ಕೀರ್ತಿಶೇಷ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಶ್ರದ್ಧಾಂಜಲಿ ಕಾರ್ಯಕ್ರಮ ದಿ.8-10-2020 ರಂದು ತೆಂಕಬೈಲು ಮನೆಯಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಹಾಗೂ ಶಾಸ್ತ್ರಿಗಳ ಮಕ್ಕಳು ಮೊಮ್ಮಕ್ಕಳು ಆಯೋಜಿಸಿದರು.
ಶಾಸ್ತ್ರಿಗಳ ಕುಲ ಪುರೋಹಿತರು ಹಾಗೂ ಆತ್ಮೀಯರಾದ ವೇದ ಮೂರ್ತಿ ಶ್ರೀ ತಿರುಲೇಶ್ವರ ಭಟ್ಟರು ದೀಪ ಬೆಳಗಿಸಿ, ಶಾಸ್ತ್ರಿಗಳ ಭಾವ ಚಿತ್ರ ಅನಾವರಣಗೊಳಿಸಿ ತೆಂಕುತಟ್ಟಿನ ಯಕ್ಷಗಾನಕ್ಕೆ ಶಾಸ್ತ್ರಿಗಳ ಕೊಡುಗೆ ಅಪಾರ, ಭಾಗವತಿಕೆಯಲ್ಲಿ ಅಗರಿ ಶೈಲಿಯಿಂದ ಪ್ರಭಾವಿತರಾದರು ತಮ್ಮದೇ ಆದ ಶೈಲಿಯನ್ನು ಬೆಳೆಸಿದವರು, ಇಂದು ಅವರ ಮಗ ಮುರಳಿ ಕೃಷ್ಣ ಅದನ್ನು ಅಷ್ಟೇ ಚೆನ್ನಾಗಿ ಮುಂದುವರಿಸಿ ಕೊಂಡು ಹೋಗುತ್ತಿರುವುದು ತುಂಬಾ ಸಂತೋಷ ಎಂದರು. ಅವರ ಮೊಮ್ಮಗ ಶ್ರೀಶನೂ ಭಾಗವತಿಕೆಯನ್ನು ಅಭ್ಯಾಸಿಸಿದ್ದು ತೆಂಕಬೈಲು ಶೈಲಿ ಮುಂದುವರಿಯುವುದು ಎಂದರು.
ಆಯೋಜಕರಾದ ಸಬ್ಬಣಕೋಡಿ ರಾಮ ಭಟ್ಟ ತಾವು ನಡೆಸಿಕೊಂಡು ಹೋಗುತ್ತಿರುವುದು ನಾಟ್ಯ ಶಾಲೆಯ ಹಿಮ್ಮೇಳದ ಆಚಾರ್ಯರು ಆಗಿದ್ದ ಶಾಸ್ತ್ರಿಗಳ ಕಲಿಸುವ ಸರಳ ವಿಧಾನ ಹಾಗೂ ಅವರ ಸರಳತೆಯನ್ನು ಸ್ಮರಿಸಿದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ರಾಮಚಂದ್ರ ಭಟ್ P.N ಕಾರ್ಯಕ್ರಮವನ್ನು ನಿರ್ವಹಿಸಿ ನುಡಿ ನಮನ ಸಪರ್ಪಿಸಿದರು. ಶಾಸ್ತ್ರಿಗಳ ಅಳಿಯ, ಕರ್ನಾಟಕ ಬ್ಯಾಂಕಿನ ಚೆನ್ನೈ ವಲಯದ ವ್ಯವಸ್ಥಾಪಕ, ಶ್ರೀ ವೇಣುಗೋಪಾಲ ಭಟ್ ಮಾಂಬಾಡಿ, ಕಾರ್ಯಕ್ರವನ್ನು ಸಂಯೋಜಿಸಿ ನುಡಿ ನಮನ ಸಮರ್ಪಿಸಿ ತಮ್ಮ ಮಾವನವರ ಸರಳತೆ ಹಾಗೂ ಕಾರ್ಯ ನಿಷ್ಠೆಯನ್ನು ನೆನೆದು, ಏಕಾದಶಿ ದಿನದಂದು ವಿಷ್ಣು ಪಾದ ಸೇರಿದ್ದಾರೆ ಎಂದರು.
ಪೈವಳಿಕೆ ಬೆನಕ ಕಲಾ ವೃಂದ ಇದರ ಪರವಾಗಿ ಗೋಪಾಲಕೃಷ್ಣ ಭಟ್ ಅವರೂ ತಮ್ಮ ಸಂಸ್ಥೆಯೊಂದಿಗೆ ಶಾಸ್ತ್ರಿಗಳ ದಶಕಗಳ ಸಹಯೋಗವನ್ನು ನೆನೆದು ಭಾವ ಶ್ರದ್ಧಾಂಜಲಿ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಾಸ್ತ್ರಿಗಳ ದೀರ್ಘ ಒಡನಾಡಿ ಯಕ್ಷಗಾನ ವೇಷ ಧಾರಿ ಕೊಡಂಗೆ ಸೀತಾರಾಮ ಭಟ್ಟ ವೇದಿಕೆಯಲ್ಲಿದ್ದರು.
ಸ್ನೇಹಿತರೂ ಸಂಬಂಧಿಕರೂ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಶಾಸ್ತ್ರಿಗಳ ಪುತ್ರಿಯರು ಸವಿತಾ, ವನಿತಾ ಶೈಲಜಾ ನಿರ್ವಹಿಸಿದರೆ ಧನ್ಯವಾದ ಸಮರ್ಪಣೆ ಮೊಮ್ಮಗ ಅನೀಶ ನಿರ್ವಹಿಸಿದರು. ಸಭಾ ಕಾರ್ಯ್ರಮದ ನಂತರ ಶಾಸ್ತ್ರಿಗಳ ಮೊಮ್ಮಗ ಶ್ರೀಶ ಇವರಿಗೆ ತಾತನ ಜಾಗಟೆ ಹಸ್ತಾಂತರಿಸಿ, ಮೊದಲ ಸಾರ್ವಜನಿಕ ಭಾಗವತಿಕೆ ನಡೆಸಿದರು. ಕೇಂದ್ರದ ಶಿಷ್ಯರು ರಾಗ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ಶಾಸ್ತ್ರಿಗಳ ಹಿರಿಯ ಶಿಷ್ಯರಾದ ಉದಯ ಕಂಬಾರು ಆತ್ಮೀಯರಾದ , ಭಾಸ್ಕರ ಕೋಳ್ಯೂರು, ಶರತ್ ಕದ್ರಿ ಅವರೂ ಸೇವಾ ರೂಪದಲ್ಲಿ ಹಿಮ್ಮೇಳದಲ್ಲಿ ಸಹಕರಿಸಿದರು.