ಜನವರಿ 12 ಮತ್ತು 13ರಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ನಡೆಸುವ ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ರಾಜೀವ ಪ್ರತಾಪ ರೂಢಿ ಭಾಗವಹಿಸಲಿದ್ದಾರೆ.
12ರಂದು ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ 90.8 ಎಫ್ ಎಂ ಲೋಕಾರ್ಪಣೆ ಹಾಗೂ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮ ವಿವೇಕಾನಂದ ಕ್ಯಾಂಪಸ್ ನಲ್ಲಿ ನಡೆಯಲಿದ್ದು, ಕೇಂದ್ರ ವಾಣಿಜ್ಯ, ಕೈಗಾರಿಕೆ, ಹಣಕಾಸು ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸುವರು. ವಿವೇಕಾನಂದ ಕ್ಯಾಂಪಸ್ ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯುವುದು. ಮಾಜಿ ಶಾಸಕ ಕೆ. ರಾಮ ಭಟ್ ಗೌರವ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ್ ದಿಕ್ಸೂಚಿ ಭಾಷಣ ಮಾಡುವರು ಎಂದು ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
13ರಂದು ಶುಕ್ರವಾರ ಪುತ್ತೂರು ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ನೂತನ ಕಟ್ಟಡ ಉದ್ಘಾಟನೆ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರ ಉದ್ಘಾಟನೆ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಬಳಿಕ 10 ಗಂಟೆಗೆ ವಿವೇಕಾನಂದ ಕ್ಯಾಂಪಸ್ ನ ಕೇಶವ ಸಂಕಲ್ಪದಲ್ಲಿ ವಿವೇಕ ಉದ್ಯೋಗ ಮೇಳ 2017 ಮೆಗಾ ರಿಕ್ರೂಟ್ ಮೆಂಟ್ ಈವೆಂಟ್ ನಡೆಯಲಿದೆ. ಕಟ್ಟಡ, ಉದ್ಯೋಗ ಮೇಳವನ್ನು ಕೇಂದ್ರ ವಾಣಿಜ್ಯೋದ್ಯಮ ಮತ್ತು ಕೌಶಲಾಭಿವೃದ್ಧಿ ಸಚಿವ ರಾಜೀವ ಪ್ರತಾಪ್ ರೂಡಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸುವರು. ತರಬೇತಿ ಕೇಂದ್ರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು ಎಂದು ಅವರು ಹೇಳಿದರು. ಇದೇ ವೇಳೇ ವಿವೇಕಾನಂದ ಕ್ಯಾಂಪಸ್ ನಲ್ಲಿ ಪೂರ್ವಾಹ್ನ 11.30ಕ್ಕೆ ಲಘು ಉದ್ಯೋಗ ಭಾರತಿ ಸಹಯೋಗದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಉದ್ಯೋಗ ಮೇಳಕ್ಕೆ ಉಚಿತ ಬಸ್
ಶಿಬಾಜೆ, ಉಜಿರೆ, ಪುಂಜಾಲಕಟ್ಟೆಎ, ಗುಂಡ್ಯ, ಕೊಂಬಾರು, ಕಡಬ, ಕಲ್ಲುಗುಡ್ಡೆ, ಇಳಂತಿಲ, ಸುಬ್ರಹ್ಮಣ್ಯ, ಎಡಮಂಗಲ, ಪೆರ್ಲಂಪಾಡಿ, ಪಾಣಾಜೆ, ಬಿಳಿಯೂರು, ಕುದ್ದುಪದವು, ಸಾಲೆತ್ತೂರು, ಮಂಚಿ, ಪೊಳಲಿ, ಬದುಯಡ್ಕ, ಈಶ್ವರಮಂಗಲ, ಕಲ್ಲಡ್ಕ, ದರ್ಬೆ, ಸುಳ್ಯ, ಎಲಿಮಲೆ, ಬೆಳ್ಳಾರೆ, ಮಂಗಳೂರು, ಕಲ್ಮಡ್ಕ, ಆಲಂಕಾರು, ಒಡಿಯೂರು ಹೀಗೆ ಒಟ್ಟು 28 ಕೇಂದ್ರಗಳಿಂದ ಬೆಳಗ್ಗೆ 7.30ಕ್ಕೆ ಬಸ್ ವ್ಯವಸ್ಥೆ ಇದ್ದು, ಸಂಜೆ 5ಕ್ಕೆ ಅದೇ ಜಾಗಗಳಿಗೆ ಕಾಲೇಜಿನಿಂದ ಹೊರಡುವುದು ಎಂದು ಸಮಿತಿಯ ಮುರಳೀಕೃಷ್ಣ ಕೆ.ಎನ್. ಮಾಹಿತಿ ನೀಡಿದರು.
ನೋಂದಣಿ ಉಚಿತ
ಗ್ರಾಮಾಂತರ ಭಾಗದ ಉದ್ಯೋಗವಂಚಿತರ ಗಮನದಲ್ಲಿರಿಸಿ ಮಾಡಲಾಗುತ್ತಿರುವ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ. ಈಗಾಗಲೇ 12 ಸಾವಿರ ಅರ್ಜಿಗಳು ಬಂದಿದು, ಎಲ್ಲರಿಗೂ ವಾಯ್ಸ್ ಮೆಸೇಜ್ ಮೂಲಕ ಮೇಳದ ನಿಬಂಧನೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಕೃಷ್ಣ ಭಟ್ ಹೇಳಿದರು.
ಪ್ರಾಥಮಿಕ, ಪ್ರೌಢ ಶಿಕ್ಷಣದಿಂದ ತೊಡಗಿ, ಸ್ನಾತಕೋತ್ತರ, ವೃತ್ತಿಪರ ಶಿಕ್ಷಣ ಹೊಂದಿದರವು ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ. ಸ್ವೋದ್ಯೋಗಕ್ಕೂ ಇಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಇದೆ ಎಂದು ಅವರು ವಿವರಿಸಿದರು.
ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುಡಿ, ಸಂಯೋಜಕ ವಿವೇಕ ರಂಜನ್ ಭಂಡಾರಿ, ಬಾನುಲಿ ಕೇಂದ್ರ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ, ಕಾರ್ಯದರ್ಶಿ ಶ್ರೀಕಾಂತ ಕೊಳತ್ತಾಯ, ಸಲಹೆಗಾರ, ಮಾರ್ಗದರ್ಶಕ ಶಾಮ ಭಟ್, ಸದಸ್ಯ ಬಿ.ಟಿ.ರಂಜನ್, ಸಂಯೋಜಕ ಮುರಳೀಕೃಷ್ಣ ಕೆ.ಎನ್, ಸಹಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
for more info about udyoga mela http://www.vivekaudyoga.com
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…