ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳು ಬಿಹಾರ ರಾಜ್ಯದ ಹರ್ಷಕುಮಾರ್ (22) ಹಾಗೂ ಅಮರ್ ಕುಮಾರ್ (28) ಎಂದು ಗುರುತಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ, ತೋಕೂರು ರೈಲ್ವೇ ಸ್ಟೇಶನ್ ಬಳಿ ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತು ವಶದಲ್ಲಿ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ಜ್ಞಾನಶೇಖರ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತಕರಾದ ಶ್ರೀಕಾಂತ್ ಕೆ ನಿರ್ದೆಶನದಂತೆ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಜ್ಞಾನಶೇಖರ ತಮ್ಮ ಸಿಬ್ಬಂದಿ ಜೊತೆ ಸೆ.1ರಂದು ಆರೋಪಿತರಾದ ಬಿಹಾರ ರಾಜ್ಯದ ಹರ್ಷ ಕುಮಾರ್ ಎಂಬಾತನಿಂದ 1 ಕೆ ಜಿ 230 ಗ್ರಾಂ ಮತ್ತು ಅಮರ್ ಕುಮಾರ್ ಎಂಬಾತನಿಂದ 80 ಗ್ರಾಂ ಗಾಂಜಾ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದು, ಇದರ ಮೌಲ್ಯ ಸುಮಾರು 75,000- ರೂಪಾಯಿಗಳಷ್ಟು ಆಗಿರುತ್ತದೆ. ಆರೋಪಿತರು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ 2 ಮೊಬೈಲ್ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬಾತನು ಬಿಹಾರದ ಪಟ್ನಾದಲ್ಲಿ ಮೀಶೋ ಮತ್ತು ಫ್ಲಿಫ್ ಕಾರ್ಟ್ ಹಬ್ ನಲ್ಲಿ ಮತ್ತು ಇನ್ನೊಬ್ಬಾತ ದೆಹಲಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಆರೋಪಿಗಳ ವಿರುದ್ದ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.