ಬಂಟ್ವಾಳ: ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳ ಕ್ಷೇತ್ರದಾದ್ಯಂತ ಗ್ರಾಮಗಳನ್ನು ತಲುಪುವ ಬಂಟ್ವಾಳಪ್ರಜಾಧ್ವನಿಯಾತ್ರೆ ಮಾರ್ಚ್ 10ರಿಂದ ಆರಂಭಗೊಳ್ಳಲಿದ್ದು, 14 ದಿನಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಐದು ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸಿದ್ಧರಾಮಯ್ಯ ಸರಕಾರ ಮೂಲಕ ಕ್ಷೇತ್ರದಾದ್ಯಂತ ಕೈಗೊಳ್ಳಲಾದ 5 ಸಾವಿರ ಕೋಟಿ ರೂಗಳ ಪ್ರಗತಿಕಾರ್ಯಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಯಾತ್ರೆ ಮೂಲಕ ಮಾಡಲಾಗುವುದು. ಒಂದೇ ದಿನ ಮೂರು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡು ಯಾತ್ರೆಯನ್ನು ನಡೆಸಲಾಗುವುದು. ಪ್ರತಿ ದಿನ ಸಂಜೆ ಸಭೆ ನಡೆಸಲಾಗುತ್ತದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಪುಂಚಮೆ ಗ್ರಾಮದಲ್ಲಿ ಆರಂಭಗೊಳ್ಳಲಿದೆ. ಪ್ರಮುಖ ಮುಖಂಡರು ಪ್ರತಿದಿನದ ಯಾತ್ರೆಯಲ್ಲಿ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಇನ್ನೊಬ್ಬರು ಮಾಡಿದ ಕೆಲಸವನ್ನು ನಾನು ಮಾಡಿದ್ದು ಎಂದು ಎಲ್ಲೂ ಹೇಳುವುದಿಲ್ಲ ಎಂದು ಹೇಳಿದ ರಮಾನಾಥ ರೈ, ಬಂಟ್ವಾಳದ ಒಳಚರಂಡಿ ಯೋಜನೆ ಮಂಜೂರಾತಿಯನ್ನು 2017ರ ಅಕ್ಟೋಬರ್ 10ರಂದು ನಾನು ಮಾಡಿಸಿದ್ದೇನೆ. ಇದಕ್ಕೆ ದಾಖಲಾತಿ ಇದೆ. ಆರು ವರ್ಷಗಳಾದರೂ ಕೆಲಸವಾಗಿಲ್ಲ ಎಂದು ಹೇಳಿ ಇಂಥ ಹಲವಾರು ಉದಾಹರಣೆಗಳಿವೆ ಎಂದರು. ಕಳೆದ ಚುನಾವಣೆಯಲ್ಲಿ ಅಪಪ್ರಚಾರದಿಂದ ನಾನು ಸೋತಿದ್ದೆ, ಎಂದು ಹೇಳಿದ ಅವರು ಈಗಲೂ ಅಪಪ್ರಚಾರ ನಡೆಸಲಾಗುತ್ತಿದೆ ಎಂದರು.
ಯಾತ್ರೆ ಕುರಿತು ಮುಖಂಡ ಪಿಯೂಸ್ ಎಲ್. ರೋಡ್ರಿಗಸ್ ಮಾಹಿತಿ ನೀಡಿದರು. ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪದ್ಮಪ್ರಸಾದ್ ಜೈನ್, ಸುದರ್ಶನ ಜೈನ್, ಮಧುಸೂಧನ ಶೆಣೈ, ಅಬ್ಬಾಸ್ ಆಲಿ ಬಿ.ಎಂ., ಮಾಯಿಲಪ್ಪ ಸಾಲಿಯಾನ್. ಸುರೇಶ್ ಜೋರ, ಚಂದ್ರಶೇಖರ ಪೂಜಾರಿ, ಚಂದ್ರಶೇಖರ ಭಂಡಾರಿ, ಸುಧಾಕರ ಶೆಣೈ ಖಂಡಿಗ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…