ಪ್ರಮುಖ ಸುದ್ದಿಗಳು

ಮರೀಚಿಕೆಯಾಗಿಯೇ ಉಳಿದ ಬಂಟ್ವಾಳ ತಾಲೂಕು ಕ್ರೀಡಾಂಗಣ

ಸರಿಸುಮಾರು ಏಳು ವರ್ಷಗಳಾದವು. ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಾಣವಾಗುವ ಭರವಸೆ, ಘೋಷಣೆಗಳು ಇನ್ನೂ ಚಾಲ್ತಿಯಲ್ಲಿವೆ. ಕಾಮಗಾರಿ ನಡೆಯುವುದು ಬಿಡಿ, ಅನುದಾನವೇ ಬಿಡುಗಡೆ ಆಗಿಲ್ಲ. ಆದರೂ ಇವತ್ತಲ್ಲ, ನಾಳೆ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಆಗಿನ ಬಂಟ್ವಾಳ ಶಾಸಕರು ಹಾಗೂ ಸಚಿವರೂ ಆಗಿದ್ದ ಬಿ.ರಮಾನಾಥ ರೈ ಅವರು, 2018ರ ಮಾರ್ಚ್ 13ರಂದು ಬೆಂಜನಪದವಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾದ ಬಳಿಕ ಸರಕಾರವೂ ಬದಲಾಯಿತು, ಶಾಸಕರೂ ಬದಲಾದರು. ರಾಜೇಶ್ ನಾಯ್ಕ್ ಶಾಸಕರಾಗಿ ಆಗಮಿಸಿದ ಬಳಿಕ ಸುಸಜ್ಜಿತವಾದ ಕ್ರೀಡಾಸಂಕೀರ್ಣ ನಿರ್ಮಾಣದ ಕುರಿತು ಪ್ರಸ್ತಾಪಿಸಿ ಕೇಂದ್ರದ ಖೇಲ್ ಇಂಡಿಯಾ ಮೂಲಕ ಬೃಹತ್ ಮೊತ್ತದ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಾಗಿ ಹೇಳಿದರು. 2025ರ ನವೆಂಬರ್ 3ರವರೆಗೂ ತಾಲೂಕಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಗಳು ಯಾವುದಾದರೂ ಖಾಸಗಿ ಶಾಲಾ ಆಟದ ಮೈದಾನದಲ್ಲಿ ನಡೆದಿವೆ. ಪಿಯು ಕಾಲೇಜಿನ ಮಕ್ಕಳ ಕ್ರೀಡಾಕೂಟ ತಾಲೂಕಿನ ಹೊರಗೆ ನಡೆದಿವೆ. ಬಂಟ್ವಾಳ ತಾಲುಕು ಕ್ರೀಡಾಂಗಣದ ಕನಸು ನನಸೂ ಆಗಿಲ್ಲ, ಮರೀಚಿಕೆಯಾಗಿಯೇ ಉಳಿದಿದೆ.ಕ್ರೀಡಾಕೂಟಗಳ ವೇದಿಕೆಯ ಭಾಷಣ ಪೂರ್ತಿ ಚೆನ್ನಾಗಿ ಅಭ್ಯಾಸ ಮಾಡಿ, ನೀವೊಬ್ಬ ಉತ್ತಮ ಕ್ರೀಡಾಪಟುವಾಗಬಹುದು ಎಂಬ ಸಲಹೆಗಳು ಇರುತ್ತವೆ. ಆದರೆ ಇಡೀ ಬಂಟ್ವಾಳ ತಾಲೂಕಿನಲ್ಲಿ ಯುವಜನ ಕ್ರೀಡಾ ಇಲಾಖೆಯ ಅಧಿಕಾರಿಯೂ ಇಲ್ಲ. ಶಾಲೆಗಳಲ್ಲಿ ಶಾರೀರಿಕ ಶಿಕ್ಷಣ ಶಿಕ್ಷಕರ ಕೊರತೆ ಸಹಿತ ಸಮಸ್ಯೆಗಳು ಬೆಟ್ಟದಷ್ಟಿವೆ.

ಜಾಹೀರಾತು

ಕ್ರೀಡಾಪಟುಗಳಿಗೆ ಪ್ರಯಾಣದ್ದೇ ಕಷ್ಟ:

ಮಂಗಳೂರು, ಮೂಡುಬಿದಿರೆಯಂಥ ಪ್ರದೇಶಗಳಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿದರೆ, ಪ್ರಯಾಣದ್ದೇ ದೊಡ್ಡ ಸಮಸ್ಯೆ. ಬಹಳಷ್ಟು ವಿದ್ಯಾರ್ಥಿಗಳು ತಾಲೂಕಿನ ಗಡಿಭಾಗಗಳಿಂದ ಆಗಮಿಸುತ್ತಾರೆ. ವಿಟ್ಲ, ವಾಮದಪದವು, ಅಡ್ಯನಡ್ಕದಂಥ ಪ್ರದೇಶಗಳ ಕಾಲೇಜು, ಹೈಸ್ಕೂಲು ವಿದ್ಯಾರ್ಥಿಗಳು ಮಂಗಳಾ ಸ್ಟೇಡಿಯಂನಲ್ಲಿ ಭಾಗವಹಿಸಬೇಕಾದರೆ, ಸಾಕಷ್ಟು ಸಮಯ ವ್ಯಯಿಸಬೇಕು.

ಪ್ರತಿ ಬಾರಿ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಏರ್ಪಡಿಸುವಾಗಲೂ ಖಾಸಗಿ ಸಂಸ್ಥೆಗಳನ್ನು ಆಶ್ರಯಿಸಬೇಕಾಗುತ್ತದೆ. ಅವು ಸುಸಜ್ಜಿತವಾಗಿರುತ್ತವೆಯಾದರೂ ಅವುಗಳೇ ಶಾಶ್ವತವೇನಲ್ಲ. ಸರಕಾರಿ ಕ್ರೀಡಾಂಗಣಕ್ಕೆ ಶುಲ್ಕದ ಸಮಸ್ಯೆ ಕಡಿಮೆ.

ಜನಪ್ರತಿನಿಧಿಗಳು ಏನಂತಾರೆ?

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಈಗಾಗಲೇ ಖೇಲ್ ಇಂಡಿಯಾ ಮೂಲಕ ಬಂಟ್ವಾಳ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ ಪ್ರಸ್ತಾಪನೆ ಸಿದ್ಧವಾಗಿದ್ದು, ಬೆಂಜನಪದವಿನಲ್ಲಿ ಅದನ್ನು ಮಾಡುವ ಕುರಿತು ಚಿಂತನೆಗಳು ಸಾಗಿವೆ ಎಂದು ಹೇಳುತ್ತಾರೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಈ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದಿದ್ದು, ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಬೆಂಜನಪದವು ಸರಕಾರಿ ಪ್ರೌಢಶಾಲೆಯ ಹತ್ತಿರ ತಾಲೂಕು ಕ್ರೀಡಾಂಗಣ ನಿರ್ಮಿಸಲು ಮಂಜೂರಾದ 10 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.