ಬಂಟ್ವಾಳ

ದಶಾವತಾರಿ ಗೋವಿಂದ ಭಟ್ ಕುಟುಂಬಕ್ಕೆ ಮರಣೋತ್ತರ ಗೌರವ ಡಾಕ್ಟರೇಟ್ ಹಸ್ತಾಂತರ

ಮಂಗಳೂರು ವಿಶ್ವವಿದ್ಯಾಲಯದ ಮೊತ್ತಮೊದಲ ಬಾರಿ ಗೌರವ ಡಾಕ್ಟರೇಟ್ ಅನ್ನು ವಿಶೇಷ ಪರಿಗಣನೆಯೊಂದಿಗೆ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಯಕ್ಣಗಾನ ಕಲಾವಿದ ಗೋವಿಂದ ಭಟ್ ಅವರ ಕುಟುಂಬಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಲ್. ಧರ್ಮ ಅವರು ಸೋಮವಾರ ಸಂಜೆ ಹಸ್ತಾಂತರ ಮಾಡಿದರು‌.

govinda smarane

ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ಸೋಮವಾರ ನಡೆದ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷದಶಾವತಾರಿ ಡಾ.ಕೆ.ಗೋವಿಂದ ಭಟ್ ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳ ಸಮ್ಮುಖ ಡಾಕ್ಟರೇಟ್ ಪದವಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಭಟ್ ಪುತ್ರರಾದ ಪ್ರಸನ್ನ ಕುಮಾರ್, ಶ್ಯಾಮಪ್ರಸಾದ್, ಸೂರ್ಯಪ್ರಕಾಶ್ ಅವರಿಗೆ ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪದವಿಯನ್ನು ಹಸ್ತಾಂತರ ಮಾಡಿದರು. ಇದೇ ಸಂದರ್ಭ ಗೋವಿಂದ ಭಟ್ಟರ ಭಾವಚಿತ್ರಕ್ಕೆ ಗೌರವಾರ್ಪಣೆ ಮಾಡಿದರು.

ಜಾಹೀರಾತು

ಈ ವೇಳೆ ಮಾತನಾಡಿದ ಕುಲಪತಿ ಡಾ. ಧರ್ಮ, ಮೊದಲ ಬಾರಿ ಮಂಗಳೂರು ವಿಶ್ವವಿದ್ಯಾನಿಲಯವು ಮರಣೋತ್ತರ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾನಿಲಯದ ಲಾಂಛನದೊಂದಿಗೆ ಕುಲಾಧಿಪತಿಗಳ ಅನುಮತಿಯೊಂದಿಗೆ ನೀಡಲಾಗುತ್ತಿದೆ ಎಂದರು,

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗೋವಿಂದ ಭಟ್ ಯಕ್ಷಜೀವನದ ಕುರಿತು ಸಂಶೋಧನಾ ಪುಸ್ತಕ ಹೊರಬರಬೇಕು ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಭಟ್ಟರ ಜೊತೆಗಿನ ಒಡನಾಟ ಸ್ಮರಿಸಿದರು.

ರಿಜಿಸ್ಟ್ರಾರ್ ಪ್ರೊ.ಗಣೇಶ್ ಸಂಜೀವ್, ಪರೀಕ್ಷಾಂಗ ಕುಲಸಚಿವ  ಡಾ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ, ಐಕ್ಯುಎಸಿ ನಿರ್ದೇಶಕಿ ಪ್ರೊ.ಮೋನಿಕಾ ಸದಾನಂದ ಮತ್ತು ಸಹಾಯಕ ಕುಲಸಚಿವೆ ಸುಚೇತಾ ಕೆ. ಪದವಿ ಹಸ್ತಾಂತರ ವೇಳೆ ಹಾಜರಿದ್ದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶಾಮ ಭಟ್ ಅವರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಪರವಾಗಿ ಸ್ವಾಗತಿಸಿದರು. ಕಲಾವಿದ ಹರೀಶ್ ಬೊಳಂತಿಮೊಗರು ಕಾರ್ಯಕ್ರಮ ನಿರ್ವಹಿಸಿದರು. ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಗೋವಿಂದಾರ್ಪಣ ಯಕ್ಷಗಾನ ಕಾರ್ಯಕ್ರಮ ನಡೆಯಿತು

ಗೋವಿಂದ ಸ್ಮರಣೆ:

