿ ಜಾರಿಗೊಳಿಸುವುದಕ್ಕಾಗಿ ಒಂದೇ ದೇಶ, ಒಂದೇ ಶಿಕ್ಷಣ, ಎನ್ನುವ ಘೋಷವಾಕ್ಯದಡಿ ಬೃಹತ್ ವಾಹನ ಜಾಥ ನಡೆಯಿತು. ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ವಾಹನಜಾಥಕ್ಕೆ ಚಾಲನೆ ನೀಡಿದರು. ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮತ್ತಿತರರು ಹಾಜರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