ಸಾಂಸ್ಕೃತಿಕ

“ಕಾಲ ಉರುಳದಿರುವುದೇ” – ರಚನೆ : ರಮೇಶ್ ಮೆಲ್ಕಾರ್

ಮಗುಚೋ ಮಾಡಿನ ಬಿರುಕಿನ ಗೋಡೆಯ
ಗುಡಿಸಲ ಗೂಡಿನ ಬಡ ಬಗ್ಗರು ನಾವು
ಬತ್ತಿದ ಕಣ್ಣಲಿ ಸಾಸಿರ ಸುಂದರ ಕನಸನು ಕಾಣುವ
ಹರಕು ಚಿಂದಿಯ ಒಡೆಯರು ನಾವು||೧||

ಜಾಹೀರಾತು

ಜಗಚಕ್ಷುವೆನಿಪ ಸೂರ್ಯನ ಪ್ರಖರ ಕಿರಣಕೆ
ಈ ಧರೆ ಹತ್ತಿ ಉರಿಯಲೂಬಹುದು
ಬಡತನದ ಉರಿಯ ಧಗೆ ಹತ್ತಿದರೂ ಬೆದರದು
ಶ್ವಾನವೂ ಮೂಸದ ಅಂಬಲಿ ಉಂಬ ಬಡವನೆದೆ||೨||

ಅಂಗೈ ರೇಖೆಯಿಂದಲಿ ನಾಳೆಯ ಕಾಂಬರು
ಕಾರುಣ್ಯವಿರದ ಕಲ್ಲೆದೆಯವ ಕಲ್ಲ ಮೂರುತಿಯಲಿ
ಲೋಚನಕೆ ಗೋಚರಿಸದ ದೇವರ ಕಾಂಬರು
ಹಸಿದ ಬಡವನೆದೆಯ ಸಿರಿತನವನಾರು ಕಾಂಬರು||೩||

ಕಷ್ಟ ಕಾರ್ಪಣ್ಯಗಳ ಬವಣೆಯಲಿ ದಿನ ಬೆಂದು
ತೀರವ ಸೇರದ ಈ ಜೀವನವೆಂಬ ನುಗ್ಗುನುರಿಯಾದ
ನೌಕೆಯಲಿ ಈ ತಿರುಬೋಕಿಯ ಪಯಣ
ಸಾಗುವುದೆಂತೋ ಸೇರುವುದೆಂತೋ||೪||

ನಿತ್ಯ ನಂಬಿದೆವು ಮಾಡೋ ಕಾಯಕವ
ಅನವರತನು ಅಚ್ಚರಿಗೊಳುವಂತೆ ಗೈವನು
ಈ ಬಡವನ ಸ್ವಾರ್ಥರಹಿತ ಸೇವೆಯ ಕಂಡು
ಕಾಣದ ಶಕ್ತಿಗೆ ಸಲ್ಲುವ ಪ್ರಾರ್ಥನೆ ಇದೊಂದೆ||೫||

ದುಡಿಮೆಯ ನೆಚ್ಚಿದ ಕೃತ್ರಿಮವ ಅರಿಯದ
ಹೂ ನಗೆಯ ಆಂತರ್ಯದವರು ನಾವು
ದ್ರೋಹವ ಬಗೆಯದೆ ದೈನ್ಯದಿ ಬಡತನವೆಂಬ ಭಾರದ
ನೊಗವನು ಹೆಗಲಲಿ ಹೊತ್ತು ಬಾರದ ಸುಖವ
ಹಂಬಲಿಸುವ ಬಡವರು ನಾವು||೬||

ಕೊಚ್ಚೆಯ ರಾಢಿಯಿರದ ಆಡುವ ಪ್ರತಿ ಮಾತಲೂ
ಒಲವ ಧಾರೆಯ ಹರಿಸುವ ಮುಗ್ಧ ಬಡವರು ನಾವು
ರಟ್ಟೆಯ ಕಸುವನು ನಂಬಿ ಹರಿಸುವೆವು ನೆತ್ತರ ಬೆವರನು
ಎಟುಕದಿರುವ ಆಸೆಯನು ಹುಳಿ ದ್ರಾಕ್ಷಿಯೆಂದರಿತು
ಮನದಲೇ ಮರುಗುವ ಬಡ ಮಂದಿ ನಾವು||೭||

ತೊಡುವ ವಸನದಲೂ ಸಾಸಿರ ತೂಬು
ಆಡಂಬರವಿಲ್ಲದ ನಮ್ಮ ಜೋಪಡಿಯ ತುಂಬಾ ತೂಬು
ಬಡವರಾದ ನಮ್ಮ ಎದೆಯ ತುಂಬಾ ಬಡತನದ ತೂಬು
ಇದ ಕಂಡು ಸೊರಗಿ ಹೆದರಿತು ತೂಬಿನೊಳಗ ಬರಲು
ನಾಳೆಯೆಂಬ ಸೂರ್ಯ ರಶ್ಮಿ||೮||

ಸಾಸಿರ ಸ್ವಪ್ನದ ಸರದಾರರು ನಾವು
ಕಾಣುವ ಕನಸದು ಈಡೇರಿ ನನಸಾದೀತೆ?
ಕಾರ್ಮೋಡದ ತೆರೆ ಸರಿದು ಬಡವನ ಭಾಗ್ಯವೆಂಬ
ಸ್ವರ್ಣ ರೇಖೆಯ ಮಿಂಚು ಮಿಂಚೀತೆ?
ಕಾದು ನೋಡುವ, ಕಾಲ ಉರುಳದಿರುವುದೇ!?||೯||
ರಚನೆ : ರಮೇಶ್ ಮೆಲ್ಕಾರ್

RAMESH MELKAR

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.