ಸೂರಿಕುಮೇರಿ ಗೋವಿಂದ ಭಟ್ಟರು ನಿರಂತರ ಎಪ್ಪತ್ತು ವರ್ಷಗಳ ತಿರುಗಾಟದ ಮೂಲಕ ದಾಖಲೆ ನಿರ್ಮಿಸಿದ ಸವ್ಯಸಾಚಿ ಕಲಾವಿದರು. ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸೋಮವಾರ ನಡೆದ ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ ಕಲಾವಿದರು, ಗೋವಿಂದ ಭಟ್ಟರ ಒಡನಾಡಿಗಳು ಹಾಗೂ ಅಭಿಮಾನಿಗಳು ಬಣ್ಣಿಸಿದರು.
ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ಯಕ್ಷಗಾನ ದಶಾವತಾರಿ ಡಾ.ಕೆ.ಗೋವಿಂದ ಭಟ್ ಅವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಗುಣಗಾನ ಮಾಡಿದ ಅಭಿಮಾನಿಗಳು ಕಲಾವಿದ ಶ್ರೇಷ್ಠರಾದರೂ ಎಲ್ಲರೊಡನೆ ಬೆರೆಯುತ್ತಿದ್ದ ಅವರ ಗುಣವನ್ನು ಸ್ಮರಿಸಿದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಕಷ್ಟಗಳಿದ್ದರು ತೋರಿಸಿಕೊಳ್ಳದೆ ವೇಷ ಮಾಡಿದವರು ಅವರು ಎಂದರು.
ಹಿರಿಯ ವಿಮರ್ಶಕ, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ, ನಿರಂತರ ಎಪ್ಪತ್ತೊಂದು ವರ್ಷಗಳ ತಿರುಗಾಟ ಮಾಡಿ ದಾಖಲೆ ಮೆರೆದವರು. ವೇಷ ವೈವಿಧ್ಯಗಳಲ್ಲಿ, ವಹಿಸಿದ ಪಾತ್ರಗಳಲ್ಲಿ ಯಕ್ಷಗಾನದ ಮೊದಲ ಹೆಜ್ಜೆಯಿಂದ ಕೊನೆಯ ಹೆಜ್ಜೆಯವರೆಗೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು. ತೆಂಕು ತಿಟ್ಟಿನ ಯಕ್ಷಗಾನ ಪರಿಪೂರ್ಣ ರೂಪ ಎಂದು ಕುಂಬಳೆ ಸುಂದರ ರಾಯರೇ ಹೇಳಿದ್ದಾರೆ. ಅವರ ಕುರಿತು ಸಂಶೋಧನಾತ್ಮಕ ಅಧ್ಯಯನ ಆಗಬೇಕು ಎಂದರು.
ಹಿರಿಯ ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ಗೋವಿಂದ ಭಟ್ಟರು ಮಾರ್ಗದರ್ಶಿಯಾಗಿದ್ದರು ಎಂದು ಒಡನಾಟ ಸ್ಮರಿಸಿದರು.
ಹಾದಿಗಲ್ಲು ಲಕ್ಷ್ಮೀನಾರಾಯಣ ರಾವ್ ಮಾತನಾಡಿ ಯಕ್ಷಗಾನ ಪೂರ್ಣಾವತಾರಿ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಕಲಾವಿದ ಎಷ್ಟೇ ಪಾಂಡಿತ್ಯವುಳ್ಳವನಾದರೂ ಎದುರಿದ್ದ ಪ್ರೇಕ್ಷಕ ಒಪ್ಪಿದಾಗ ಮಾತ್ರ ಪರಿಪೂರ್ಣ. ಗೋವಿಂದ ಭಟ್ಟರು ಅಂಥ ಪರಿಪೂರ್ಣ ಕಲಾವಿದರು ಎಂದರು.
ಪ್ರಮುಖರಾದ ಜಿ.ಕೆ.ಭಟ್ ಸೇರಾಜೆ, ಪಂಜ ಭಾಸ್ಕರ ಭಟ್, ಜಬ್ಬಾರ್ ಸಮೋ, ಆರ್.ಕೆ.ಭಟ್, ಸಂಜಯ ಕುಮಾರ್, ಶರವು ರಾಘವೇಂದ್ರ ಶಾಸ್ತ್ರಿ, ರಾಧಾಕೃಷ್ಣ ಕಲ್ಚಾರ್, ಧರ್ಮಸ್ಥಳದ ಬಿ.ಭುಜಬಲಿ, ಪ್ರೊ. ಎಂ.ಎಲ್.ಸಾಮಗ,, ಭಾಸ್ಕರ ರೈ ಕುಕ್ಕುವಳ್ಳಿ, ಪುತ್ತಿಗೆ ರಘುರಾಮ ಹೊಳ್ಳ, ಬೇಗಾರು ಶಿವಕುಮಾರ್, ವಸಂತ ಗೌಡ ಕಾಯರ್ತಡ್ಕ, ಸರಪಾಡಿ ಅಶೋಕ ಶೆಟ್ಟಿ, ದಿವಾಣ ಗೋವಿಂದ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಿದ್ಯಾ ಕೋಳ್ಯುರು, ಮುರಳಿ ಕಡೆಕಾರ್, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನಿವೃತ್ತ ಶಿಕ್ಷಕಿ ಶಾರದಾ ಟೀಚರ್, ಗಿರೀಶ್ ರೈ ಕಕ್ಯಪದವು, ವಾಸುದೇವ ರಂಗ ಭಟ್ಟ, ಪ್ರಶಾಂತ್ ಹೊಳ್ಳ, ಶಾಂತಾರಾಮ ಕುಡ್ವ ಮಾತನಾಡಿದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಪ್ರಮುಖರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶ್ರೀಪತಿ ಭಟ್, ಮಾವೆ ದಿನಕರ ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್, ಟಿ.ಜಿ.ರಾಜಾರಾಮ ಭಟ್,   ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಶ್ಯಾಮ ಭಟ್ ಸಹಿತ ಗೋವಿಂದ ಭಟ್ಟರ ಅಭಿಮಾನಿಗಳು, ವಿವಿಧ ಮೇಳಗಳ ಕಲಾವಿದರು, ಶಿಷ್ಯರು, ಬಂಧುಗಳು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಏ.28ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಗೆ ಜನಾಂದೋಲನ ನಡಿಗೆ

| ಹೋರಾಟ ಸಮಿತಿ ಸಭೆಯಲ್ಲಿ ನಿರ್ಧಾರ | ಮಾಜಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆ (more…)

5 hours ago