ಪ್ರಮುಖ ಸುದ್ದಿಗಳು

ಬಂಟ್ವಾಳದ ಡಾ. ನವೀನ್ ಭಟ್ ಸೇರಿ 9 ಐಎಎಸ್ ಅಧಿಕಾರಿಗಳು ಕರ್ನಾಟಕ ಸೇವೆಗೆ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಕಳೆದ ವರ್ಷ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ ಡಾ. ನವೀನ್ ಭಟ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದು, ಮೇ.24ರಂದು ಕರ್ನಾಟಕ ಸರಕಾರದ ಕರ್ತವ್ಯವನ್ನು ಪ್ರೊಬೆಷನರಿ ಆಧಾರದ ಮೇಲೆ ಆರಂಭಿಸಲಿದ್ದಾರೆ.

ಜಾಹೀರಾತು

2017ರ ಬ್ಯಾಚ್ ನ ಒಟ್ಟು 9 ಮಂದಿಯನ್ನು ಕರ್ನಾಟಕದ ಸೇವೆಗೆ ನಿಯುಕ್ತಿಗೊಳಿಸಲಾಗಿದ್ದು, ಮಸ್ಸೂರಿಯಲ್ಲಿ ತರಬೇತಿ ಅವಧಿ ಮುಗಿಸಿದ್ದಾರೆ. ಟಾಪರ್ ಆಗಿರುವ ನಂದಿನಿ ಕೆ.ಆರ್, ಶೇಕ್ ತನ್ವೀರ್ ಆಸಿಫ್, ಡಾ. ನವೀನ್ ಭಟ್ ವೈ, ಅಕ್ಷಯ್ ಶ್ರೀಧರ್, ದಿಲೀಶ್ ಸಶಿ, ನಂದಿನಿದೇವಿ ಕೆ, ಪ್ರಿಯಾಂಗಾ ಎಂ, ಲೋಖಂಡೆ ಸ್ನೇಹಲ್ ಸುಧಾಕರ್ ಮತ್ತು ಭನ್ವಾರ್ ಸಿಂಗ್ ಮೀನಾ ಅವರು ಕರ್ನಾಟಕಕ್ಕೆ ಆಯ್ಕೆಯಾದ ಐಎಎಸ್ ನೂತನ ಅಧಿಕಾರಿಗಳು.

ಮೇ 24ರಂದು ಕರ್ತವ್ಯಕ್ಕೆ ಇವರು ಹಾಜರಾಗಬೇಕಿದ್ದು, ಅಲ್ಲಿಂದ ಮೈಸೂರಿನಲ್ಲಿ ಜುಲೈವರೆಗೆ ತರಬೇತಿ ನೀಡಲಾಗುತ್ತದೆ. ಬಳಿಕ ನಿಯೋಜಿಸಲಾದ ಜಾಗೆಗಳಿಗೆ ಅವರನ್ನು ಪ್ರೊಬೆಷನರಿ ಅಧಿಕಾರಿಗಳನ್ನಾಗಿ ಕಳುಹಿಸಲಾಗುತ್ತದೆ.

ಲೋಕೋಪಯೋಗಿ ಇಲಾಖೆಯ ದಕ್ಷ ಅಧಿಕಾರಿ, ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಡಾ. ನವೀನ್ ಭಟ್ ರಾಷ್ಟ್ರದ ಅತ್ಯುನ್ನತ ಸೇವೆಗಳಲ್ಲೊಂದಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ೩೭ನೇ ರ್‍ಯಾಂಕ್ ಗಳಿಸಿ ರಾಜ್ಯಕ್ಕೇ ಮೂರನೇಯವರಾಗಿ ಹೊರಹೊಮ್ಮಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಂಟ್ವಾಳ ಬಿ.ಸಿ.ರೋಡಿನ ಮೊಡಂಕಾಪುವಿನಲ್ಲಿರುವ ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆದಿರುವ ನವೀನ್ ಎಂಬಿಬಿಎಸ್ ಪದವೀಧರರಾದರೆ, ಅವರ ಸಹೋದರಿ ನವ್ಯಾ ಎಂಬಿಬಿಎಸ್ ಕಲಿಯುತ್ತಿದ್ದಾರೆ.
೨೦೦೯ರಲ್ಲಿ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ನವೀನ್, ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ಐಎಎಸ್ ಪರೀಕ್ಷೆ ಬರೆಯುವ ಹಂಬಲದಿಂದ ಚೆನ್ನೈನ ಶಂಕರ್ ಕೋಚಿಂಗ್ ಗೆ ಸೇರಿ ಅಲ್ಲಿ ಆರು ತಿಂಗಳ ತರಬೇತಿ, ಅದಾದ ಬಳಿಕ ಸ್ನೇಹಿತರೊಂದಿಗೆ ಬೆಂಗಳೂರಿನಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗಾಗಿ ಓದು. ೨೦೧೭ರ ಸಿವಿಲ್ ಸರ್ವೀಸ್ ಫಲಿತಾಂಶ ಮೇ.೩೧ರಂದು ಪ್ರಕಟಗೊಂಡಾಗ ಅವರು ರಾಷ್ಟ್ರಮಟ್ಟದಲ್ಲಿ 37ನೇ ಸ್ಥಾನ ಗಳಿಸಿದ್ದರು. ಮೂಲತ: ಉಡುಪಿ ಜಿಲ್ಲೆಯ ಎಲ್ಲೂರಿನವರಾದ ಭಟ್ ಕುಟುಂಬದ ಜೊತೆಗೆ ಇಡೀ ಬಂಟ್ವಾಳಕ್ಕೆ ನವೀನ್ ಕೀರ್ತಿ ತಂದವರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts