ಉಳ್ಳಾಲವನ್ನು ಆಳಿದ ರಾಣಿ ಅಬ್ಬಕ್ಕ ಅವರ ಬದುಕಿನ ಮೌಲ್ಯಗಳು ನಮಗೆ ಪ್ರೇರಣಾದಾಯಕ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು ಹೇಳಿದ್ದಾರೆ.
ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ೫೦೦ ಪ್ರೇರಣದಾಯಿ ಉಪನ್ಯಾಸ ಸರಣಿಯ ಮಂಗಳೂರು ವಿಭಾಗದ ೧೦೦ ಉಪನ್ಯಾಸಗಳ ೮೨ನೇ ಎಸಳು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಕರ್ತೃತ್ವ ಶಕ್ತಿಯಿಂದ ಉಳ್ಳಾಲವನ್ನು ಮಾದರಿ ನಾಡಾಗಿ ಕಟ್ಟಿದ ರಾಣಿ ಅಬ್ಬಕ್ಕ ನಮಗೆ ಪ್ರಾತಃಸ್ಮರಣೀಯಳು ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಆಳ್ವಾಸ್ ಕಾಲೇಜು ಉಪನ್ಯಾಸಕಿ ಡಾ. ಸುಧಾರಾಣಿ ಉಳ್ಳಾಲವನ್ನು ಆಳಿದ ಹಿರಿಯ ಅಬ್ಬಕ್ಕ ಹಾಗೂ ಕಿರಿಯ ಅಬ್ಬಕ್ಕ ರಾಣಿಯರ ಬದುಕು, ಸಾಧನೆ,ಹೋರಾಟ ಮತ್ತು ಪೋರ್ಚುಗೀಸರ ವಿರುದ್ಧ ಅವರು ಪಡೆದ ಜಯ ಇತ್ಯಾದಿಗಳನ್ನು ವಿವರಿಸಿದರು. ಜಯಲಕ್ಷ್ಮಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ ಪ್ರಕಾಶಚಂದ್ರ ಶಿಶಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರವಾಸಿಗರು ಕಟ್ಟಿಕೊಟ್ಟ ಅಬ್ಬಕ್ಕ ರಾಣಿಯ ವ್ಯಕ್ತಿಚಿತ್ರದ ವಿವರ ನೀಡಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಬಸವರಾಜೇಶ್ವರಿ ದಿಡ್ಡಿಮನಿ ಸ್ವಾಗತಿಸಿದರು. ಚೈತ್ರಾ ಧನ್ಯವಾದ ಸಮರ್ಪಿಸಿದರು. ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.