ಗ್ರಾಮ ಪಂಚಾಯತ್ ನಲ್ಲಿರುವ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲು ಸಿದ್ಧಕಟ್ಟೆ ವ್ಯ.ಸೇ.ಸ.ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
2024 25 ನೇ ಸಾಲಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರೀಮಿಯಂ ಪಾವತಿಸಿದ ರೈತರಿಗೆ ಬಿಡುಗಡೆಯಾದ ಪರಿಹಾರದಲ್ಲಿ ತುಂಬಾ ಗೊಂದಲಗಳು ಆಗಿರುತ್ತವೆ. ಈ ಬಗ್ಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಟೆಂಡರ್ ವಹಿಸಿದ ಎಜೆನ್ಸಿಗಳಲ್ಲಿ ವಿಚಾರಿಸಿದಾಗ ಮಳೆ ಮಾಪನ ಕೇಂದ್ರಗಳಲ್ಲಿ ಬಿದ್ದಿರುವ ಮಳೆಯ ಪ್ರಮಾಣದಲ್ಲಿ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿರುತ್ತಾರೆ. ಆದರೆ ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿರುವ ಮಳೆ ಮಾಪನ ಕೇಂದ್ರಗಳು ಚಲಾವಣೆ ಇಲ್ಲದೇ ದುಸ್ಥಿತಿಯಲ್ಲಿ ಇರುವುದಾಗಿ ತಿಳಿದು ಬಂದಿದೆ. ಇದರಿಂದಾಗಿ ಕರಾವಳಿಯ ಕೆಲವೊಂದು ತಾಲೂಕುಗಳಲ್ಲಿ ರೈತರು ಪಾವತಿಸಿದ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ದೊರೆತ್ತಿದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿರುವ ಮಳೆ ಮಾಪನ ಕೇಂದ್ರಗಳನ್ನು ಪಂಚಾಯತ್ ಮಟ್ಟದ ಕಂದಾಯ ಅಥವಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸುಪರ್ಧಿಯಲ್ಲಿ ಪ್ರತಿ ತಿಂಗಳಿಗೊಮ್ಮೆ ಪರಿವೀಕ್ಷಣೆ ಮಾಡಿಸಿ ಸುಸ್ಥಿತಿಯಲ್ಲಿ ಇಡಲು ಅಗತ್ಯ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವಂತೆ ಸರಕಾರಕ್ಕೆ ಅವರು ಮನವಿ ಮಾಡಿದ್ದಾರೆ