ಬಂಟ್ವಾಳ

ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲಾ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿ ಸಭೆ, ಅಧ್ಯಕ್ಷರಾಗಿ ಮಮತಾ ಪಿ.ಶೆಟ್ಟಿ ಆಯ್ಕೆ

ಜಾಹೀರಾತು

ಮಂಚಿ ಕೊಳ್ನಾಡು ಪ್ರೌಢಶಾಲೆಯು 1977ರಲ್ಲಿ ಸ್ಥಾಪನೆಗೊಂಡು 2027 ಕ್ಕೆ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಈ ಕಾರಣದಿಂದ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು, ಶಾಲಾ ಹಿತೈಷಿಗಳನ್ನು, ಊರಿನ ವಿದ್ಯಾಭಿಮಾನಿಗಳನ್ನು ಸೇರಿಸಿ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿ ರಚನಾ ಸಭೆಯನ್ನು ಶಾಲಾ ವತಿಯಿಂದ ಆಯೋಜಿಸಲಾಗಿತ್ತು.

ಈ ಸಂದರ್ಭ ಸುವರ್ಣಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಮಮತಾ ಪಿ ಶೆಟ್ಟಿ ಮಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಮ್ಯಾಕ್ಸಿಮ್ ಫರ್ನಾಂಡಿಸ್, ಪ್ರಧಾನ ಕೋಶಾಧಿಕಾರಿಯಾಗಿ ಉಮಾನಾಥ ರೈ ಮೇರಾವು ಹಾಗೂ ಪ್ರಧಾನ ಸಂಚಾಲಕರಾಗಿ ರಮಾನಂದ ನೂಜಿಪ್ಪಾಡಿ ಆಯ್ಕೆಗೊಂಡರು. ಉಳಿದಂತೆ ಇನ್ನಷ್ಟು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಮಾತನಾಡಿ, “ಶಾಲೆಯ ಹಿರಿಯ ವಿದ್ಯಾರ್ಥಿಯಾಗಿ ಶಾಲೆಯ ಋಣವನ್ನು ತೀರಿಸುವ ಸದಾವಕಾಶ ಒದಗಿ ಬರುವುದು ಭಾಗ್ಯವಾಗಿದೆ. ಬದುಕು ಕಟ್ಟಿಕೊಟ್ಟ ಶಾಲೆಯ ಸುವರ್ಣ ಸಂಭ್ರಮಕ್ಕೆ ಎಲ್ಲರೂ ಸಾಕ್ಷಿಗಳಾಗಬೇಕು” ಎಂದರು.

ಮಾರ್ಗದರ್ಶನ ಸಮಿತಿಯ ನಿವೃತ್ತ ಮುಖ್ಯ ಶಿಕ್ಷಕರಾದ ಪುರುಷೋತ್ತಮ ಟಿ ಮಾತನಾಡಿ, “ಸುವರ್ಣ ಸಂಭ್ರಮವನ್ನು ಕಟ್ಟಡ ನಿರ್ಮಾಣದ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಲು ಮುಂದಾಗಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳು, ಶಾಲೆಯ ಹಿತೈಷಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಸುಶೀಲ ವಿಟ್ಲ ಸುವರ್ಣ ಸಂಭ್ರಮದ ಆಶಯ ನುಡಿಗಳನ್ನು ಆಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಾತನಾಡಿ, “ಸೌಹಾರ್ಧತೆ,  ಸಮಾನತೆಯನ್ನು ಸಾರುವ ಶಾಲೆ ಎಲ್ಲಾ ಸಮುದಾಯದವರ ದೇಗುಲವಾಗಿದ್ದು ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು.” ಎಂದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀರಾಮಮೂರ್ತಿ, ಶಾಲಾಭಿವೃದಿ ಸಮಿತಿಯ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಗಣೇಶ್ ಪ್ರಭು, ಸುಲೈಮಾನ್ ಜಿ ಸುರಿಬೈಲು, ಗಿರೀಶ್ ಗೌಡ ಮತ್ತು ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.