| ಪದ್ಯಾಣ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ದೃಢಕಲಶಾಭಿಷೇಕ
ರಾಗದ್ವೇಷವನ್ನು ನಿವಾರಣೆಯಾಗಿ ಪ್ರೀತಿ ಭಾವ ಮೂಡುವುದು ದೃಢಕಲಶದ ಪ್ರಭಾವ, ಪದ್ಯಾಣದ ಬ್ರಹ್ಮಕಲಶೋತ್ಸವ ಇತಿಹಾಸ ನಿರ್ಮಿಸಿದೆ. ಆರಂಭ ಮತ್ತು ಅಂತ್ಯದ ದಿನಾಂಕ ಎಲ್ಲಿ ಇಲ್ಲವೋ ಅದು ಸನಾತನ ಎಂಬ ಮಾತು ಇದೆ. ನಾವಿಂದು ಸನಾತನ ಧರ್ಮಕಾರ್ಯವನ್ನು ಮುನ್ನಡೆಸುತ್ತಿದ್ದೇವೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಬಳಿಕ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ನಡೆದ ದೃಢಕಲಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅರ್ಪಣಾ ಭಾವದಲ್ಲಿ ಕೆಲಸ ಮಾಡಲಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣಶಾಮ ಮಾತನಾಡಿ, ದೇವಸ್ಥಾನಕ್ಕೆ ಸಂಬಂಧಿಸಿದ ಭಕ್ತರ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದ ಕಾರ್ಯಕರ್ತರು, ಪದಾಧಿಕಾರಿಗಳ ಶ್ರಮದ ಫಲದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ನಮ್ಮ ಪದ್ಯಾಣ ಬ್ರಹ್ಮಕಲಶೋತ್ಸವದಲ್ಲಿ ಯಾರಿಗೂ ಹೊರೆಯಾಗದಂತೆ, ಯಾರಿಗೂ ಬೊಟ್ಟು ಮಾಡಿ ತೋರಿಸದ ರೀತಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಜವಾಬ್ದಾರಿಯನ್ನು ಹೊತ್ತ ಬಳಿಕ ಯಾವ ಕೆಲಸವಾದರೂ ಅದನ್ನು ಪೂರೈಸುವ ಜವಾಬ್ದಾರಿ ನಮಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಟಿ. ಶಾಮ ಭಟ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ನಾವು ದೇವಸ್ಥಾನವನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಎಂದು ಆಡಳಿತ ಸಮಿತಿಯ ಚಿಂತನೆಗೆ ನಾವೆಲ್ಲರೂ ಜತೆಯಾಗಿದ್ದೇವೆ. ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ಹಣಕಾಸಿನ ಕೊರತೆ ಆಗಿಲ್ಲ, ಆ ಕುರಿತು ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಾಮ ಸುದರ್ಶನ ಹೊಸಮೂಲೆ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಪದ್ಯಾಣ ತಿಮ್ಮಣ್ಣ ಭಟ್ಟ, ಪದ್ಯಾಣ ರಘುರಾಮ ಕಾರಂತ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಸಹಿತ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ ಸ್ವಾಗತಿಸಿದರು. ಸೇರಾಜೆ ಶ್ರೀನಿವಾಸ ಭಟ್ ವಂದಿಸಿದರು. ನವ್ಯ ಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ರವಿಚಂದ್ರ ಪದ್ಯಾಣ ಪ್ರಾರ್ಥಿಸಿದರು. ದೃಢಕಲಶೋತ್ಸವ ಸಂದರ್ಭ ಹಲವು ಕಾರ್ಯಕ್ರಮಗಳು ನಡೆದವು.