ಮಕ್ಕಳ ಮಾತು

ಇಲ್ಲಾ ಸಾರ್, ನಮ್ಗೆ ಗೊತ್ತಿಲ್ಲ.

www.bantwalnews.com

2 ದಿನದಿಂದ ನಿಮ್ಮ ಜೊತೆಗೆ ಅವಳಿದ್ದಾಳೆ, ಅವಳೂ ನಿಮ್ಮ ಜೊತೆ ಮಾತನಾಡುತ್ತಿದ್ದಾಳೆ, ಆದರೆ ಅವಳ ಒಡನಾಟ ನಿಮಗೆ ಸಿಕ್ಕಿದೆ, ಆದರೆ ಅವಳ ಭಾಷೆ ನಿಮ್ಮ ಒಡನಾಟಕ್ಕೆ ಅಡ್ಡವಾಗಲೇ ಇಲ್ವಲ್ಲಾ ಇದೇ ನೋಡಿ ಅಭಿನಯಕ್ಕೆ ಇರುವ ಶಕ್ತಿ.

ಜಾಹೀರಾತು
  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಮಂಗಳೂರಿನ ಬಾಲಭವನದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳ ಜೊತೆ ಮಾತನಾಡಲು, ಆಟವಾಡಲು, ಕುಣಿದಾಡಲು ಹೋಗಿದ್ದೆ. ಮಕ್ಕಳ ಜೊತೆ ಮಾತನಾಡುತ್ತಾ ಸಮಯಹೋದದ್ದೇ ಗೊತ್ತಾಗಲಿಲ್ಲ. ಬೆಳಿಗ್ಗೆ ೧೦ ರಿಂದ ಮಧ್ಯಾಹ್ನದ ವರೆಗೆ ಅವರ ಜೊತೆಗಿದ್ದ ನನಗೆ ಆದ ಹೊಸಾನುಭವವನ್ನು ಈ ಬರಹದ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ.
ಬೆಳಗ್ಗೆ ಮಕ್ಕಳ ಜೊತೆ ಚಪ್ಪಾಳೆ ಆಟ, ಗಾಂಧೀಜಿ ಆಟ, ಸೆವೆನ್ ಅಪ್, ಸ್ಟ್ಯಾಚೂ ಗೇಮ್ ನ ಬಳಿಕ ಮಕ್ಕಳಿಂದ ಗಿಬರಿಷ್ ಭಾಷೆಯಲ್ಲಿ ನಾಟಕವನ್ನೂ ಆಡಿಸಿದೆ. ಎಲ್ಲಾ ಮಕ್ಕಳು ನನ್ನ ಜೊತೆಗೆ ಮುಕ್ತವಾಗಿ ಮಾತನಾಡುತ್ತಿದ್ದರು. ಪಟ್ಟಣದ ಮಕ್ಕಳಾದ್ದರಿಂದ ಅವರ ಸ್ವಭಾವದಲ್ಲಿದ್ದ ವ್ಯತ್ಯಾಸವೂ ನನ್ನ ಗಮನಕ್ಕೆ ಬಂತು. ಅವರ ಜೊತೆಯಲ್ಲಿ ಖುಷಿಯಿಂದ ಸಮಯ ಕಳೆದು, ನಾಟಕದ ಬಗ್ಗೆ ಮಾತನಾಡಿ,ಮಧ್ಯಾಹ್ನ ೧.೩೦ ರ ಹೊತ್ತಿಗೆ ನಾನು ಅಲ್ಲಿಂದ ಹೊರಡಬೇಕಾಗಿತ್ತು. ಎಲ್ಲಾ ಮಕ್ಕಳನ್ನು ಕುಳ್ಳಿರಿಸಿ ದಿನದ ತರಗತಿಯನ್ನು ಸಮಾಪನ ಮಾಡುತ್ತಾ ಒಂದು ಕತೆ ಹೇಳಿದೆ, ಇದೇ ವೇಳೆ ಆ ದಿನ ಬೆಳಗ್ಗಿನಿಂದ ಆ ಹೊತ್ತಿನವರೆಗೂ ನನ್ನ ತರಗತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಓರ್ವ ವಿದ್ಯಾರ್ಥಿನಿಯನ್ನು ಬಟ್ಟುಮಾಡಿ ಕೇಳಿದೆ, ಈ ಕತೆ ನಿನಗೆ ಗೊತ್ತಾ ಎಂದು. ಆ ಹೊತ್ತಿಗೆ, ಆ ಕ್ಯಾಂಪಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಟೀಚರ್ ಹೇಳಿದರು ಸಾರ್ , ಅವಳಿಗೆ ಕನ್ನಡ ಬರುವುದಿಲ್ಲ ಎಂದು, ನನಗೆ ಅಚ್ಚರಿಯಾಯಿತು. ನಾನು ತಪ್ಪಿಯೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿಲ್ಲ, ಅವಳಿಗೆ ಕನ್ನಡ ಬರುವುದಿಲ್ಲ, ಆದರೂ ಎಲ್ಲಾ ಚಟುವಟಿಕೆಯಲ್ಲಿ ಅವಳ ಭಾಗವಹಿಸುವಿಕೆ ಅದ್ಭುತವಾಗಿತ್ತು. ನಾನು ಉಳಿದ ಮಕ್ಕಳಲ್ಲಿ ಕೇಳಿದೆ, ಅವಳಿಗೆ ಕನ್ನಡ ಬರುದಿಲ್ಲವಂತೆ, ನಿಮ್ಗೆ ಗೊತ್ತಾ..? ಬಹುತೇಕ ಮಕ್ಕಳು ಹೇಳಿದರು, ಇಲ್ಲಾ ಸಾರ್, ನಮ್ಗೆ ಗೊತ್ತಿಲ್ಲ.
ಮಕ್ಕಳನ್ನು ಉದ್ದೇಶಿಸಿ ಮಾತು ಮುಂದುವರಿಸಿದ ನಾನು ಹೇಳಿದೆ, ೨ ದಿನದಿಂದ ನಿಮ್ಮ ಜೊತೆಗೆ ಅವಳಿದ್ದಾಳೆ, ಅವಳೂ ನಿಮ್ಮ ಜೊತೆ ಮಾತನಾಡುತ್ತಿದ್ದಾಳೆ, ಆದರೆ ಅವಳ ಒಡನಾಟ ನಿಮಗೆ ಸಿಕ್ಕಿದೆ, ಆದರೆ ಅವಳ ಭಾಷೆ ನಿಮ್ಮ ಒಡನಾಟಕ್ಕೆ ಅಡ್ಡವಾಗಲೇ ಇಲ್ವಲ್ಲಾ ॒ಇದೇ ನೋಡಿ ಅಭಿನಯಕ್ಕೆ ಇರುವ ಶಕ್ತಿ.
ಆ ಬಳಿಕ ನಾನು ಅವಳನ್ನು ಗಮನಿಸಿದಾಗ ಅವಳು ಬಹುತೇಕ ಮಾತುಗಳನ್ನು ಕಣ್ಣಾಭಿನಯದಲ್ಲಿಯೇ ತಿಳಿಸುತ್ತಿದ್ದಳು. ಪ್ರತೀ ಮಾತುಗಳು ಅವಳಿಗೆ ಅರ್ಥವಾಗುತ್ತಿತ್ತು. ಅದಕ್ಕೆ ಅವಳು ಪ್ರತಿಕ್ರಿಯೆ ನೀಡುತ್ತಿದ್ದ ರೀತಿ ವಿಭಿನ್ನವಾಗಿತ್ತು. ಒಟ್ಟಿನಲ್ಲಿ ಮಂಗಳವಾರದ ತರಗತಿ ಆ ಒಂದು ಘಟನೆಯಿಂದ ಹೆಚ್ಚು ಸಾರ್ಥಕತೆ ಪಡೆಯಿತು ಎಂದುಕೊಂಡು ೨ ಗಂಟೆಯ ಹೊತ್ತಿಗೆ ನಾನು ಅಲ್ಲಿಂದ ಹೊರಗೆ ಬಂದೆ.
ಅದು ನಿಜಕ್ಕೂ ಒಂದು ಹೊಸಾನುಭವ ನೀಡಿದ ಘಟನೆ, ನಾಟಕ ಮಾಡುವವರಿಗೆ ಭಾಷೆ ಮುಖ್ಯವಲ್ಲ, ಒಬ್ಬ ಅದ್ಭುತ ನಟ/ನಟಿ ಏನನ್ನೂ ಕೂಡ ಪ್ರೇಕ್ಷಕರಿಗೆ ತಲುಪಿಸುವ ಶಕ್ತಿ ಉಳ್ಳವರಾಗಿರುತ್ತಾರೆ. ಅಲ್ಲಿ ಭಾಷೆ ಪ್ರಧಾನವಾಗಿರುವುದಿಲ್ಲ. ಬೆಳಗ್ಗಿನಿಂದ ಆಟದ ಮೂಲಕ ಅದನ್ನೇ ಹೇಳುತ್ತಿದ್ದ ನನಗೆ ಈ ಘಟನೆಯಿಂದ ಬಹುದೊಡ್ಡ ಉದಾಹರಣೆ ಸಿಕ್ಕಂತಾಯಿತು.
ಅಂದ ಹಾಗೆ ಆ ಶಿಬಿರದ ಮತ್ತೊಂದು ವಿಶೇಷ ವನ್ನು ನಿಮ್ಮ ಮುಂದೆ ಹೇಳದಿದ್ದರೆ ತಪ್ಪಾದೀತು. ಆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಸಂಖ್ಯೆ ೬೨. ಆದರೆ ಮಕ್ಕಳ ಶಾಲಾವಾರು ವಿವರ ಕೇಳಿದಾಗಲೇ ನನಗೆ ಅರಿವಾದದ್ದು, ಅಲ್ಲಿ ಒಟ್ಟು ೩೩ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸುತ್ತಿದ್ದಾರೆ ಎಂಬುದು. ದೂರದ ಗುಲ್ಬರ್ಗ, ಕಾರಾವಾರ ಹಾಗೂ ಬೆಂಗಳೂರಿನ ಶಾಲಾ ಮಕ್ಕಳೂ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಗೊತ್ತಾದಾಗ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳ ಉತ್ಸಾಹ ಮುಗಿಲು ಮುಟ್ಟಿತ್ತು.
ಶಿಬಿರ ಅಂದರೆ ಹಾಗೆಯೇ, ಮಕ್ಕಳ ಒಡನಾಟ, ಓಡಾಟ, ವಿವಿಧ ಶಾಲೆಯ ಮಕ್ಕಳು ಬಾಷೆಯ ಅಡ್ಡಿಯಿಲ್ಲದೆ, ಒಂದೇ ಮನಸ್ಸಿನಿಂದ ಅಲ್ಲಿ ಇರುವಷ್ಟು ದಿನ ವಿವಿಧ ಚಟುವಟಿಕೆಯಿಂದ ಕಲಿತುಕೊಳ್ಳುತ್ತಾರೆ ನೋಡಿ ಅದು ಶಿಬಿರಕ್ಕೆ ಹೆಚ್ಚು ಅರ್ಥ ತಂದುಕೊಡುತ್ತದೆ. ಒಂದೇ ಊರಿನ ಮಕ್ಕಳನ್ನು ಸೇರಿಸಿ, ಏನೂ ಮಾಡದೆ ಮಕ್ಕಳು ಅವರಷ್ಟಕ್ಕೇ ಕಲಿಯಲಿ ಎಂದು ಬಿಟ್ಟುಬಿಡುತ್ತಾರಲ್ಲಾ, ಅದರಿಂದ ಮಕ್ಕಳ ಉತ್ಸಾಹವೆಲ್ಲಾ ಕುಗ್ಗಿಹೋಗುತ್ತದೆ, ಬೇರೆ ಬೇರೆ ಶಾಲೆ, ಊರುಗಳ ಮಕ್ಕಳ ಒಂದೆಡೆ ಸೇರಿ ಹಿರಿಯರ ಮಾರ್ಗದರ್ಶನ , ಒಡನಾಟದೊಂದಿಗೆ ಕಲಿಯುವುದಕ್ಕೂ, ಮಕ್ಕಳನ್ನು ಅವರಷ್ಟಕ್ಕೇ ಬಿಟ್ಟು ಕಲಿಯಿರಿ ಎನ್ನುವುದಕ್ಕೂ ಅದೆಷ್ಟೋ ವ್ಯತ್ಯಾಸವಿದೆ. ಮಕ್ಕಳ ಶಿಬಿರ ಮಕ್ಕಳ ಭಾವನೆಗಳನ್ನು ಕಟ್ಟಿಹಾಕದೆ, ಅವರನ್ನು ಮತ್ತಷ್ಟು ಸೃಜನಶೀಲರನ್ನಾಗಿಸಲಿ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma