ವಾಸ್ತವ

ನಾವಲ್ಲ, ನೀವು, ನೀವಲ್ಲ ನಾವು – ಯಾವುದನ್ನು ಯಾರು ಮಾಡಿದರೇನು?

  • ಹರೀಶ ಮಾಂಬಾಡಿ

www.bantwalnews.com

ಜಾಹೀರಾತು

ಅವರು ಇಷ್ಟು ದಿನ ಏನು ಮಾಡುತ್ತಿದ್ದರು, ಛೇ ಒಂದು ರಸ್ತೆ ಸರಿ ಮಾಡಲು ಯೋಗ್ಯತೆ ಇಲ್ವೋ?

ನೀವು ಅವರನ್ನು ಯಾಕೆ ದೂರುತ್ತೀರಿ, ಇವರು ಇಷ್ಟು ವರ್ಷ ಇಲ್ಲಿರಲಿಲ್ವಾ, ದಿನಾ ನೋಡ್ತಾ ಹೋಗುದಿಲ್ವಾ, ಇವರೂ ಮನಸ್ಸು ಮಾಡಿದ್ರೆ ಆಗ್ತಿತ್ತು..

ಛೇ ಅವರು ಅಲ್ಲಿಂದ ಇಷ್ಟು ಕೋಟಿ ತರಿಸಿದರು..

ಹಾಗಲ್ಲ ಸ್ವಾಮಿ ಇವರೂ ಇಲ್ಲಿಂದ ಇಷ್ಟು ಕೋಟಿ ತರಿಸಿದರು, ಏನು ಸುಮ್ಮನೆಯಾ?

ಅವರು ಅಷ್ಟು ಕೋಟಿ ಎಂದು ಹೇಳ್ತಾರಲ್ಲ ದುಡ್ಡು ಯಾರದ್ದು ನಮ್ಮದಲ್ವಾ?

ಇವರು ಇಷ್ಟು ಕೋಟಿ ಹೇಳ್ತಾರಲ್ಲ, ದುಡ್ಡು ಇವರು ಕೊಟ್ಟದ್ದಾ, ನಮ್ಮದಲ್ವಾ?

ಛೇ ನಮಗ್ಯಾಕೆ ಸ್ವಾಮಿ, ಯಾವುದನ್ನು ಯಾರು ಮಾಡಿದರೇನು? ಮಂಗ್ಳೂರಿಗೆ ಬಸ್ಸಿಗೆ ಹೋಗಬೇಕಾದರೆ ಬಿಸಿಲಲ್ಲೇ ನಿಲ್ಲಬೇಕು, ಅವರ ಕಾರೂ ಇಲ್ಲೇ ಬುರ್ರನೆ ಹೋಗ್ತದೆ, ಇವರ ಕಾರೂ ಇಲ್ಲೇ ಬುರ್ರನೆ ಹೋಗ್ತದೆ. ನಾವಿಬ್ಬರೂ ಟಾಟಾ ಮಾಡ್ಬೇಕಷ್ಟೇ.

ಮತ್ತೆ ಎಂಥದ್ದು ಮಾರಾಯ್ರೇ, ನೋಡಿ ಅಲ್ಲಿ ದುಡ್ಡು ಕೊಡದೆ ಕೆಲಸ ಆಗ್ತದಾ? ಇಲ್ಲಿ ಆಧಾರದ ಟೋಕನ್ನಿಗೂ ಕ್ಯೂ ನಿಲ್ಬೇಕಲ್ವಾ? ಇದನ್ನು ಅವರು ಮಾಡ್ತಾರಾ, ಇವರೂ ಮಾಡ್ತಾರಾ?  ಯಾರು ಸರಿ ಮಾಡ್ತಾರೆ? ಎಲ್ಲರೂ ಒಂದೇ

ಹೌದು ಮಾರಾಯ್ರೆ, ಮೊನ್ನೆ ಅವರು ಇವರ ಹೆಗಲಿಗೆ ಕೈ ಹಾಕಿದ್ರಲ್ವಾ, ನಾವೆಂಥಕ್ಕೆ ಚೊರೆ ಮಾಡುದು?

ಹೌದು ಸ್ವಾಮಿ, ಒಟ್ಟಾರೆಯಾಗಿ ನಾವು ಬಂಗ ಬರುವುದನ್ನು ಯಾರಾದರೂ ತಪ್ಪಿಸ್ಲಿಕ್ಕಾಗ್ತದಾ, ಬನ್ನಿ ನಾಗಣ್ಣನ ಕ್ಯಾಂಟೀನಿನಲ್ಲಿ ಬಿಸಿಬಿಸಿ ಗೋಳಿಬಜೆ ಉಂಟು. ಅದಕ್ಕೆ ಚಟ್ನಿ ಹಾಕಿ ತಿನ್ನುವ.

ಹಾಂ ಅದು ಒಳ್ಳೆದು, ಅಲ್ಲೀಗ ದೋಸೆಯೂ ಉಂಟಂತೆ. ಹೌದು ಮಾರಾಯ್ರೆ, ನೀವು ಕೆಎಸ್ಸಾರ್ಟಿಸಿ ಬಸ್ಸಲ್ಲಿ ಬಂದದ್ದಾ?

