ಯಕ್ಷಾವಾಸ್ಯಮ್ ಕಾರಿಂಜದ ಪಂಚಮ ವಾರ್ಷಿಕೋತ್ಸವ ವಗ್ಗದ ಕಾಡಬೆಟ್ಟುವಿನ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನವೆಂಬರ್ 1ರಂದು ನಡೆಯಲಿದ್ದು, ಈ ಸಂದರ್ಭ ಯಕ್ಷಾವಾಸ್ಯಮ್ ಪ್ರಶಸ್ತಿಯನ್ನು ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ನೀಡಲಾಗುವುದು. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಯಕ್ಷಾವಾಸ್ಯಮ್ ಕಾರಿಂಜ ಸಂಸ್ಥಾಪಕಿ ಸಾಯಿಸುಮಾ ಎಂ.ನಾವಡ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಬೆಳಗ್ಗೆ 10ಕ್ಕೆ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಮಂಜಪ್ಪ ನಾಯ್ಕ, ಬೊಮ್ಮಿ, ಶಾರದಾ ಜಿ. ಬಂಗೇರ, ಲೋಕಯ್ಯ ಗೌಡ ಹಾಗೂ ವಾಸುದೇವ ಪ್ರಭು ಅವರಿಗೆ ಯಕ್ಷಾವಾಸ್ಯಮ್ ಗೌರವ ಸನ್ಮಾನ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಭಾ ಕಾರ್ಯಕ್ರಮ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವೈದ್ಯ ಹಾಗೂ ಕಲಾವಿದ ಡಾ. ಭಾಸ್ಕರಾನಂದ ಕುಮಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಬೆಳಗ್ಗೆ 11ಕ್ಕೆ ಪೂರ್ವರಂಗ ಹಾಗೂ ಶ್ರೀಕೃಷ್ಣಲೀಲೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 4.30ಕ್ಕೆ ಯಕ್ಷಗಾನ ಪ್ರದರ್ಶನ ಶ್ರೀದೇವಿ ಮಹಾತ್ಮೆ ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು. 2020ರಲ್ಲಿ ಸಂಸ್ಥೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ ವಾರ್ಷಿಕೋತ್ಸವ ನಡೆಸುತ್ತಿದ್ದೇವೆ. ಈ ವರ್ಷ 60ರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಕಾರಿಂಜ ಮತ್ತು ಬಂಟ್ವಾಳದಲ್ಲಿ ತರಗತಿಗಳು ನಡೆಯುತ್ತಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ವಾರ್ಷಿಕೋತ್ಸವ ಸಮಿತಿ ಉಪಾಧ್ಯಕ್ಷರಾದ ದೇವದಾಸ್ ಶೆಟ್ಟಿ ಬಂಟ್ವಾಳ, ಲತಾ ಆರ್. ಮಾಣಿಬೆಟ್ಟು, ಜೊತೆ ಕಾರ್ಯದರ್ಶಿ ಸುಮನಾ ಯಳಚಿತ್ತಾಯ ಉಪಸ್ಥಿತರಿದ್ದರು.