www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ನೆಟ್ಲ ನಿಟಿಲಾಪುರದಲ್ಲಿರುವ ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಪುನ:ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.21ರಿಂದ ಆರಂಭಗೊಂಡಿದೆ.
ಈ ಸಂಬಂಧ ಹೊರೆಕಾಣಿಕೆ ಮಂಗಳವಾರ ಸಂಜೆ ಕಲ್ಲಡ್ಕದಿಂದ ಶ್ರೀ ಕ್ಷೇತ್ರದವರೆಗೆ ನಡೆಯಿತು. ಹಸಿರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಉಪಾಧ್ಯಕ್ಷರಾದ ಎ.ರುಕ್ಮಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ವಿವಿಧ ಸಮಿತಿ ಪ್ರಮುಖರಾದ ಪದ್ಮನಾಭ ರೈ, ಸಂದೇಶ್ ಕುಮಾರ್ ಶೆಟ್ಟಿ, ಉಲ್ಲಾಸ್ ರೈ, ಗೋಪಾಲ ಮೂಲ್ಯ, ದೇವದಾಸ ಪೂಜಾರಿ, ಕೃಷ್ಣಪ್ಪ ಬಂಗೇರ, ವಸಂತ ಎನ್., ಪ್ರಧಾನ ಅರ್ಚಕ ನಾರಾಯಣ ರಾವ್ ಕಾರಂತ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಉಗ್ರಾಣ ಮುಹೂರ್ತ ನಡೆಯಿತು. ಸಂಜೆ ಮೆರವಣಿಗೆಯಲ್ಲಿ ಹೊರೆಕಾಣಿಕೆ ತರಲಾಯಿತು.
ಪ್ರತಿದಿನ ಕಾರ್ಯಕ್ರಮ:
ಬುಧವಾರದಿಂದ ಪ್ರತಿದಿನ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ. ಬುಧವಾರ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ, ಗುರುವಾರ ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಭಕ್ತಿಗಾನಸುಧೆ, ಕಾಮಿಡಿ ಎಕ್ಸ್ ಪ್ರೆಸ್ ಕಾರ್ಯಕ್ರಮ, ಶುಕ್ರವಾರ ಧಾರ್ಮಿಕ ಕಾರ್ಯಕ್ರಮ, ರಾತ್ರಿ ಸುಚಿತ್ರಾ ಹೊಳ್ಳ ಅವರ ಸಂಗೀತ ಮತ್ತು ಕಲ್ಲಡ್ಕ ವಿಠಲ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ. ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯವೈಭವ, ಯಕ್ಷಗಾನ ನಡೆಯಲಿದ್ದು, ಸಂಜೆ 6.15ರಿಂದ ಧಾರ್ಮಿಕ ಸಭೆ ನಡೆಯುವುದು. ಬಲ್ಯೋಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಭಾನುವಾರ 25ರಂದು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವ ಧಾರ್ಮಿಕ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಯು.ಟಿ.ಖಾದರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಸಹಿತ ಪ್ರಮುಖರು ಭಾಗವಹಿಸುವರು. ಸೋಮವಾರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಪ್ರತಿಷ್ಠೆ ನಡೆಯಲಿದ್ದು, ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶರು ಪಾಲ್ಗೊಳ್ಳುವರು. 27ರಂದು ಮಂಗ”ಳವಾರ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರಿನ ಶ್ರೀಮಾತಾನಂದಮಯೀ ಆಶೀರ್ವಚನ ನೀಡುವರು. 28ರಂದು ಬುಧವಾರ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸಹಿತ ಪ್ರಮುಖರು ಪಾಲ್ಗೊಳ್ಳುವರು. 29ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, 30ರಂದು ಲಘುರುದ್ರಹೋಮ, 31ರಿಂದ ಏ.5ರವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ.
IFTAAR ORGANISED BY FORMER MINISTER RAMANATHA RAI AT PANEMANGALORE (more…)