ಬಂಟ್ವಾಳದಲ್ಲಿ ನಿರ್ಮಾಣವಾಗುತ್ತಿರುವ ಪಂಜೆ ಭವನ ತ್ವರಿತವಾಗಿ ಪೂರ್ಣಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. REPORT PUBLISHED ABOUT PANJE BHAVANA IN BANTWALNEWS
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ವೇಳೆ ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ರಂಗಮಂದಿರ ಕಾಮಗಾರಿ ಜೊತೆಗೆ ಬಂಟ್ವಾಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಂಜ ಮಂಗೇಶರಾಯ ಸ್ಮಾರಕ ಭವನ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.https://www.bantwalnews.com
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ ಮಂಗೇಶರಾಯರು ಹುಟ್ಟಿದ ಬಂಟ್ವಾಳದ ಅವರ ಮನೆ ಸನಿಹವೇ ಭವನವೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಪರ್ದಿಯಲ್ಲಿ ನಿರ್ಮಾಣವಾಗುತ್ತಿದೆ. ನಿರ್ಮಾಣದ ಕೊನೇ ಹಂತದಲ್ಲಿರುವ ಈ ಕಟ್ಟಡ ಪೂರಕ ಅನುದಾನದ ಕೊರತೆಯಿಂದಾಗಿ ಇನ್ನೂ ಅಂತಿಮವಾಗಿಲ್ಲ.ಹೆಚ್ಚಿನ ಹಣಕಾಸಿನ ನೆರವಿನ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಪತ್ರವ್ಯವಹಾರಗಳು ನಡೆಯುತ್ತಿದ್ದು, ಅದಾದರೆ ಬಂಟ್ವಾಳದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರಕಲಿದೆ. ಇದಾದರೆ ಬಂಟ್ವಾಳ ರಂಗಮಂದಿರದ ಕುರಿತು ಇಲ್ಲಿನ ಜನರ ಬಹುಕಾಲದ ಕನಸು ನನಸಾಗಲಿದೆ
2017ರಲ್ಲಿ ಶಿಲಾನ್ಯಾಸವಾಗಿತ್ತು
೨೦೧೭ರಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ನಿರ್ದೇಶನದ ಮೇರೆಗೆ ರೇಖಾ ಅಂದಾಜುಪಟ್ಟಿಯನ್ನು ಕರ್ನಾಟಕ ಗೃಹಮಂಡಳಿ ವತಿಯಿಂದ ತಯಾರಿಸಿ, ಆಡಳಿತ ಅನುಮೋದನೆಗೆ ನೀಡಲಾಗಿತ್ತು. ಆ ವರ್ಷ ಅಕ್ಟೋಬರ್ ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ೫ ಕೋಟಿ ರೂ ವೆಚ್ಚದ ಪ್ರಸ್ತಾಪಿತ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಇದಕ್ಕೂ ಮೊದಲು ೨೦೦೭ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭ ಬಂಟ್ವಾಳದಲ್ಲಿ ಪಂಜೆ ಸ್ಮಾರಕ ನಿರ್ಮಾಣಕ್ಕೆ ೫೦ ಲಕ್ಷ ರೂ ಘೋಷಣೆ ಮಾಡಲಾಗಿತ್ತು. ಆದರೆ ಆಗ ಭವನಕ್ಕೆ ಸ್ಥಳ ನಿಗದಿಯಾಗಿರಲಿಲ್ಲ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ:
ಪಂಜೆ ಮಂಗೇಶರಾಯರು. (ಜನನ:೧೮೭೪ ಫೆಬ್ರುವರಿ ೨೨, ನಿಧನ:೧೯೩೭ ಅಕ್ಟೋಬರ ೨೪ ) ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾಗಿದ್ದು, ಅಧ್ಯಾಪಕರಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿ. ಶಿಶು ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದವರು. ಬಂಟವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಪುಸ್ತಕಗಳನ್ನು ಸಂಪಾದಿಸಿದರು. ‘ನಾಗರಹಾವೆ ಹಾವೊಳು ಹೂವೆ‘ ಇವರ ಪ್ರಸಿದ್ಧ ಬಾಲಗೀತೆ, ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ. ‘ಅಣ್ಣನ ವಿಲಾಪ’ ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆ. ಕನ್ನಡದಲ್ಲಿ ಮೊದಲ ಬಾರಿಗೆ ಕಥನಕವನಗಳನ್ನು ಬರೆದವರೂ ಪಂಜೆಯವರೆ. ಡೊಂಬರ ಚೆನ್ನ ಯು ಸ್ವತಂತ್ರವಾದ ಕಥನ ಕವನ, ರಂಗಸೆಟ್ಟಿ, ನಾಗಣ್ಣನ ಕನ್ನಡಕ, ಕಡೆಕಂಜಿ ಪ್ರಸಿದ್ಧ ಕಥನ ಕವನಗಳು. ೧೯೦೦ರಲ್ಲಿ ಪಂಜೆಯವರು ‘ನನ್ನ ಚಿಕ್ಕ ತಾಯಿ’ ಎಂಬ ಸಣ್ಣ ಕತೆ ಬರೆದಿದ್ದರು.