ಕವರ್ ಸ್ಟೋರಿ

ಸ್ವಾವಲಂಬನೆಗೆ ಮಾದರಿಯಾದ ಸಿದ್ದಿವಿನಾಯಕ ಸ್ವಸಹಾಯ ಗುಂಪು

ಈ ಮಹಿಳೆಯರ ಸಾಧನೆ ಇತರರಿಗೆ ಪ್ರೇರಣಾದಾಯಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಗೋಳ್ತಮಜಲಿನ ಶ್ರೀ ಸಿದ್ಧಿವಿನಾಯಕ ಸ್ವಸಹಾಯ ಗುಂಪು ತನ್ನ ಪಾಡಿಗೆ ಸ್ವಾವಲಂಬಿಯಾಗಿ ನಡೆಸುತ್ತಿದ್ದ ಕಾರ್ಯ ಗುರುತಿಸಿ ಇಂದು ರಾಜ್ಯಮಟ್ಟದ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಇತ್ತೀಚೆಗೆ ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆಯಡಿ ಅತ್ಯುತ್ತಮ ಸಾಧನೆ ಮಾಡಿರುವ ಸ್ವ-ಸಹಾಯ ಗುಂಪುಗಳಿಗೆ ನೀಡುವ ರಾಜ್ಯಮಟ್ಟದ   ‘ಕೌಶಲ್ಯ ಕರ್ನಾಟಕ ಪ್ರಶಸ್ತಿ-2025’ ಗೆ ಗೋಳ್ತಮಜಲು ಶ್ರೀ ಸಿದ್ದಿವಿನಾಯಕ ಸ್ವಸಹಾಯ ಗುಂಪು ಆಯ್ಕೆಯಾಗಿದ್ದು, ಸದಸ್ಯರು ಪ್ರಶಸ್ತಿ ಪಡೆದರು.

ಜಾಹೀರಾತು

ಸಂಘದ ಕ್ರಿಯಾಶೀಲತೆ ಹಾಗೂ ಗುಂಪು ಸೇರಿದ ಬಳಿಕ ಸದಸ್ಯರು ಕೈಗೊಂಡ ಹಲವು ರೀತಿಯ ಜೀವನೋಪಾಯ ಚಟುವಟಿಕೆಗಳನ್ನು ಗುರುತಿಸಿ, ರಾಜ್ಯದ  ಸುಮಾರು 3 ಲಕ್ಷ್ಮ ಸ್ವಸಹಾಯ ಗುಂಪುಗಳ ಪೈಕಿ 8 ಗುಂಪುಗಳನ್ನು ಆಯ್ಕೆ ಮಾಡಲಾಗಿದ್ದು ಅವುಗಳಲ್ಲಿ ಗೋಳ್ತಮಜಲು  ಶ್ರೀ ಸಿದ್ದಿವಿನಾಯಕ ಸ್ವಸಹಾಯ ಗುಂಪು ದ್ವಿತೀಯ ಸ್ಥಾನದಲ್ಲಿರುವುದು ಗಮನಾರ್ಹ. ಸಂಘದ ಸದಸ್ಯರು ತಮ್ಮ ಬದುಕನ್ನು ಮಾತ್ರ ಸುಧಾರಿಸಿಲ್ಲ, ಇನ್ನೂ ನಾಲ್ಕು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಮನಿಷಾ, ಚಂಪಾವತಿ, ಸುಮತಿ, ಸುನೀತಾ ಸಿ, ವನಿತಾ ಸುಲೋಚನಾ, ಜಯಂತಿ, ಯಶೋಧಾ, ರೋಹಿಣಿ ಬಿ., ವನಿತಾ ಬಿ., ಹರ್ಷಿತ ಸೇರಿದಂತೆ ಒಟ್ಟು 11 ಸದಸ್ಯರು ಈ ಸಂಘ ನಾರೀಶಕ್ತಿ.

2024–25ನೇ ಸಾಲಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಸ್ವಸಹಾಯ ಗುಂಪು ಎಂಬ ಗೌರವವನ್ನು ಪಡೆದ ಈ ಸಂಘ, ಮಹಿಳಾ ದಿನಾಚರಣೆ ವೇಳೆ 75,000 ರೂ ನಗದು ಪ್ರಶಸ್ತಿ ಮತ್ತು ಪ್ರಶಸ್ತಿಪತ್ರವನ್ನು ಗಳಿಸಿದ್ದು, ಈಗ  ಕರ್ನಾಟಕ ಸರಕಾರದ ಪ್ರತಿಷ್ಠಿತ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಭಾಜನವಾಗಿದೆ.

ಸಮುದಾಯ ಸಹಕಾರ, ಸಂಜೀವಿನಿ ಮಾರ್ಗದರ್ಶನ ಹಾಗೂ ಸ್ವಪ್ರೇರಿತ ಶ್ರಮದಿಂದ ಬೆಳೆದ ಈ ಸಿದ್ದಿವಿನಾಯಕ ಸ್ವಸಹಾಯ ಗುಂಪು ಇಂದು ಗ್ರಾಮೀಣ ಮಹಿಳೆಯರ ಸ್ವಾವಲಂಬನೆಯ ಚಿಹ್ನೆ. ಈ ಸಂಘ ತೋರಿಸಿರುವ ಮಾರ್ಗ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಣೆ.

