ವಿಶೇಷ ವರದಿ

ಜಲ್ಲಿಕಟ್ಟು ಇಫೆಕ್ಟ್ – ಎಲ್ಲರ ಚಿತ್ತ ತುಳುನಾಡಿನತ್ತ

www.bantwalnews.com

ಇದುವರೆಗೂ ತುಳುನಾಡಿನತ್ತ ತಿರುಗಿಯೂ ನೋಡದವರು ಈಗ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಂಬಳ ಉಳಿಸುವ ಮಾತನಾಡುತ್ತಿದ್ದಾರೆ.

ಜಾಹೀರಾತು

ಯಾವಾಗಲೂ ಮೌನವಾಗಿರುತ್ತಿದ್ದ ರಾಜಕಾರಣಿಗಳು ಇದ್ದಕ್ಕಿದ್ದಂತೆ ಕಂಬಳದ ಕುರಿತು ಎಚ್ಚರಿಕೆಯ ಹಾಗೂ ಬೆಂಬಲ ನೀಡುವ ಸ್ಟೇಟ್ ಮೆಂಟ್ ನೀಡುತ್ತಿದ್ದಾರೆ. ದಿಢೀರನೆ ಕೋಣಗಳೂ ಮೈಕೊಡವಿ ಎದ್ದು ನಿಂತಿವೆ. ಬೆಂಗಳೂರಿನಲ್ಲಿರುವ ಕನ್ನಡಿಗರೂ ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಗಳನ್ನು ಹಾಕ್ಕೊಂಡು ಕಂಬಳದ ಪರ ನಿಂತಿದ್ದಾರೆ. ಇದಕ್ಕೆಲ್ಲ ಕಾರಣವೇನು?

ತಮಿಳುನಾಡಿನ ಜನರು ಜಲ್ಲಿಕಟ್ಟು ನಿಷೇಧದ ವಿರುದ್ಧ ಒಂದಾಗಿದ್ದು. ನಿಷೇಧ ರದ್ದಾಗುವವರೆಗೆ ಹೋರಾಡಿದ್ದು. ಹೀಗಾಗಿ ಜಲ್ಲಿಕಟ್ಟು ಇಫೆಕ್ಟ್ ಅಷ್ಟಾದರೂ ಮಾಡಿದೆ. ಇಡೀ ಕರ್ನಾಟಕವನ್ನು ತುಳುನಾಡಿನತ್ತ ನೋಡುವಂತೆ ಮಾಡಿದೆ. ಕಂಬಳ ಎಷ್ಟು ಸಮಯ ಉಳಿಯುತ್ತದೋ ಗೊತ್ತಿಲ್ಲ. ಇವತ್ತಿನಂತೆ ನಾಳೆ ಇರುವುದಿಲ್ಲ. ಕೋಣ ಸಾಕುವುದು ತಮಾಷೆಯ ಮಾತೇನಲ್ಲ. ಆದರೂ ತುಳುನಾಡಿನ ಪರಂಪರೆಯಾಗಿರುವ ಕಂಬಳ ಕ್ರೀಡೆಯನ್ನು ಉಳಿಸಲು ಎಲ್ಲರೂ ಪಣ ತೊಟ್ಟಿದ್ದಾರೆ. ಈ ಹಿಂದೆ ನಿಷೇಧವಾದ ಸಂದರ್ಭ ತೀವ್ರ ಹೋರಾಟ ಮಂಗಳೂರಿನಲ್ಲಿ ನಡೆದಿತ್ತು. ನೂರಾರು ಕೋಣಗಳನ್ನು ತೆಗೆದುಕೊಂಡು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆಗ ಈ ಸುದ್ದಿ ಮಾಧ್ಯಮಗಳ ಸ್ಥಳೀಯ ಆವೃತ್ತಿಗಳಲ್ಲಿ ಪ್ರಕಟವಾಯಿತೇ ವಿನ: ಬೆಂಗಳೂರಿನ ದೊರೆಗಳಿಗೆ ತಲುಪಲೇ ಇಲ್ಲ. ಇದ್ದಕ್ಕಿದ್ದಂತೆ ಕಂಬಳ ಎಂಬುದೊಂದು ಇದೆ ಎಂದು ಇಡೀ ರಾಜ್ಯಕ್ಕೆ ಅಷ್ಟೇಕೆ ದೆಹಲಿವರೆಗೆ ನೆನಪು ಮಾಡಿದ್ದು ಜಲ್ಲಿಕಟ್ಟು. ಹೀಗಾಗಿ ತುಳುನಾಡಿನ ಕಂಬಳ ಪ್ರೇಮಿಗಳು ಜಲ್ಲಿಕಟ್ಟು ನಿಷೇಧ ವಿರುದ್ಧ ಹೋರಾಡಿದವರಿಗೆ ಥ್ಯಾಂಕ್ಸ್ ಹೇಳಲೇಬೇಕು.

ಇಂದು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಡ್ಯದ ಮಂದಿಯೆಲ್ಲ ಕಂಬಳ ಬೇಕು ಎಂದು ಹೇಳುವುದಕ್ಕೆ ಕಾರಣ ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಮಣಿದದ್ದು. ಹಾಗಾದರೂ ಘಟ್ಟದ ಕೆಳಗಿನ ಕರಾವಳಿ ಭಾಗದ ಈ ಜನಪ್ರಿಯ ಕ್ರೀಡೆಯ ನೆನಪು ಇಡೀ ರಾಜ್ಯಕ್ಕೆ ಆಗಿದೆ.

ಮುಂದೇನಾಗುತ್ತೆ ನೋಡೋಣ.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.