ವಿಟ್ಲ: ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಿನ್ನೆಲೆಯಲ್ಲಿ ಲಾಂಛನ ಬಿಡಗಡೆ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು. ಶೃಂಗೇರಿ ದಕ್ಷಿಣಾಮ್ನಾಯ ಶಾರಾದಾಪೀಠದ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮೀಜಿಯವರು ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ದಿನಾಂಕವನ್ನು ಘೋಷಿಸಿ, ಬ್ರಹ್ಮಕಲಶಾಭಿಷೇಕದ ಲಾಂಛನವನ್ನು ಲೋಕಾರ್ಪಣೆಗೊಳಿಸಿ ಸ್ವರ್ಣ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ರಘುರಾಮ ಕಾರಂತ ಪದ್ಯಾಣ, ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ, ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್, ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಪ್ರಮುಖರಾದ ಶ್ಯಾಮಸುದರ್ಶನ ಹೊಸಮೂಲೆ ಮತ್ತಿತರರು ಉಪಸ್ಥಿತರಿದ್ದರು. 2026ರ ಮಾರ್ಚ್ 30ರಿಂದ ಆರಂಭಗೊಂಡು, ಏಪ್ರಿಲ್ 6ರವರೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ.