ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನಾಚರಣೆ ಸಂಬಂಧ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ನಡೆಯಿತು.
ಸಂಸ್ಥೆಯ ಪ್ರಿನ್ಸಿಪಾಲ್ ಭಗವಾನ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ರಂಥ ರಾಷ್ಟ್ರನಾಯಕರಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಮತ್ತು ಅವರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಬಲಿಷ್ಟ ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ ದೇಶದ ಅಭಿವೃದಿಯಲ್ಲಿ ಮುಖ್ಯ ಪಾತ್ರವಹಿಸಬೇಕು ಎಂದು ತಿಳಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥರಾದ ಮೋಹನ್ ರಾಜ್.ಜಿ.ಎಸ್ ಮಾತಾಡಿ ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ ಮತ್ತು ಉದ್ದೇಶವನ್ನು ತಿಳಿಸುತ್ತಾ , ಶಿಕ್ಷಣ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ನಮ್ಮ ಜೀವನವನ್ನು ಪ್ರಕಾಶಮಾನ ಗೊಳಿಸುತ್ತದೆ ಎಂದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಭಾಸ್ಕರ ಎಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಕ್ಷಣ ಎಂದರೆ ಒಳ್ಳೆಯ ಮನುಷ್ಯನನ್ನು ರೂಪಿಸುವ ಪ್ರಕ್ರಿಯೆ. ಸರಿಯಾದ ಶಿಕ್ಷಣ ನಮಗೆ ಮಾನವೀಯ ಮೌಲ್ಯಗಳು, ಸಹಿಷ್ಣುತೆ ಮತ್ತು ದೇಶ ಭಕ್ತಿಯನ್ನು ಕಲಿಸುತ್ತದೆ. ಈ ಮಹತ್ವದ ಕಲ್ಪನೆಯೇ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜೀವನಾದರ್ಶವಾಗಿತ್ತು ಎಂದರು.
ಸಿ.ಎಸ್ ವಿಭಾಗ ಮುಖ್ಯಸ್ಥರಾದ ಭುವನೇಶ್ವರಿ, ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಉದಯ ಕುಮಾರ್, ಮೆಕ್ಯಾನಿಕಲ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಮೃದುಲಾ.ವಿ, ಕಚೇರಿ ಅಧೀಕ್ಷಕರಾದ ಸುಧಾಕರ್ ಸಿ.ಎಸ್ ಮುಂತಾದವರು ಉಪಸ್ಥಿತರಿದ್ದರು.