ಎಡನೀರು ಸಂಸ್ಥಾನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ 6 ನೆಯ ಚಾತುರ್ಮಾಸ್ಯ ಜು. 29ರಿಂದ ಸೆ. 26ರವರೆಗೆ ಎಡನೀರು ಶ್ರೀಮಠದಲ್ಲಿ ಜರಗಲಿದೆ. ಆ ಪ್ರಯುಕ್ತ ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸೇವೆಯನ್ನು ಸೆ. 6 ರಂದು ಸಮರ್ಪಿಸಲಾಗುವುದು ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಹೇಳಿದರು.
ಬಿ.ಸಿ.ರೋಡು ಕನ್ನಡ ಭವನದಲ್ಲಿ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ದೇವಪ್ಪ ಕುಲಾಲ್ ಎಲ್ಲರ ಸಹಕಾರವನ್ನು ಯಾಚಿಸಿದರು. ಸಭೆಯಲ್ಲಿ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಪ್ರೊ. ಸುಬ್ರಾಯ ಮಡಿವಾಳ, ಕಾರ್ಯಾಧ್ಯಕ್ಷ ರಾಮ್ ಗಣೇಶ್ ಕೈಕುಂಜೆ , ಕಾರ್ಯದರ್ಶಿ ರಾಜಾರಾಮ ಐತಾಳ್ ಕಂದೂರು, ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ ಉಪಸ್ಥಿತರಿದ್ದರು.
ಇದೇ ಸಂದರ್ಭ ಆಗಸ್ಟ್. 9ರಂದು ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ನಡೆಯಲಿರುವ ಹಿರಿಯರ ಚಿಂತನಾ ಸಮಾವೇಶದ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ರಾಕೋಡಿ ಈಶ್ವರ ಭಟ್, ಬೆತ್ತಸರವು ನಾರಾಯಣ ಭಟ್, ಪ್ರೊ.ರಾಜಮಣಿ ರಾಮಕುಂಜ, ಜಗದೀಶ ಹೊಳ್ಳ ಮೊದಲಾದವರು ಚರ್ಚಿಸಿ ಸಲಹೆ ಸೂಚನೆಗಳನಿತ್ತರು. ಜಯಾನಂದ ಪೆರಾಜೆ ನಿರೂಪಿಸಿ ವಂದಿಸಿದರು.