ಮನೆಮಂದಿ ಜಾತ್ರೆಗೆ ತೆರಳಿದ ಸಂದರ್ಭ ಸುಮಾರು 8 ಲಕ್ಷ ರು ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಸುಮಾರು 9 ಪವನ್ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮನೆ ಮಾಲೀಕ ಸತೀಶ್ ಶೆಣೈ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಫೆ.4ರಂದು ಕಶೇಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವ ಇದ್ದುದ್ದರಿಂದ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಸಂಜೆ 6.45 ಕ್ಕೆ ಮನೆಯಿಂದ ಕಶೆಕೋಡಿಗೆ ಹೊರಟು ಉತ್ಸವ ಮುಗಿಸಿ ವಾಪಸ್ ಮನೆಗೆ ಬಂದಾಗ ರಾತ್ರಿ ಸುಮಾರು 10.30 ಆಗಿದ್ದು, ಈ ವೇಳೆ ಮನೆಯ ಹಿಂಬದಿಯ ಬಾಗಿಲು ತೆರೆದಿರುವುದನ್ನು ನೋಡಿದಾಗ ಯಾರೋ ಕಳ್ಳರು ಯಾವುದೋ ಸಾಧನದಿಂದ ಬಾಗಿಲಿನ ಚಿಲಕವನ್ನು ತುಂಡರಿಸಿ ಬಿದ್ದಿರುವುದು ಕಂಡುಬಂದಿದೆ. ಒಳಗೆ ಬಂದು ಕೋಣೆಯಲ್ಲಿದ್ದ ಕಪಾಟನ್ನು ಯಾವುದೋ ಸಾಧನದಿಂದ ಮೀಟಿ ತೆರೆದಿದ್ದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು ಕಂಡುಬಂದಿದೆ. ಕಪಾಟಿನ ಲಾಕರ್ ನಲ್ಲಿದ್ದ ಸ್ಟೀಲ್ ಡಬ್ಬಿಗಳು ಮಂಚದಲ್ಲಿ ತೆರೆದಿದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಸುಮಾರು 5 ಪವನ್ ತೂಕದ ಒಂದು ಹವಳದ ಮಾಲೆ, ಎರಡೂವರೆ ಪವನ್ ತೂಕದ ಒಂದು ಮುತ್ತಿನ ಸರ, ಒಂದೂವರೆ ಪವನ್ ತೂಕದ ಬೆಂಡೋಲೆ, ಜುಂಕಿ, 5000 ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.