ಹೌದು. ನಾನು ಬಸ್ಸಲ್ಲಿ ಬಂದದ್ದೇನೋ ಹೌದು. ಆದರೆ ಇಳಿಯುವಾಗ ಉಂಟಲ್ಲ, ಭಾರೀ ಕಷ್ಟ ಆಯ್ತು ಮಾರ್ರೆ.

ಎಂಥ ಆಯ್ತು?

ಅಲ್ಲ ಮಾರ್ರೆ, ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಶುರು ಆಗುವ ಜಾಗದಲ್ಲಿ ಬಿಗಿಲು ಹಾಕಿದ್ರು ಕಂಡಕ್ಟರು. ಬೇಗ ಬೇಗ ಬೇಗ ಇಳೀರಿ ಅಜ್ಜೆರೆ ಎಂದು ನನ್ನ ತಲೆಯಲ್ಲಿದ್ದ ನಾಲ್ಕು ಬಿಳಿ ಕೂದ್ಲು ನೋಡಿ ತಮಾಷೆ ಮಾಡುದುಂಟ ಮಾರಾಯ್ರೆ, ನಾನು ಹಿಂದೆ ಮುಂದೆ ನೋಡದೆ ಇಳಿದೆ. ಬುರುಕ್ಕನೆ ಅಲ್ಲೊಂದು ಬೈಕು ಸಡನ್ ಬ್ರೇಕ್ ಹಾಕಿದ್ದಲ್ವಾ ಮಾರಾಯ್ರೆ, ಅಂವ ಹೆಲ್ಮೆಟ್ ತೆಗೆದು ನನಗೆ ಸಮಾ ಬೈದ, ನಾನೂ ನಾಲ್ಕು ಬೈದೆ. ಮತ್ತೆಂತದ್ದು, ನಾವು ಬಿ.ಸಿ.ರೋಡಿಗೆ ಬಂದ್ರೆ ಬಸ್ಸಿನವರು ಇಳಿಸುದು ಇಲ್ಲೇ ಅಲ್ವಾ ಮಾರ್ರೆ

ಛೇ, ಹೌದಾ, ಅಲ್ಲಿ ಪೊಲೀಸರು ಇರ್ಲಿಲ್ವಾ?

ಕೆಲವೊಮ್ಮೆ ಇರ್ತಾರಂತೆ. ನಾನು ಇಳೀವಾಗ ಇರ್ಲಿಲ್ಲ. ಯಾರೋ ಮೊಬೈಲಲ್ಲಿ ಮಾತಾಡಿಕೊಂಡು ಇದ್ರು. ಆದ್ರೆ ಬಸ್ಸಿನವರು ಅಲ್ಲೇ ಇಳ್ಸಿದ್ರೆ ಇವರೇನು ಮಾಡ್ತಾರೆ? ಬಸ್ಸಿನವರಿಗೆ ಬೇರೆ ಜಾಗ ಇಲ್ವಾ? ನಮ್ಮನ್ನು ಇಳಿಸ್ಲಿಕ್ಕೆ? ನಿಮ್ಮ ಅವರು ಎಂಥ ಮಾಡ್ತಾರೆ, ಸುಮ್ಮನೆ ಹೋಗುದಾ?

ಅಯ್ಯೋ, ಮತ್ತೆ ನೀವು ಅವರನ್ನು ದೂರ್ತೀರಲ್ಲ, ನಿಮ್ಮ ಇವರೂ ಏನು ಮಾಡಿದ್ದಾರೆ, ಇವರಿಗೂ ಹೇಳ್ಬಹುದಿತ್ತಲ್ವಾ? ನಾವ್ಯಾಕೆ ಚರ್ಚೆ ಮಾಡುದು? ಓ. ಗೋಳಿಬಜೆ ತಿಂದ್ರಾ, ಇನ್ನೊಂದು ಪ್ಲೇಟ್ ತೆಕೊಳ್ಳಿ, ಮತ್ತೆ ಬಸ್ಸು ಹತ್ತಬೇಕಿದ್ರೆ ಆ ಬದಿ ನಿಲ್ಬೇಕು. ಅಲ್ಲೂ ಶೆಲ್ಟರ್ ಇಲ್ಲ.

ಹೌದಲ್ವಾ, ನನಗೆ ಆ ಬಿಳಿ ಬಿಲ್ಡಿಂಗ್ ಒಳಗೆ ಹೋಗಲಿದೆ. ನೋಡಬೇಕು ಇನ್ನು ಎಷ್ಟು ಹೊತ್ತು ಕಾಯಬೇಕು ಎಂದು ಗೊತ್ತಿಲ್ಲ.

ಹೌದಾ? ಅಲ್ಲೇನು ವಿಶೇಷ.

ಅದನ್ನು ಇನ್ನೊಮ್ಮೆ ಹೇಳ್ತೇನೆ ಮಾರಾಯ್ರೇ.

 

 

 

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.