ವಿಶೇಷ ವರದಿ

ದೊಡ್ಡ ನೋಟಿನ ಮುಂದೆ ಸಣ್ಣ ನೋಟಿನ ದರ್ಬಾರು

ಜನ ಒಟ್ಟು ಸೇರಿಸುವುದು ಹೇಗೆ?

ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಬೇಕಾದರೆ, ಎಲ್ಲರನ್ನೂ ಕರೆಯಬೇಕು, ಬಾರದವರಿಗೆ ಬನ್ನಿ, ನಿಮಗೆ ಇಂತಿಷ್ಟು ಎಂದು ಕೊಡುತ್ತೇವೆ ಎಂದು ಪುಸಲಾಯಿಸಬೇಕು. ಎಲ್ಲವೂ ಸರಿಯಾದ ಮೇಲೆ ಅವರಿಗೆ ಇಂತಿಷ್ಟು ನೋಟು ಎಂದು ಹಂಚಬೇಕು.

ಜಾಹೀರಾತು

ಇದು ದಶಕಗಳಿಂದ ನಡೆದುಕೊಂಡು ಬಂದ ಅಲಿಖಿತ ಪದ್ಧತಿ. ಇಂಥದ್ದಕ್ಕೆಲ್ಲ ಇನ್ನು ಬ್ರೇಕ್ ಬೀಳಲಿದೆಯಾ?

ಕಾದು ನೋಡಬೇಕು. ಏಕೆಂದರೆ ದೊಡ್ಡ ನೋಟು ಸಿಗುತ್ತಿಲ್ಲ, ಸಣ್ಣ ನೋಟಿಗೆ ಭಾರೀ ಬೇಡಿಕೆ. ಇವು ಈಗ ಹಂಚುವ ನೋಟಾಗಿ ಉಳಿದಿಲ್ಲ. ಶ್ರೀಮಂತರಿಗೂ ಸಣ್ಣ ನೋಟಿನ ಮೇಲೆಯೇ ಕಣ್ಣು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವಾಗ 500, 1000 ನೋಟುಗಳನ್ನು ಬ್ಯಾನ್ ಮಾಡಿದರೋ ಅಲ್ಲಿಂದಲೇ ಜನಸಾಮಾನ್ಯರಿಗೆ ಗೊಂದಲ ಸೃಷ್ಟಿಯಾಗತೊಡಗಿತು. ಕೆಲವರು ಪ್ರಧಾನಿಯನ್ನು ಹಾಡಿ ಹೊಗಳಿದರೆ, ಇನ್ನು ಕೆಲವರು ಹಣಕ್ಕೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದರು.

ಆಗ ಜನಸಾಮಾನ್ಯರು ನಮ್ಮಲ್ಲಿರುವ 500, 1000 ನೋಟುಗಳು (ಅದು ತಮ್ಮ ಮಾಲೀಕರು ಸಂಬಳವೆಂದು ಕೊಟ್ಟದ್ದೂ ಆಗಿರುತ್ತದೆ) ಇನ್ನು ಉಪಯೋಗಶೂನ್ಯ ಎಂದು ಚಿಂತೆಯಲ್ಲಿ ಮುಳುಗಿದರೆ, ಗೃಹಿಣಿಯರು ಜಾಗ್ರತೆಯಲ್ಲಿರಿಸಿದ್ದ ಹಣವೂ ಹಾಳಾಗಿಹೋಯಿತೇ ಎಂಬ ಯೋಚನೆಗೀಡಾದರು. ಅವರಿಗೆಲ್ಲ ನೋಟು ಬದಲಾಯಿಸಲು ಅವಕಾಶ ನೀಡಲಾಯಿತಾದರೂ, ಕೆಲವೊಂದು ವ್ಯತ್ಯಯಗಳಿಂದಾಗಿ ಅಂದುಕೊಂಡಂತೆ ಪ್ರಕ್ರಿಯೆಗಳು ಸರಾಗವಾಗಿ ನಡೆಯಲಿಲ್ಲ. ಕ್ಯೂನಲ್ಲಿ ನಿಂತವರು ಕಾಳಧನಿಕರಲ್ಲ, ಕೇವಲ ಜನಸಾಮಾನ್ಯರು ಎಂಬ ವಿಷಯ ಗೊತ್ತಾದ ತಕ್ಷಣ ಕೇಂದ್ರ ಸರಕಾರವೀಗ ಕಾಳಧನಿಕರ ಮೇಲೆಯೇ ನೇರ ಅಸ್ತ್ರ ಹೂಡಲು ಆರಂಭಿಸಿದೆ. ಇದು ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬುದು ಕುತೂಹಲಕಾರಿ.

ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ವಿವಿಧ ವಿತ್ತೀಯ ಸಂಸ್ಥೆಗಳಲ್ಲಿ ಬೇನಾಮಿ ಹೂಡಿಕೆಗಳಿವೆಯೋ, ಅನಿರೀಕ್ಷಿತವಾಗಿ ಜನಧನ್ ಯೋಜನೆಯ ಅಕೌಂಟಿನಲ್ಲಿ ಹಣ ಜಮೆ ಆಗಿದೆಯೋ ಎಂಬ ತನಿಖೆಯಲ್ಲಿ ತೊಡಗಿದೆ. ಈಗ ನಿಮ್ಮ ಬ್ಯಾಂಕ್ ಖಾತೆ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾರಂಭಿಸಿರುವ ಸರಕಾರ, ಎಲ್ಲಿಂದಾದರೂ ಕಾಳಧನವನ್ನು ಹುಡುಕಿ ತೆಗೆಯುವ ಪಣ ತೊಟ್ಟಿದೆ.

ನೋಟಿನ ಅಭಾವ

100 ರೂ. ಮುಖಬೆಲೆಯ ನೋಟುಗಳ ಕೊರತೆ ಇನ್ನೂ ಕಾಡುತ್ತಿದೆ. ಅವುಗಳ ಹೊಸತಾಗಿ ಬಂದ 2,000 ರೂ. ಮುಖಬೆಲೆಯ ಮತ್ತು 10 ರೂ. ಮುಖಬೆಲೆಯ ನೋಟುಗಳು ಧಾರಾಳ ಲಭ್ಯವಿವೆ. ಆದರೆ ಅವುಗಳನ್ನು ಕೊಂಡುಹೋಗುವವರು ಕಡಿಮೆ. 2,000 ರೂ. ನೋಟು ಕೊಂಡುಹೋದರೆ ಚಿಲ್ಲರೆ ಮಾಡಲು ಕಷ್ಟ. 10 ರೂ. ನೋಟುಗಳನ್ನು ಕೊಂಡೊಯ್ಯಲು ಮತ್ತು ಇಟ್ಟುಕೊಳ್ಳಲು ಕಷ್ಟ.

ಬ್ಯಾಂಕ್‌ ಶಾಖೆಗಳಲ್ಲಿ ಮತ್ತು ಎಟಿಂಗಳಲ್ಲಿ 100 ರೂ.ಗಳ ನೋಟುಗಳಿಗೆ ಹೆಚ್ಚು ಬೇಡಿಕೆ. ಆಯ್ದ ಕೆಲವು ಎಟಿಎಂಗಳಿಗೆ ಮಾತ್ರ ನೋಟು ಪೂರೈಕೆಯಾಗುತ್ತಿದ್ದು, ಒಂದೆರಡು ಗಂಟೆಗಳಲ್ಲಿ ಅದು ಖಾಲಿಯಾಗುತ್ತಿದೆ. 500 ರೂ. ನೋಟುಗಳು ಬರುವವರೆಗೆ ಸಮಸ್ಯೆಗಳು ತಪ್ಪಿದ್ದಲ್ಲ.

ಹಿರಿಯ ನಾಗರಿಕರಿಗೆ ಇಂದು ಬ್ಯಾಂಕುಗಳು ಗರಿಷ್ಠ ಆದ್ಯತೆ ನೀಡಲಿವೆ. ಹೀಗಾಗಿ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾಯಿಸುವ ಸಮಯದ ಅವಧಿ ಇಂದಾದರೂ ಕಡಿಮೆಯಾಗಬಹುದೇ?

ಹಿರಿಯ ನಾಗರಿಕರಿಗೆ ಇಂದು ಬ್ಯಾಂಕುಗಳು ಗರಿಷ್ಠ ಆದ್ಯತೆ ನೀಡಲಿವೆ. ಹೀಗಾಗಿ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾಯಿಸುವ ಸಮಯದ ಅವಧಿ ಇಂದಾದರೂ ಕಡಿಮೆಯಾಗಬಹುದೇ?

 

 

 

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.