ನರಿಕೊಂಬು ಗ್ರಾಮದ ಪ್ರಸಾದ ನಿಲಯದ ಸೀತಮ್ಮ ನಾರಾಯಣ ರಾವ್ ವೇದಿಕೆಯಲ್ಲಿ ಡಾ.ಗೀತಾ ಎನ್. ಅವರ ಕವನಸಂಕಲನ ಷಟ್ಪದಿ ಮಂಜರಿ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾವ್ಯದ ಲಕ್ಷಣಗಳನ್ನು ಮೈಗೂಡಿಸಿಗೊಂಡ ಈ ಷಟ್ಪದಿ ವಿಶ್ವ ವಿದ್ಯಾನಿಲಯಗಳಲ್ಲಿ ಪಠ್ಯವಾಗುವಷ್ಟು ಮೌಲ್ಯ ಉಳ್ಳದ್ದಾಗಿದೆ ಎಂದು ಶ್ಲಾಘಿಸಿದರು.
ಕೃತಿಯ ಕುರಿತು ಮಾತನಾಡಿದ ಉಪನ್ಯಾಸಕಿ ಡಾ.ನಾಗವೇಣಿ ಮಂಚಿ, ಷಟ್ಪದಿಗಳಲ್ಲಿ ಕಾಣುವ ವೈವಿಧ್ಯತೆ, ಕವಯಿತ್ರಿಯ ದೇಸೀಯ ಒಲವು, ಕವನ,ಕಾವ್ಯ ರಚನೆಯಲ್ಲಿನ ಸಾರ-ಸತ್ತ್ವಗಳು, ಸಂಸ್ಕೃತದಿಂದ ಕನ್ನಡೀಕರಣಗೊಂಡ ಪದ ಪ್ರಯೋಗ ಹಾಗೂ ಅನೇಕ ಹೊಸಪದಗಳ ಉಪಯೋಗ, ಇಸು ಪ್ರತ್ಯಯ ಬಳಕೆಯನ್ನು ವಿವರಿಸಿದರು.
ಷಟ್ಪದಿ ಮಂಜರಿಯ ಲೇಖಕಿ ಡಾ. ಗೀತಾ ಎನ್ ಮಾತನಾಡಿ, ವಿವಿಧ ವಾಟ್ಸಪ್ ಗುಂಪುಗಳ ಪ್ರೇರಣೆ, ವೀರೇಂದ್ರ ಶೆಣೈ ಹಾಗೂ ಗೆಳೆಯರ ಬೆಂಬಲ, ಮೂಡುಬಿದಿರೆ ಎಸ್.ಎನ್. ಪಾಲಿಟೆಕ್ನಿಕ್ ಕಾಲೇಜಿನ ವಿಶ್ವನಾಥ ಅವರ ಮಾರ್ಗದರ್ಶನ, ಮನೆಮಂದಿಯ ಪ್ರೋತ್ಸಾಹ ಜೊತೆಗೆ ಆಯುಷ್ಯ ಭಾಗ್ಯ ದೊರೆತು ತಾಯಿ ಭುವನೇಶ್ವರಿಯ ಖಂಡ ಕಾವ್ಯದ ಸೇವಾಭಾಗ್ಯ ತನಗೆ ದೊರೆಯಲೆಂದು ಆಶಿಸಿದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅತಿಥಿಗಳಾಗಿ ಭಾಗವಹಿಸಿದ್ದರು. ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಅಧ್ಯಕ್ಷರಾದ ಕೋರ್ಯ ರಮೇಶ್ ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಳ ಸಜ್ಜನಿಕೆಯವರಾಗಿ, ಎಲೆಯ ಮರೆಯ ಕಾಯಿಯಂತೆ ಇರುವ ಡಾ.ಗೀತಾ ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಪುತ್ತೂರಿನ ಪಾರ್ವತಿ ಶಾಸ್ತ್ರಿ ಕುಸುಮ ಷಟ್ಪದಿಯಲ್ಲಿ ಗೀತಾರ ಬಗ್ಗೆ ಕವನವನ್ನು ವಾಚಿಸಿದರೆ, ಯಕ್ಷಗುರು ಮುಡಿಪು ಜಯಂತ ಕಾರಂತ ಕೃತಿಯೊಳಗಿನ ಷಟ್ಪದಿಗಳನ್ನು ಭಾಗವತಿಕೆಗೆ ರೂಪದಲ್ಲಿ ಪ್ರಸ್ತುತ ಪಡಿಸಿದರು.
ಪ್ರೊಫೆಸರ್ ಮಾಧವ ರಾವ್ ಸಂಘಟಿಸಿ, ನಿರೂಪಿಸಿದ್ದ ಸಮಾರಂಭದಲ್ಲಿ ಕ್ಷಮಾ ಎನ್ ಸ್ವಾಗತಿಸಿದರು. ಮಾನಸ, ಚಿನ್ಮಯಿ, ತನ್ಮಯಿ ಸಹಯೋಗದಲ್ಲಿ ಪ್ರಾರ್ಥನಾ ನೃತ್ಯ ನಡೆಯಿತು. ವಿಶ್ವಾಸ ರಾವ್ ವಂದಿಸಿದರು. ಈ ಸಂದರ್ಭ ನಾರಿಕುಂಭೇಶ್ವರ ಯಕ್ಷಗಾನ ಸಂಘ, ನರಿಕೊಂಬು ಅವರಿಂದ ಆಯೋಜಿಸಲ್ಪಟ್ಟ ತಾಳಮದ್ದಳೆ ನಚಿಕೇತ ಪ್ರದರ್ಶಿಸಲ್ಪಟ್ಟಿತು.