ಸಚಿವ ಬಿ.ರಮಾನಾಥ ರೈ ಅವರು ಎಸ್ಪಿ ಭೂಷಣ್ ಜಿ. ಬೊರಸೆ ಅವರೊಂದಿಗೆ ಮಾತನಾಡುವ ವಿಡಿಯೊ ಕುರಿತು ಮಾತನಾಡಿರುವ ಬಂಟ್ವಾಳದ ಕಾಂಗ್ರೆಸ್ ನಾಯಕರು, ಇದೇನೂ ದೊಡ್ಡ ವಿಷಯವಲ್ಲ, ಸಚಿವರು ಶಾಂತಿ, ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪೊಲೀಸ್ ಗೆ ನಿರ್ದೇಶನ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿಪಂ ಸದಸ್ಯ ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪುರಸಭಾಧ್ಯಕ್ಷ ರಾಮಕ್ರಷ್ಣ ಆಳ್ವ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಗೇರು ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಯುವ ಕಾಂಗ್ರಸ್ ಅಧ್ಯಕ್ಷ ಪ್ರಶಾಂತ ಕುಲಾಲ್, ಪಕ್ಷ ಪ್ರಮುಖ ಜನಾರ್ಧನ ಚಂಡ್ತಿಮಾರ್, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.
ಪ್ರಭಾಕರ ಭಟ್ ಅವರ ವಿರುದ್ಧ ಹಲವಾರು ಕೇಸ್ಗಳಿವೆ ಎಂದು ಆರೋಪಿಸಿ, ಬಂಟ್ವಾಳ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣಗಳ ಮರುತನಿಖೆ ಆಗಬೇಕು ಎಂದು ಶೆಟ್ಟಿ ಒತ್ತಾಯಿಸಿದರು.
ಸಚಿವ ರೈ ಬೆಂಗಳೂರಿನಲ್ಲಿದ್ದ ಕಾರಣ ಘಟನೆ ವಿವರ ಕಲೆಹಾಕಲು ಎಸ್ಪಿ ಅವರಿಗೆ ಕರೆ ಮಾಡಿದ್ದರು. ಆಗ ಎಸ್ಪಿ ಅವರು ಬಿ.ಸಿ.ರೋಡ್ ನಲ್ಲೇ ಇದ್ದ ಕಾರಣ ಬರುತ್ತೇನೆ ಎಂದು ಸಚಿವರಿದ್ದ ಐಬಿಗೆ ಬಂದರು. ಈ ಸಂದರ್ಭ ಸಚಿವರೊಂದಿಗೆ ಕೆಲ ಹೊತ್ತು ಎಸ್ಪಿ ಚರ್ಚಿಸಿದರು. ಅದಾದ ಬಳಿಕ ನಿಯೋಗವೊಂದರ ಸಮ್ಮುಖ ಸಚಿವರು ಎಸ್ಪಿ ಅವರಿಗೆ ಕಾನೂನು ಉಲ್ಲಂಘಿಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು. ನಡೆದದ್ದಿಷ್ಟು. ನಾವೂ ಅಲ್ಲೇ ಇದ್ದೆವು ಎಂದು ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ,ಶಾಂತಿ,ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಚಿವ ರೈ ನಿರ್ದೇಶನ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ರಕ್ಷಣೆ ನೀಡುವ ಕುರಿತು ಎಲ್ಲರೂ ಆರೋಪಿಸುತ್ತಿದ್ದಾರೆ. ನೇತ್ರಾವತಿ ಹೋರಾಟಗಾರರನ್ನು ಬಂಧಿಸುವಂತೆ ಸಚಿವರು ಹೇಳಿಲ್ಲ, ಈ ಬಗ್ಗೆ ಆರೋಪಗಳು ಸರಿಯಲ್ಲ. ನೇತ್ರಾವತಿ ನೀರು ಕೋಲಾರಕ್ಕೆ ಹೋಗಬೇಕು ಎಂದು ಹೇಳುವವರು ಬಿಜೆಪಿಯ ಯಡಿಯೂರಪ್ಪ ಎಂದರು.
ದೈವಸ್ಥಾನ, ದೇವಸ್ಥಾನ, ಮಂದಿರ, ಮಸೀದಿ, ಚರ್ಚ್ಗಳಿಗೆ ರಮಾನಾಥ ರೈ ತಮ್ಮ ಕೈಲಾದ ಹಾಗೂ ಸರಕಾರದಿಂದ ನೆರವು ಒದಗಿಸಿದ್ದಾರೆ ಎಂದರು.
ಬಂಟ್ವಾಳ ತಾಲೂಕಿನಲ್ಲಿ ಸಂಭವಿಸಿದ ಹಲವು ಅನುಮಾನಾಸ್ಪದ ಸಾವು ಪ್ರಕರಣಗಳ ಮರುತನಿಖೆಯಾಗಬೇಕು ಇದು ನಡೆದರೆ ಸತ್ಯಾಂಶ ಹೊರಬೀಳಲಿದೆ. ಸಿಐಡಿಯಂಥ ಸಂಸ್ಥೆಗಳಿಂದ ತನಿಖೆಯಾಗಬೇಕು ಎಂದು ಸರಕಾರವನ್ನು ಒತ್ತಾಯಿಸಲಾಗುವುದು ಎಂದರು.
ಮುಂದಿನ ಚುನಾವಣೆಗೆ ಬಂಟ್ವಾಳದಲ್ಲಿ ಬಿಜೆಪಿಯವರಿಗೆ ಯಾವುದೇ ಅಜೆಂಡಾ ಇಲ್ಲ ,ಇದನ್ನೇ ದೊಡ್ಡ ರದ್ದಾಂತ ,ಅಪಪ್ರಚಾರದ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದ ಅವರು,ಮುಂಬೈ ಅಥವಾ ಅಮೇರಿಕಾದಿಂದಲೇ ಬೆದರಿಕೆ ಕರೆ ಬರಲಿ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)