ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿ ಸಭೆ ಜರಗಿತು.
ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮಾತನಾಡಿ ತಾಲೂಕು ಘಟಕಗಳ ಪುನಶ್ಚೇತನ, ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವ, ಸದಸ್ಯತನದ ನವೀಕರಣ, ಸೇವಾ ಚಟುವಟಿಕೆ ನಡೆಸುವ ಬಗ್ಗೆ ತಿಳಿಸಿದರು.
ಪುತ್ತೂರಿನಲ್ಲಿ ನಡೆಯುವ ಹತ್ತನೇ ದ.ಕ ಜಿಲ್ಲಾ ಮಟ್ಟದ ಗಮಕ ಸಮ್ಮೇಳನ ಮತ್ತು ಬಂಟ್ವಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮತ್ತು ಮಾಜಿ ಸಚಿವ ಬಿ. ರಮನಾಥ ರೈ ಅಭಿನಂದನಾ ಸಮಾರಂಭದಲ್ಲಿ ಹಿರಿಯರ ಸೇವಾ ಪ್ರತಿಷ್ಠಾನವು ಸಹಕಾರ ನೀಡುತ್ತಿದೆ ಎಂದರು.
ಸಭೆಯಲ್ಲಿ ಕೋಶಾಧಿಕಾರಿ ಅನಾರು ಕೃಷ್ಣಶರ್ಮ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯ ಶಂಕರ ರೈ ಪುಣಚ, ಪದ್ಮನಾಭ ನಾಯಕ್ ಪುತ್ತೂರು, ಚಂಚಲಾಕ್ಷಿ,ಬಾಲಕೃಷ್ಣ, ಡಾ ಬಿ. ಎನ್ ಮಹಾಲಿಂಗ ಭಟ್, ಜಯರಾಮ ಪೂಜಾರಿ ನರಿಕೊಂಬು ಉಪಸ್ಥಿತರಿದ್ದರು. ದೇವಳದಲ್ಲಿ ನಡೆಯುತ್ತಿರುವ 108 ದಿನಗಳ ಅಖಂಡ ಭಜನೆ ಮತ್ತು ರಂಗಪೂಜೋತ್ಸವದ ಅನ್ನದಾನದ ಸೇವೆಗೆ ಉದಯಶಂಕರ ರೈ ಪುಣಚ ಮತ್ತು ಚಂದ್ರಶೇಖರ ಆಳ್ವ ಪಡುಮಲೆ ದೇಣಿಗೆಯನ್ನು ನೀಡಿದರು. ಸಹ ಸಂಚಾಲಕ ವೇದವ್ಯಾಸ ರಾಮಕುಂಜ ಪ್ರಾರ್ಥಿಸಿದರು. ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.