ಬಿಜೆಪಿ ಗೆಲ್ಲಿಸಲು ಯುವಕರು ದೃಢಸಂಕಲ್ಪ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ ಹೇಳಿದರು.
ಪೆರಾಜೆ ಗ್ರಾಮದ ಪಾಣೂರು ಆನಂದ ಶೆಟ್ಟಿ ಮನೆಯಲ್ಲಿ ನಡೆದ ಬಂಟ್ವಾಳ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಯುವಕರು ಬಿಜೆಪಿಯನ್ನು ಗೆಲ್ಲಿಸುವ ಪಣತೊಟ್ಟರೆ ಪಕ್ಷಕ್ಕೆ ಯಾವುದೇ ಕಾರಣಕ್ಕೆ ಸೋಲಾಗದು. ನಿಮ್ಮ ದೃಢ ನಿರ್ಧಾರವನ್ನು ಯಾರಿಂದಲೂ ತಡೆಯಲಾಗದು ಎಂದು ಹೇಳಿದರು.
ಕಾರ್ಯಕಾರಿಣಿಯನ್ನು ಹಿರಿಯ ಸಹಕಾರಿ ಧುರೀಣ ಬಿ.ಟಿ.ನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಜೆಪಿ ನೇತಾರ ರಾಜೇಶ್ ನಾಕ್ ಉಳಿಪಾಡಿಗುತ್ತು ಪ್ರಸಕ್ತ ಸನ್ನಿವೇಶದಲ್ಲಿ ಪಕ್ಷದ ಗೆಲುವಿನಲ್ಲಿ ಕಾರ್ಯಕರ್ತರ ಪಾತ್ರದ ಬಗ್ಗೆ ತಿಳಿಸಿದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿ ಪಕ್ಷದ ಮುಂದಿನ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯರಾಗಿ ಭಾಘವಹಿಸಿ ಗೆಲುವಿನ ಗುರಿಯೆಡೆಗೆ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಮಾತನಾಡಿ ಸಾಮಾಜಿಕ ಜಾಲತಾಣಗಳನ್ನು ಸಕ್ರಿಯವಾಗಿ ಮತ್ತು ಸಕಾರಾತ್ಮಕವಾಗಿ, ಪಕ್ಷದ ಗೆಲುವಿಗೆ ಪೂರಕವಾಗಿ ಉಪಯೋಗಿಸಬೇಕು. ವಿಚಾರಗಳಿಗೆ ಮಾತ್ರ ಆದ್ಯತೆ ನೀಡಬೇಕು. ಪಕ್ಷದ ಗೆಲುವಿಗೆ ಪೂರಕ ವಿಷಯಗಳನ್ನು ಹಂಚಿಕೊಳ್ಳಿ. ಕೇಂದ್ರ ಸರಕಾರದ ಜನಪರ ಯೋಜನೆಗಳು, ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಪ್ರಚಾರ ಮಾಡಬೇಕು ಎಂದರು.
ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಪ್ರಥ್ವಿರಾಜ್, ಜಿಲ್ಲಾ ಯುವಮೋರ್ಚಾ ಕೋಶಾಧಿಕಾರಿ ಶಶಾಂಕ್ ಆಚಾರ್ಯ, ಕಾರ್ಯದರ್ಶಿ ಸುದರ್ಶನ್ ಬಜ, ಸದಸ್ಯರಾದ ನ್ಯಾಯವಾದಿ ಶಿವಾನಂದ ವೀರಕಂಭ, ಪೆರಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ನಿವೃತ್ತ ಸೇನಾಧಿಕಾರಿ ಕೆ.ಟಿ. ನಾಯ್ಕ, ಯುವಮೋರ್ಚಾ ಪ್ರ.ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು ವೇದಿಕೆಯಲ್ಲಿದ್ದರು.
ಪ್ರಮುಖರಾದ ರಾಘವ ಗೌಡ, ಜಯಾನಂದ ಜೋಗಿಬೆಟ್ಟು, ಹರೀಶ್ ರೈ ಪಾಲ್ಗೊಂಡಿದ್ದರು. ಯುವಮೋರ್ಚಾ ಉಪಾಧ್ಯಕ್ಷ ವಿನೀತ್ ಶೆಟ್ಟಿ ಸ್ವಾಗತಿಸಿ ಪೆರಾಜೆ ಗ್ರಾ.ಪಂ. ಸದಸ್ಯ ಉಮೇಶ್ ಎನ್.ಪಿ. ವಂದಿಸಿದರು. ಉಪಾಧ್ಯಕ್ಷ ರಂಜಿತ್ ಮೈರ ಕಾರ್ಯಕ್ರಮ ನಿರ್ವಹಿಸಿದರು.