ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬಂಟ್ವಾಳ ಶ್ರೀ ಸತ್ಯಸಾಯಿ ಸಮಿತಿಯ ವತಿಯಿಂದ ನೋಟ್ ಬುಕ್ ವಿತರಣೆ ನಡೆಯಿತು. ಇದೇ ವೇಳೆ ಸರಕಾರದಿಂದ ಒದಗಿಸಲಾದ ಸಮವಸ್ತ್ರ ವಿತರಣೆಯೂ ನಡೆಯಿತು.
ಬಂಟ್ವಾಳದ ಸತ್ಯಸಾಯಿ ಸಮಿತಿಯ ಶಿಕ್ಷಣ ಸಂಯೋಜಕರಾಗಿರುವ ಭಾರತಿ ಕುಂದರ್ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿ, ಒಳ್ಳೆಯ ಚಿಂತನೆ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಎಳವೆಯಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವನ್ನು ಶ್ರೀ ಸತ್ಯಸಾಯಿ ಸಮಿತಿ ಮಾಡುತ್ತಿದ್ದು, ಅದರ ಅಂಗವಾಗಿ ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲೆಯನ್ನು ಆಯ್ದುಕೊಂಡಿದೆ. ಪರಿಸರ ಸಂರಕ್ಷಣೆ ಸಹಿತ ಪ್ರತಿಯೊಂದು ವಿಚಾರದಲ್ಲೂ ಮಕ್ಕಳಿಗೆ ಸದ್ವಿಚಾರವನ್ನು ಬಿತ್ತರಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಮಂಗಳೂರಿನ ಗ್ಲೋಬಲ್ ಇಕೋ ಫೌಂಡೇಶನ್ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಯುವ ಮಹಿಳಾ ವಿಭಾಗ ಸಂಯೋಜಕರಾದ ದೀಪಾ ಪ್ರವೀಣ್, ಹಿರಿಯ ವಿದ್ಯಾರ್ಥಿಗಳಾದ ಪತ್ರಕರ್ತರಾದ ಯಾದವ ಅಗ್ರಬೈಲು, ಸಂದೀಪ್ ಸಾಲ್ಯಾನ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಹರೀಶ್ ಮಾಂಬಾಡಿ, ಮುಖ್ಯ ಶಿಕ್ಷಕಿ ಲಕ್ಷ್ಮೀ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶಶಿಧರ್ ಮತ್ತು ಸದಸ್ಯರಾದ ಕವಿತಾ, ಅನಿತಾ, ಜಯಂತಿ, ನಿಶ್ಮಿತಾ, ಸುನೀತಾ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ವಿನೋದಾ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ. ಸದಸ್ಯ ಶಿವಮೂರ್ತಿ ಆರ್. ವಂದಿಸಿದರು. ಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಐರಿನ್, ವಿಮಲಾ, ನಿಶ್ಮಿತಾ, ಪೂರ್ಣಿಮಾ, ಲಾವಣ್ಯ, ದಿವ್ಯಾ ಸಹಕರಿಸಿದರು.