ಸಹಕಾರದೊಂದಿಗೆ ಉಳಿತಾಯ ತತ್ವ:

ಗೊಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 2022ರ  ಏಪ್ರಿಲ್6  ರಂದು “ಶ್ರೀ ಸಿದ್ದಿವಿನಾಯಕ ಸ್ವಸಹಾಯ ಗುಂಪು”  ಸ್ಥಾಪನೆಯಾಯಿತು. ಕೇವಲ 10 ಮಹಿಳೆಯರ ಆಶಯದಿಂದ ಪ್ರಾರಂಭವಾದ ಈ ಸಂಘ, ಪ್ರತೀ ತಿಂಗಳು ನಿಗದಿತ ಸಭೆಗಳನ್ನು ನಡೆಸುತ್ತಾ, ತಲಾ 200 ರೂ ಉಳಿತಾಯ ಮಾಡುತ್ತಾ ನಿಧಾನವಾಗಿ ಬೆಳೆಯಿತು. ಪಂಚಸೂತ್ರ ಮತ್ತು ದಶಸೂತ್ರ ತತ್ವಗಳನ್ನು ಆಧಾರವಾಗಿಸಿಕೊಂಡು ಸಂಘದ ಕಾರ್ಯಗಳು ಮುಂದುವರಿಯಿತು.

ಸಾಮರ್ಥ್ಯಾಭಿವೃದ್ಧಿಯ ಭಾಗವಾಗಿ ಆಶೀರ್ವಾದ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಸಹಕಾರದಿಂದ,ಎಂಬಿಕೆ ಮತ್ತು ಎಲ್ ಸಿ ಆರ್ ಪಿ ಗಳು ಸಂಘದ ಸದಸ್ಯರಿಗೆ ನಿರ್ವಹಣೆ, ದಾಖಲೆ ನಿರ್ವಹಣೆ ಮತ್ತು ನಾಯಕತ್ವ ತರಬೇತಿಗಳನ್ನು ನೀಡಿದರು. ಕೃಷಿ ಹಾಗೂ ಕೃಷಿಯೇತರ ಜೀವನೋಪಾಯಗಳ ಕುರಿತು ಅರಿವು ಮೂಡಿಸಲಾಯಿತು.

ಈ ತರಬೇತಿಗಳಿಂದ ಪ್ರೇರಣೆ ಪಡೆದ ಸದಸ್ಯೆ ಮನಿಷಾ ಅವರು ಸಂಘದ ಬಂಡವಾಳ ನಿಧಿಯಿಂದ ಸಾಲ ಪಡೆದು ಟೈಲರಿಂಗ್ ಮತ್ತು ಚಾಟ್ಸ್ ಅಂಗಡಿ ಪ್ರಾರಂಭಿಸಿದರು. ಯಶೋಧಾ ಅವರು ಕೂಡಾ ಟೈಲರಿಂಗ್ ವೃತ್ತಿಗೆ ಕಾಲಿಟ್ಟರು, ವನಿತಾ ಅವರು ಕಾಳುಮೆಣಸು ಬೆಳೆದು ಜೀವನ ಸಾಗಿಸುತ್ತಿದ್ದಾರೆ.

ಎನ್.ಆರ್.ಎಲ್.ಎಂ. ಬಡ್ಡಿ ಸಹಾಯಧನ ಸಹಿತ ಬ್ಯಾಂಕ್ ಸಾಲ ಸದಸ್ಯರ ಜೀವನೋಪಾಯಕ್ಕೆ ಪುಷ್ಠಿ ನೀಡಿತು. ಚಂಪಾವತಿ ಅವರು  ಟೈಲರಿಂಗ್ ಕೆಲಸ ಆರಂಭಿಸಿ, ಇತರ ಸದಸ್ಯರಿಗೂ ಉದ್ಯೋಗಾವಕಾಶ ಸೃಷ್ಟಿಸಿದರು. ವನಿತಾ ಅವರು ಸಂಘದ ಆಂತರಿಕ ಸಾಲದ ಸಹಾಯದಿಂದ ಮಲ್ಲಿಗೆ ಕೃಷಿ ಮಾಡಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದ್ದಾರೆ. ವನಿತಾ, ಸುಲೋಚನಾ ಇತರ ನಾಗರಿಕರಿಗೂ ಇವುಗಳ ಮಾಹಿತಿ ನೀಡುತ್ತಿದ್ದಾರೆ. ಗ್ರಾಮದ ಘನತ್ಯಾಜ್ಯ ನಿರ್ವಹಣೆ ಯೋಜನೆಯಲ್ಲಿ ಈ ಸಂಘದ ಪಾತ್ರ ಗಮನಾರ್ಹವಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.