ಈಗಿನ ಭಯ ಬೀಳಿಸುವ ವಾತಾವರಣದಲ್ಲಿ ಮಕ್ಕಳು ಬೆಳೆಯುವುದು ಹೇಗೆ ಎಂಬ ದಿಗಿಲು ಮೂಡಿದಾಗ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಬದುಕುವ ಆಸೆ ಮೂಡಿಸುತ್ತವೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಹೇಳಿದರು.
ಮಂಚಿ ನೂಜಿಬೈಲು ಶಾಲೆಯಲ್ಲಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬಿ.ವಿ.ಕಾರಂತ ನಾಟಕೋತ್ಸವದ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತುಕಾರಾಮ ಪೂಜಾರಿಯವರ ಬದುಕು ಮತ್ತು ಅವರು ಕಟ್ಟಿ ಬೆಳೆಸಿ ದೇಶಕ್ಕೆ ನೀಡಿದ ಹೆಮ್ಮೆಯ ಕೊಡುಗೆಯಾದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ತುಕಾರಾಮ ದಂಪತಿಗಳಿಬ್ಬರ ನಿಸ್ವಾರ್ಥ ತ್ಯಾಗದ ಫಲ ಎಂದು ಮುಖ್ಯ ಅತಿಥಿಗಳಾದ ಡಾ. . ಪುಂಡಿಕಾಯಿ ಗಣಪ್ಪಯ್ಯ ಭಟ್ ಬಣ್ಣಿಸಿದರು.
ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯುತ್ತಿರುವ ಬಿ ವಿ ಕಾರಂತ ರಂಗಭೂಮಿಕಾ ಟ್ರಸ್ಟು ಮಂಚಿ ದಶ ಸಂಭ್ರಮದ ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಉತ್ತಮ ಕಾರ್ಯ ಮಾಡುತ್ತಿದೆ. ಕಾರಂತರ ಹೆಸರಿನ ಈ ಗೌರವವನ್ನು ಪಡೆಯುವುದು ನನ್ನ ಸೌಭಾಗ್ಯ ಎಂದು ತುಕಾರಾಮ ಪೂಜಾರಿ ಹೇಳಿದರು.
ರೇಷ್ಮಾ ನರಸಿಂಹ ಕಜೆಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ ಸಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಸಂಸ್ಕೃತಿ ಸಂಸ್ಕಾರ ಇರುವಂತಹ ನಾಟಕ ಪ್ರದರ್ಶನ ನಡೆದು ಬರುತ್ತಿರಲಿ. ತು ಳು ಭಾಷೆಯ ಉಳಿವು ಬೆಳವಣಿಗೆಗಾಗಿ ಶಾಲೆಗಳಲ್ಲಿ ತು ಳು ವನ್ನು ಮೂರನೇ ಭಾಷೆಯಾಗಿ ಕಲಿಸಲು ಸರಕಾರ ಅನುಮತಿ ನೀಡಿದೆ. ತುಳು ಸಂಸ್ಕೃತಿ, ತುಳು ಭಾಷೆ ಅಭಿವೃದ್ಧಿಗೆ ಕೈಜೋಡಿಸೋಣ ಎಂದರು.
ಮುಖ್ಯ ಅತಿಥಿಗಳಾಗಿ ಡಾ ಗೋಪಾಲ್ ಆಚಾರ್ ಉಪಸ್ಥಿತರಿದ್ದರು. ಟ್ರಸ್ಟಿನ ಅಧ್ಯಕ್ಷರಾದ ರಾಮಚಂದ್ರ ಭಟ್ ಕಜೆ ಸ್ವಾಗತಿಸಿದರು. ಉಮಾನಾಥ ರೈ ವಂದನಾರ್ಪಣೆ ಮಾಡಿದರು. ರಮಾನಂದ ನೂಜಿಪ್ಪಾಡಿ ಮತ್ತು ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.
ಎರಡನೆ ದಿನದ ಕಾರ್ಯಕ್ರಮವನ್ನು ಕಳೆ ಕಟ್ಟಿಸಲು ಬಂದವರು ನವಸುಮ ರಂಗಮಂಚ(ರಿ) . ಇವರು ದುರ್ದುಂಡೆ ದ್ರೌಣಿ ಎಂಬ ತುಳು ನಾಟಕವನ್ನು ಪ್ರದರ್ಶಿಸಿದರು. ರಚನೆ , ನಿರ್ದೇಶನ ಬಾಲಕೃಷ್ಣ ಕೊಡವೂರು. ಬೆಳಕು ಜಯಶೇಖರ ಮಡೆಪ್ಪಾಡಿ, ರಂಗಪರಿಕರ, ಸುಕೇಶ್ ಪೂಜಾರಿ ಕೀರ್ತಿ ಕುಮಾರ್, ರಂಗ ಸಜ್ಜಿಕೆ, ಪೃಥ್ವಿ ಆಕಾಶ್,ಪ್ರಸಾಧನ ದಿನೇಶ್ ಅಮೀನ್ ಕದಿಕೆ.ವಸ್ತ್ರ ವಿನ್ಯಾಸ ಧನಂಜಯ/ ವಿಷು ರಾವ್ ಹಾವಂಜೆಯವರದ್ದು ಇತ್ತು.