ಬಂಟ್ವಾಳ

ಶರತ್ ಹತ್ಯೆ ಹಿಂದು ಕಾರ್ಯಕರ್ತರ ಟಾರ್ಗೆಟ್ ನ ಒಂದು ಭಾಗ: ಡಾ. ಪ್ರಭಾಕರ ಭಟ್

ಭಯೋತ್ಪಾದಕರು, ದೇಶದ್ರೋಹಿಗಳಿಗೆ ಆರೆಸ್ಸೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದೇ ಉದ್ದೇಶ, ಶರತ್ ಹತ್ಯೆ ಹಿಂದು ಕಾರ್ಯಕರ್ತರ ಟಾರ್ಗೆಟ್ ನ ಒಂದು ಭಾಗ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಜಾಹೀರಾತು

ಸಜೀಪಮುನ್ನೂರು ಗ್ರಾಮದ ಕಂದೂರಿನಲ್ಲಿರುವ ತನಿಯಪ್ಪ ಮಡಿವಾಳ ಅವರ ಮನೆಯ ಪಕ್ಕ ಅವರ ಪುತ್ರ ಶರತ್ ಮಡಿವಾಳ ಸ್ಮರಣೆಗೋಸ್ಕರ ಶರತ್ ಅಭಿಮಾನಿಗಳು ನಿರ್ಮಿಸಿದ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ, ಪುಷ್ಪನಮನ ಸಲ್ಲಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಡಾ. ಭಟ್, ಕೆಲವು ಸಾವಿರ ವರ್ಷಗಳಿಂದಲೂ ಹಿಂದುಗಳನ್ನು ದಮನಿಸಲು ಸಾಕಷ್ಟು ಮತೀಯವಾದಿಗಳು ಯೋಜಿತ ಹತ್ಯೆಗಳನ್ನು ನಡೆಸುತ್ತಲೇ ಬಂದಿದ್ದು, ಶರತ್ ಹತ್ಯೆ ಅದರ ಮುಂದುವರಿದ ಭಾಗವಾಗಿದೆ. ಇದಕ್ಕೆ ಕಾಂಗ್ರೆಸ್ ನ ರಾಜನೀತಿಯು ಪ್ರೇರಣೆ ನೀಡುತ್ತಿದೆ ಎಂದು ಆಪಾದಿಸಿದರು.

ವೇದಗಳು ಹುಟ್ಟಿದ ಸಿಂಧು, ವಿವೇಕಾಂದರು ಹುಟ್ಟಿದ ಬಂಗಾಳ ನಮ್ಮಲ್ಲಿಲ್ಲ. ಯಶಸ್ವಿಯಾಗಿ ಭಾರತದ ಭೂಪಟದಿಂದ ಮತಾಂಧರು ನಮ್ಮ ಭೂಭಾಗಗಳನ್ನು ಬೇರ್ಪಡಿಸಿದರು, ಆಗಿನ ಧೂರ್ತ ರಾಜಕಾರಣ ಇದಕ್ಕೆ ಕಾರಣವಾಯಿತು. ಇದರ ಮುಂದುವರಿದ ಭಾಗವಾಗಿ ರಾಷ್ಟ್ರವಾದಿ, ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾಯಿತು, ಶ್ರದ್ಧಾಕೇಂದ್ರಗಳ ಮೇಲೆ ಆಕ್ರಮಣ ನಡೆದವು, ಶರತ್ ಹತ್ಯೆಯೂ ಇದೇ ಯೋಜಿತ ಕೃತ್ಯದ ಭಾಗ ಎಂದು ಭಟ್ ವಿಶ್ಲೇಷಿಸಿದರು.

ಶರತ್ ಮಾಡಿದ ಕೆಲಸ ಹಿಂದು ಸಮಾಜ ಹಾಗೂ ರಾಷ್ಟ್ರಪ್ರೇಮಿ ಕೆಲಸ. ಹೀಗಾಗಿ ಆತನ ಸಾವು ಅಚಾನಕ್ ಆಗಿ ಆದದ್ದಲ್ಲ. ದೇಶಕ್ಕೋಸ್ಕರ ಶರತ್ ಮಡಿವಾಳ ಮಡಿದಿದ್ದಾನೆ. ಮಹಾಪುರುಷರ ಸಾಲಿಗೆ ಸೇರುವ ವ್ಯಕ್ತಿತ್ವ ಶರತ್ ಮಡಿವಾಳನದ್ದು ಎಂದು ಭಟ್ ಹೇಳಿದರು. ಇದೇ ಸಂದರ್ಭ ಶರತ್ ನೆನಪಿಗಾಗಿ ಗಿಡವೊಂದನ್ನು ನೆಡಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಶರತ್ ತಂದೆ ತನಿಯಪ್ಪ ಮಡಿವಾಳ, ತಾಯಿ ನಳಿನಿ, ಮುಖಂಡರಾದ ಕೆ.ಹರಿಕೃಷ್ಣ ಬಂಟ್ವಾಳ,  ಬಿ.ದೇವದಾಸ ಶೆಟ್ಟಿ, ಶರಣ್ ಪಂಪ್ ವೆಲ್, ಅಶೋಕ್ ಶೆಟ್ಟಿ ಸರಪಾಡಿ, ಸಂತೋಷ್ ರೈ ಬೋಳಿಯಾರ್, ನವೀನ್ ಸುವರ್ಣ, ವಿನೋದ್ ಕೊಡ್ಮಣ್, ಕೃಷ್ಣಪ್ಪ ಕಲ್ಲಡ್ಕ, ಡಾ.ಕಮಲ ಪ್ರಭಾಕರ ಭಟ್, ರಾಧಾಕೃಷ್ಣ ಅಡ್ಯಂತಾಯ, ಸತೀಶ್, ಲೋಹಿತ್ ಮತ್ತು ಅಪಾರ ಸಂಖ್ಯೆಯಲ್ಲಿ ಶರತ್ ಅಭಿಮಾನಿಗಳು ಸುರಿಯುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಮ್ಮದು ಆಕ್ಷನ್ ಅಲ್ಲ, ರಿಯಾಕ್ಷನ್:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಭಟ್, ನಮ್ಮದು ಆಕ್ಷನ್ ಅಲ್ಲ ರಿಯಾಕ್ಷನ್ ಮಾತ್ರ. ಹಿಂದುಗಳು ಅನ್ಯಾಯವಾದಾಗ ತಿರುಗೇಟು ನೀಡುತ್ತಾರೆಯೇ ವಿನಃ ತಾವಾಗಿಯೇ ಯಾರ ಮೇಲೂ ದಾಳಿ ಮಾಡುವುದಿಲ್ಲ. ಚೆಂಡನ್ನು ಜೋರಾಗಿ ನೆಲಕ್ಕೆಸೆದಾಗ ಅದು ಪುಟಿದೇಳುತ್ತದೆ, ಹಿಂದು ಸಮಾಜ ತನಗಾದ ಅನ್ಯಾಯವನ್ನು ಸಹಿಸುವುದಿಲ್ಲ ಎಂದರು. ಶರತ್ ಹತ್ಯೆಯನ್ನು ಬೆನ್ನತ್ತುವಲ್ಲಿ ಪೊಲೀಸ್ ಇಲಾಖೆಯನ್ನು ಅಂದಿನ ಸರಕಾರ ದಾರಿ ತಪ್ಪಿಸಿತ್ತು ಎಂದ ಭಟ್, ದುರ್ಬಲ ಕೇಸು ಹಾಕಿದರೆ ಆರೋಪಿಗಳಿಗೆ ಜಾಮೀನು ದೊರಕುತ್ತದೆ, ರಾಜಕೀಯ ನಾಯಕರ ಒತ್ತಡ ಇದಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.