ಜಿಲ್ಲಾ ಸುದ್ದಿ

ಸಕ್ಷಮ ದ.ಕ ಘಟಕದಿಂದ ಅಷ್ಟಾವಕ್ರ ಜಯಂತಿ ಆಚರಣೆ; ದಿವ್ಯಾಂಗ ವಿದ್ಯಾರ್ಥಿ ವೇತನ ವಿತರಣೆ

ಸಕ್ಷಮ ದ.ಕ ಘಟಕದಿಂದ ಅಷ್ಟಾವಕ್ರ ಜಯಂತಿ ಆಚರಣೆ; ದಿವ್ಯಾಂಗ ವಿದ್ಯಾರ್ಥಿ ವೇತನ ವಿತರಣ

ಜಾಹೀರಾತು

ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಘಟಕದ ವತಿಯಿಂದ ಅಷ್ಟಾವಕ್ರ ಜಯಂತಿ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹೊಸದಿಗಂತ ಸ್ಥಾನೀಯ ಸಂಪಾದಕರಾದ ಪ್ರಕಾಶ್ ಇಳಂತಿಲ ಮಾತನಾಡಿ “ವಿಶೇಷ ಚೇತನ ವ್ಯಕ್ತಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ದಿವ್ಯಾಂಗರು ಎಂದು ಕರೆದು ಅವರ ಆತ್ಮಗೌರವವನ್ನು ಹೆಚ್ಚಿಸಿದ್ದಾರೆ. ಅಷ್ಟಾವಕ್ರನು ತನ್ನ ವೈಕಲ್ಯಗಳನ್ನು ಮೀರಿ ಮೇಧಾವಿಯಾಗಿ ಬೆಳೆದು ದಿವ್ಯಾಂಗರಿಗೆ ಮಾತ್ರವಲ್ಲದೆ ಎಲ್ಲರಿಗೂ ಆದರ್ಶಪ್ರಾಯನಾಗಿದ್ದಾನೆ” ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಿದ್ಧ ವಾಗ್ಮಿ, ಸಮಾಜ ಸೇವಕ ಹಾಗೂ ಹರಿಕಥಾ ಕೀರ್ತನೆಕಾರರಾದ ಕಿರಣ್ ಕುಮಾರ್ ಅಷ್ಟಾವಕ್ರನ ಸ್ಫೂರ್ತಿದಾಯಕ ಕಥೆಯನ್ನು ವಿವರಿಸಿ “ಕೇವಲ 10 ವರ್ಷ ವಯಸ್ಸಿನ ಅಷ್ಟಾವಕ್ರನು ಜನಕ ಮಹಾರಾಜನ ಆಸ್ಥಾನದ ವಿದ್ವಾಂಸ ವಂಧಿಯನ್ನು ಸೋಲಿಸಿ, ತನ್ನ ತಂದೆಯಾದ ಕಹೋಡನನ್ನು ಮರಳಿ ತರುತ್ತಾನೆ. ಆತನ ವೈಕಲ್ಯವು ಆತನ ಸಾಧನೆಗೆ ಅಡ್ಡಿಯಾಗಲಿಲ್ಲ. ದಿವ್ಯಾಂಗರೆಲ್ಲರೂ ತಮ್ಮ ಊನತೆಯನ್ನು ತೊಡಕು ಎಂದು ಭಾವಿಸದೆ ಅದನ್ನು ಸಾಧನೆಯ ಮೆಟ್ಟಿಲೆಂದು ಭಾವಿಸಬೇಕು. ಸ್ವತ: ನಾನು ನನ್ನ ದೃಷ್ಟಿ ದೋಷವನ್ನು ತೊಂದರೆಯೆಂದು ಭಾವಿಸದೆ ಅವಕಾಶವೆಂದು ಭಾವಿಸಿದ್ದೇನೆ. ನನ್ನ ಪ್ರಾಪಂಚಿಕ ಜೀವನದಿಂದ ದೂರ ಸರಿದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧನೆ ಮಾಡಲು ದಿವ್ಯಾಂಗತೆಯೇ ಕಾರಣ” ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಉಪಯುಕ್ತ ಡಿಜಿಟಲ್ ದಿನಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಕುಳಮರ್ವ ದಿವ್ಯಾಂಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಕ್ಷಮದ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ಭಟ್ ಮಾತನಾಡಿ, ನಾವು ಅಷ್ಟಾವಕ್ರನ ಸಾಧನೆ ಅಥವಾ ಕಿರಣ್ ಕುಮಾರ್ ಅವರ ಜೀವನದ ಸಾಧನೆಯಿಂದ ನಾವು ಪ್ರೇರಣೆ ಪಡೆದುಕೊಳ್ಳುವುದು ತುಂಬಾ ಇದೆ ಎಂದು ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಂಗಳೂರು ವಿಭಾಗದ ಸಹಸೇವಾ ಪ್ರಮುಖರಾದ ಭರತ್ ರಾಜ್ ಅವರು ಸಕ್ಷಮದ ಸೇವಾ ಕಾರ್ಯಗಳನ್ನು ಶ್ಲಾಘಿಸುತ್ತ ಪಂಚ ಪರಿವರ್ತನೆ ಇಂದಿನ ಸಮಾಜದ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು. ಎಂಆರ್ ಡಬ್ಲ್ಯು ಜಯಪ್ರಕಾಶ್ ದಿವ್ಯಾಂಗರನ್ನು ಸಮಾನ ದೃಷ್ಟಿಯಿಂದ ನೋಡುವುದರ ಜೊತೆಗೆ ಅವರಿಗೆ ಸೂಕ್ತ ಅವಕಾಶಗಳನ್ನು ಸಮಾಜ ರೂಪಿಸಿ ಕೊಡಬೇಕಾದ ಕರ್ತವ್ಯದ ನೆನಪುಗಳನ್ನು ಸಭಿಕರಲ್ಲಿ ಮಾಡಿದರು. ದಿವ್ಯಾಂಗ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು ಹಾಗೂ ವಾಗ್ಮಿ ಕಿರಣ್ ಕುಮಾರ್ ಅವರನ್ನು ಗೌರವಿಸಲಾಯಿತು.

ಸಕ್ಷಮ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಭಟ್ ವಾರಣಾಸಿ ಅತಿಥಿಗಳನ್ನು ಸ್ವಾಗತಿಸಿದರು. ಸಹಕಾರ್ಯದರ್ಶಿ ಭಾಸ್ಕರ್ ಹೊಸಮನೆ ವಂದನಾರ್ಪಣೆಗೈದರು. ಖಜಾಂಜಿ ಸತೀಶ್ ರಾವ್ ಸಕ್ಷಮ ಗೀತೆಯನ್ನು ಹಾಡಿದರು. ಕಾರ್ಯದರ್ಶಿ ಹರೀಶ್ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಶ್ರೀಮತೀ ಗೀತಾ ಲಕ್ಷ್ಮೀಶ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಿವ್ಯಾಂಗ ವಿದ್ಯಾರ್ಥಿ ಶ್ರೀಮನ್ಮ ಬಲ್ಲಾಳ್ ಪ್ರಾರ್ಥನೆ ಮಾಡಿದರು. ಕೈಗಳಿಲ್ಲದ ದಿವ್ಯಾಂಗ ವಿದ್ಯಾರ್ಥಿ ಪ್ರತಿಭೆ ಕೌಶಿಕ್ ಆಚಾರ್ಯ ಕಾಲುಗಳ ಸಹಾಯದಿಂದ ಚಿತ್ರ ಬಿಡಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.