ಬಂಟ್ವಾಳ

ಅಂಬೇಡ್ಕರ್ ಭಾವಚಿತ್ರ ನೋಟಿನಲ್ಲಿ ಮುದ್ರಿಸಲು ಕೋರಿ ಪ್ರಧಾನಿಗೇ ಪತ್ರ

ಪ್ರಧಾನಮಂತ್ರಿಗೆ ಯಾವ್ಯಾವ ವಿಚಾರದಲ್ಲೆಲ್ಲ ಪತ್ರ ಬರೆಯಬಹುದು? ನಮ್ಮ ಗ್ರಾಮಕ್ಕೆ ಕರೆಂಟಿಲ್ಲ, ರಸ್ತೆ ಹಾಳಾಗಿ ಹೋಗಿದೆ, ಸರಕಾರದ ಯೋಜನೆಗಳು ಸಿಗೋದೇ ಇಲ್ಲ.. ಹೀಗೆ ನಾನಾ ಸಮಸ್ಯೆಗಳು ಸ್ಥಳೀಯವಾಗಿ ಬಗೆಹರಿದಿಲ್ಲ ಎಂದೆನಿಸಿದಾಗ ಪತ್ರ ಬರೆಯುವ ಉದಾಹರಣೆಗಳು ಅನೇಕ. ಹಾಗೆಯೇ ಬಂಟ್ವಾಳದ ಈ ಬಾಲಕನೂ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಪತ್ರ ಬರೆದಿದ್ದಾನೆ. ವಿಷಯ ಮಾತ್ರ ಬೇರೆ!

ಇನ್ಮುಂದೆ ಮುದ್ರಣವಾಗುವ ನೋಟಿನಲ್ಲಿ ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುದ್ರಿಸಿ, ಹೊಸ ಇತಿಹಾಸವನ್ನು ಸೃಷ್ಟಿಸಿ.

ಜಾಹೀರಾತು

ಬಂಟ್ವಾಳ ಎಸ್.ವಿ.ಎಸ್.ಕಾಲೇಜಿನಲ್ಲಿ ಕಲಿಯುತ್ತಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ಧನುಷ್ ಪತ್ರದ ಒಕ್ಕಣೆ ಹೀಗೆ.

ಹಾಗೆಂದು ಆತ ಸುಮ್ಮನೆ ಬರೆದಿಲ್ಲ. ಇದಕ್ಕೊಂದು ಕಾರಣವನ್ನೂ ಕೊಟ್ಟಿದ್ದಾನೆ. ಪತ್ರ ಹೀಗಿದೆ.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಮಹಾನ್ ಹೋರಾಟಗಾರರಾಗಿ ರೂಪುಗೊಳ್ಳಲು ಅವರು ಓದಿರುವ ಪುಸ್ತಕಗಳೇ ಕಾರಣ. ಅವರು ಓದಿರುವಷ್ಟು ಪುಸ್ತಕಗಳನ್ನು ಯಾರೂ ಕೂಡ ಈವರೆಗೆ ಓದಿರಲಿಕ್ಕೂ ಇಲ್ಲ. ದೇಶಕ್ಕಾಗಿ ದುಡಿದ ಇಂತಹ ಮಹಾನ್ ನಾಯಕ, ಬಡವರ ಪರವಾಗಿ ಧ್ವನಿ ಎತ್ತಿದ ಸೇವಕನಿಗೆ ಇಡೀ ವಿಶ್ವವೇ ಗೌರವ ನೀಡಿದೆ. ವಿಶ್ವ ಸಂಸ್ಥೆಯಲ್ಲೂ ಈ ಮಹಾನ್ ನಾಯಕನ ಜನ್ಮದಿನಾಚರಣೆ ಮಾಡುವುದು ದೇಶಕ್ಕೆ ದೊಡ್ಡ ಗೌರವವಾಗಿದೆ. ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ದಲಿತ ಮುಖಂಡ ರಾಮನಾಥ ಕೋವಿಂದ ಅವರನ್ನು ಚುನಾವಣೆಗೆ ನಿಲ್ಲಿಸಿ ತಮ್ಮ ಶ್ರಮದ ಮೂಲಕ ಅವರನ್ನು ಗೆಲ್ಲಿಸಿ ರಾಷ್ಟ್ರಪತಿಯನ್ನಾಗಿಸಿರುವುದು ಅಭಿನಂದನೀಯ.  ಆದರೆ ಕಳೆದ 70 ವರ್ಷಗಳಿಂದ ಭಾರತದಲ್ಲಿ ಮುದ್ರಣವಾಗುವ ನೋಟಿನಲ್ಲಿ  ಡಾ.ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸದಿರುವುದು ಮಾತ್ರ ಬೇಸರದ ಸಂಗತಿ.  ತಮ್ಮ ಕಾರ್ಯವೈಖರಿ ಮೂಲಕ ಜಗತ್ತಿನ ಮನಗೆದ್ದ  ತಾವು ನವಭಾರತದ ನಿರ್ಮಾಣಕ್ಕೆ ಪಣತೊಟ್ಟಿರುವ ಈ ಸಂದರ್ಭದಲ್ಲಿ ಸರಕಾರ ಮುದ್ರಿಸುವ ನೋಟಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುದ್ರಿಸಲು ಕ್ರಮ ಕೈಗೊಂಡು ಹೊಸ ಇತಿಹಾಸ ಸೃಷ್ಟಿಸಬೇಕು.

ಇದು ಧನುಷ್ ಬರೆದ ಪತ್ರದ ಸಾರಾಂಶ.

ಈ ಪತ್ರದ ಪ್ರತಿಯನ್ನು ಕರ್ನಾಟಕ ಸರಕಾರ ಮುಖ್ಯ ಕಾರ್ಯದರ್ಶಿಯವರಿಗೂ ರವಾನಿಸಿದ್ದಾನೆ.ಹಾಗೆಯೇ ತನ್ನ ಕನ್ನಡ ಬರಹವನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಿ ಪ್ರಧಾನ ಮಂತ್ರಿಯವರಿಗೆ ಕಳುಹಿಸುವಂತೆ ದ.ಕ.ಜಿಲ್ಲಾಧಿಕಾರಿಯವರಿಗೂ ಪ್ರತ್ಯೇಕ ಮನವಿ ಮಾಡಿ ಕೇಳಿಕೊಂಡಿದ್ದಾನೆ ಧನುಷ್.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts