ಯಕ್ಷಗಾನ

ಆರಾಧನೆ ಇದ್ದರೆ ಮಾತ್ರ ಕಲೆ ಸಿದ್ಧಿ: ಪಟ್ಲ ಸತೀಶ ಶೆಟ್ಟಿ

www.bantwalnews.com

ಯಾವುದೇ ಕಲೆ ಇರಲಿ, ಅದನ್ನು ಆರಾಧಿಸಿದರೆ ಮಾತ್ರ ಸಿದ್ಧಿಸುತ್ತದೆ ಎಂದು ಖ್ಯಾತ ಭಾಗವತ, ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಹೇಳಿದರು.

ಜಾಹೀರಾತು

ಬಂಟ್ವಾಳ ತಾಲೂಕಿನ ನರಿಕೊಂಬು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆಯ ಕಲಾರಾಧನೆ ಪ್ರಯುಕ್ತ ಯಕ್ಷಾರಾಧನೆ ಕಾರ್ಯಕ್ರಮವನ್ನು ಶ್ರೀ ಕೋದಂಡರಾಮ ಭಜನಾ ಮಂದಿರ ವಠಾರದಲ್ಲಿ ಉದ್ಘಾಟಿಸಿ, ತನ್ನ ಹಿಮ್ಮೇಳ ಗುರುವೂ ಆಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಚೆಂಡೆ, ಮದ್ದಳೆ ಬಾರಿಸುವುದಲ್ಲ, ನುಡಿಸಲು ಗೊತ್ತಿರಬೇಕು, ಕಲೆಯನ್ನು ಆರಾಧಿಸಬೇಕು ಎಂದು ನನಗೆ ಹೇಳಿದವರು ಮಾಂಬಾಡಿ ಗುರುಗಳು, ಭಾಗವತ ಎಂಬ ಶಬ್ದಕ್ಕೆ ನಿಜವಾದ ಅರ್ಥ ಬರುವಂತೆ ಅಭ್ಯಸಿಸಬೇಕು ಎಂದರು.

ತನ್ನ ಯಕ್ಷಗಾನ ಕಲಿಕಾ ಹಾದಿಯನ್ನು ವಿವರಿಸಿದ ಅವರು, ಶ್ರದ್ಧೆಯಿಂದ ಕಲಿತರೆ ಅಭಿವೃದ್ಧಿ ಸಾಧ್ಯ, ಇಂದು ಯಕ್ಷಗಾನ ಕಲಾವಿದರಿಗೆ ಮನ್ನಣೆ ಸಿಗಲು ಉತ್ತಮ ಗುರುಗಳ ಅಗತ್ಯವೂ ಇದೆ ಎಂದರು.

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಮಾತನಾಡಿ, ಕರಾವಳಿಯಲ್ಲಿ ಜನ್ಮ ತಾಳಿದ ಕರ್ಣಾಟಕ ಬ್ಯಾಂಕ್, ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.

ಶ್ರೀ ಕೋದಂಡರಾಮ ಭಜನಾ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ರವಿವರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಮತ್ತು ಪೊಳಲಿ ವೆಂಕಪ್ಪಯ್ಯ ಭಟ್ ಈ ಸಂದರ್ಭ ಉಪಸ್ಥಿತರಿದ್ದರು. ಕೃಷ್ಣರಾಜ ಭಟ್ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಬಿ‌.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಇದೇ ವೇಳೆ ಯುವ ಪ್ರತಿಭೆ ಚಿನ್ಮಯ ಭಟ್ ಅವರನ್ನು ಗೌರವಿಸಲಾಯಿತು. ಭೋಪಾಲ್ ನಲ್ಲಿ ನಡೆದ ಕಲೋತ್ಸವದಲ್ಲಿ ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆಯ ಮಕ್ಕಳ ಹೆತ್ತವರನ್ನು ಹಾಗೂ ಅಧ್ಯಾಪಕರನ್ನು ಅಭಿನಂದಿಸಲಾಯಿತು. ಬಳಿಕ ಶ್ರೀವತ್ಸ ಎಸ್.ಆರ್. ನಿರ್ದೇಶನದಲ್ಲಿ ಸೀತಾ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.